Mysore Dasara 2023: ಜಂಬೂಸವಾರಿಗೆ ಕ್ಷಣಗಣನೆ; ಅರಮನೆಯಲ್ಲಿ ಏನೆಲ್ಲಾ ಕಾರ್ಯಕ್ರಮ ನಡೆಯುತ್ತೆ? ಸಮಯವೇನು?
ಹೈಲೈಟ್ಸ್:
- ಈ ಬಾರಿಯ ಜಂಬೂಸವಾರಿಗೆ ಮೈಸೂರು ಸಂಪೂರ್ಣ ಸಜ್ಜಾಗಿದೆ. ಸಂಜೆ 4.40 ರಿಂದ 5 ಗಂಟೆಯೊಳಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಪೂಜೆ.
- ವಿಜಯದಶಮಿ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಜನರು ಕಾತರದಿಂದ ಕಾಯುತ್ತಿದ್ದಾರೆ.
- ಮಧ್ಯಾಹ್ನ 1.46ರಿಂದ 2.08ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆ ಬಲರಾಮ ದ್ವಾರದಲ್ಲಿರುವ ನಂದಿಧ್ವಜಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪೂಜೆ
ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಗೆ ಮೈಸೂರು ಸಂಪೂರ್ಣ ಸಜ್ಜಾಗಿದೆ. ವಿಜಯದಶಮಿ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಜನರು ಕಾತರದಿಂದ ಕಾಯುತ್ತಿದ್ದಾರೆ.
ಅ. 24 (ಮಂಗಳವಾರ) ರಂದು ಮಧ್ಯಾಹ್ನ 1.46ರಿಂದ 2.08ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆ ಬಲರಾಮ ದ್ವಾರದಲ್ಲಿರುವ ನಂದಿಧ್ವಜಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪೂಜೆ ನೆರವೇರಿಸುವರು. ಸಂಜೆ 4.40ರಿಂದ 5 ಗಂಟೆಯೊಳಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಶ್ರೀಚಾಮುಂಡೇಶ್ವರಿದೇವಿಗೆ ಪುಷ್ಪಾರ್ಚನೆ ನೆರವೇರಿಸುವರು.
25 ಸಾವಿರ ಆಸನ ವ್ಯವಸ್ಥೆ
ಜಂಬೂಸವಾರಿ ವೀಕ್ಷಿಸಲು ದೇಶ-ವಿದೇಶಗಳಿಂದ ಆಗಮಿಸಿರುವ ಪ್ರವಾಸಿಗರು ಈಗಾಗಲೇ ಮೈಸೂರಿನಲ್ಲಿ ಬೀಡುಬಿಟ್ಟಿದ್ದಾರೆ. ಜಂಬೂಸವಾರಿ ಮೆರವಣಿಗೆ ಸಾಗುವ ರಸ್ತೆ ಇಕ್ಕೆಲಗಳಲ್ಲಿಲಕ್ಷಾಂತರ ಮಂದಿ ಜಮಾವಣೆಗೊಳ್ಳಲಿರುವ ಹಿನ್ನೆಲೆಯಲ್ಲಿ ಚಾಮರಾಜೇಂದ್ರ ವೃತ್ತ ಸೇರಿ ಮೆರವಣಿಗೆ ಸಾಗುವ ಮಾರ್ಗದಲ್ಲಿ ಭದ್ರತೆ ಪರಿಶೀಲನೆ ಮಾಡಲಾಗಿದೆ. ಜನರು ರಸ್ತೆಗೆ ಇಳಿಯದಂತೆ ತಡೆ ಬೇಲಿ ನಿರ್ಮಾಣ ಮಾಡಲಾಗಿದೆ. ಈಗಾಗಲೇ ಅರಮನೆ ಎದುರು ವಿಶಾಲವಾದ ಶಾಮಿಯಾನ ಕುರ್ಚಿಗಳನ್ನು ಹಾಕಲಾಗಿದ್ದು, ಜಂಬೂಸವಾರಿ ವೀಕ್ಷಿಸಲು 25 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ.
ಅಂಬಾರಿ ಹೊರಲಿರುವ ಅಭಿಮನ್ಯು
‘‘ ವಿಜಯದಶಮಿ ದಿನ ನಡೆಯಲಿರುವ ಮೆರವಣಿಗೆಗೆ ಗಜಪಡೆ ಸಂಪೂರ್ಣ ಸಿದ್ಧವಾಗಿದೆ. ನಾಲ್ಕನೇ ಬಾರಿ ಅಭಿಮನ್ಯು ಅಂಬಾರಿ ಹೊರಲಿದ್ದಾನೆ. ಈಗಾಗಲೇ ಮರದ ಅಂಬಾರಿ, ಕುಶಾಲುತೋಪು ತಾಲೀಮು, ಮರಳು ಮೂಟೆ ತಾಲೀಮು, ಜಂಬೂಸವಾರಿ ಪುಷ್ಪಾರ್ಚನೆ ರಿಹರ್ಸಲ್ ಸೇರಿದಂತೆ ಎಲ್ಲಾ ಬಗೆಯ ತಾಲೀಮುಗಳನ್ನು ಮಾಡಲಾಗಿದೆ. ಗಜಪಡೆಯ ಎಲ್ಲಾಆನೆಗಳು ಆರೋಗ್ಯದಿಂದ ಇವೆ. ಭೀಮ, ಧನಂಜಯ ಪಟ್ಟದ ಆನೆಯಾಗಿ ಅರಮನೆ ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿವೆ,’’ ಎಂದು ಡಿಸಿಎಫ್ ಸೌರಭ್ ಕುಮಾರ್ ತಿಳಿಸಿದ್ದಾರೆ.
ಎಲ್ಲಿಂದ ಎಲ್ಲಿಗೆ ಜಂಬೂಸವಾರಿ?
ಜಂಬೂಸವಾರಿ ಮೆರವಣಿಗೆ ಹಿನ್ನೆಲೆ ಪೊಲೀಸ್ ಬಿಗಿ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ. ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ ದಸರಾ ಮೆರವಣಿಗೆ ಸಾಗಲಿದ್ದು, ಜಂಬೂಸವಾರಿ ಭದ್ರತೆಗೆ 6 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಮೈಸೂರಿಗೆ ಆಗಮಿಸಿರುವ ರಾಜ್ಯದ ವಿವಿಧ ಜಿಲ್ಲೆಗಳ ಪೊಲೀಸರು ಎಲ್ಲೆಡೆ ಹದ್ದಿನ ಕಣ್ಣಿಟ್ಟಿದ್ದಾರೆ.
2 ಲಕ್ಷಕ್ಕೂ ಹೆಚ್ಚು ಜನ
ಜಂಬೂಸವಾರಿ ಹಾಗೂ ಪಂಜಿನ ಕವಾಯತು ಕಣ್ತುಂಬಿಕೊಳ್ಳಲು ಸ್ಥಳೀಯರು, ದೇಶ-ವಿದೇಶಿಯರು ಸೇರಿ 2 ಲಕ್ಷಕ್ಕೂ ಹೆಚ್ಚು ಮಂದಿ ಸೇರುವ ನಿರೀಕ್ಷೆ ಇದೆ. ಈಗಾಗಲೇ ಗೋಲ್ಡ್ ಕಾರ್ಡ್, ವಿವಿಐಪಿ, ವಿಐಪಿ ಹಾಗೂ ಸಾಮಾನ್ಯ ಪಾಸುಗಳನ್ನು ವಿತರಿಸಲಾಗಿದೆ. ಅರಮನೆ, ಬನ್ನಿಮಂಟದ ಪ್ರವೇಶ ದ್ವಾರದಲ್ಲಿಸಿಸಿಟಿವಿ ಟಿವಿ ಕ್ಯಾಮೆರಾ, ಲೋಹದ ಶೋಧಕ ಯಂತ್ರವನ್ನು ಅಳವಡಿಸುವ ಜೊತೆಗೆ ಪ್ರತಿಯೊಬ್ಬರ ತಪಾಸಣೆ ಜವಾಬ್ದಾರಿಯನ್ನು ಆರ್ಎಎಫ್ (ರಾಪಿಡ್ ಆಕ್ಷನ್ ಫೋರ್ಸ್) ಪೊಲೀಸರಿಗೆ ನೀಡಲಾಗಿದೆ.
ಪಂಜಿನ ಕವಾಯತು ಸಿದ್ಧತೆ
ಜಂಬೂಸವಾರಿ ಮುಗಿಯುತ್ತಿದ್ದಂತೆ ರಾತ್ರಿ ಬನ್ನಿಮಂಟಪ ಮೈದಾನದಲ್ಲಿರಾತ್ರಿ 7.30ಕ್ಕೆ ಪಂಜಿನ ಕವಾಯತು ನಡೆಯಲಿದೆ. ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಕವಾಯತು ವೀಕ್ಷಿಸಿ ಗೌರವ ವಂದನೆ ಸ್ವೀಕರಿಸುವರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಚಿವ ಕೆ.ವೆಂಕಟೇಶ್ ಮೊದಲಾದವರು ಭಾಗವಹಿಸಲಿದ್ದಾರೆ. ಬಳಿಕ 2 ಗಂಟೆಗಳ ಕಾಲ ಮೈನವಿರೇಳಿಸುವ ಬೈಕ್, ಅಶ್ವಾರೋಹಿ ಪಡೆಗಳ ಸಾಹಸ ಪ್ರದರ್ಶನ ಮೂಲಕ ಹತ್ತುದಿನಗಳ ಕಾಲದ ನಾಡಹಬ್ಬಕ್ಕೆ ತೆರೆ ಬೀಳಲಿದೆ.
49 ಸ್ತಬ್ಧಚಿತ್ರ ಮೆರುಗು
ರಾಜ್ಯದ ಸಂಸ್ಕೃತಿ ಬಿಂಬಿಸುವ 49 ಸ್ತಬ್ಧಚಿತ್ರಗಳು, 95 ಕಲಾತಂಡಗಳು ಮೆರವಣಿಗೆಯ ಮೆರುಗನ್ನು ಹೆಚ್ಚಿಸಲಿವೆ. ಜಂಬೂಸವಾರಿ ಹಾಗೂ ಪಂಜಿನ ಕವಾಯತಿನ ವೆಬ್ಕಾಸ್ಟಿಂಗ್ ಹಾಗೂ ಲೈವ್ ಸ್ಕ್ರೀನಿಂಗ್ ಇರಲಿದ್ದು, ದಸರೆ ವೆಬ್ಸೈಟ್ ಮೂಲಕ ಮೊಬೈಲ್ನಲ್ಲೇ ವೀಕ್ಷಿಸಬಹುದು.