ದೀಪಾವಳಿಗೆ ಸ್ಥಳೀಯ ಉತ್ಪನ್ನ ಖರೀದಿಸಿ: ದೇಶದ ಜನರಿಗೆ ಪ್ರಧಾನಿ ಮೋದಿ ಕರೆ
ಹೈಲೈಟ್ಸ್:
- ಈ ದೀಪಾವಳಿಯಲ್ಲಿ ಸ್ಥಳೀಯವಾಗಿ ತಯಾರಿಸಿದ ಉತ್ಪನ್ನಗಳನ್ನು ಖರೀದಿಸುವಂತೆ ದೇಶದ ಜನರಿಗೆ ಕರೆ ನೀಡಿದ ಪ್ರಧಾನಿ ಮೋದಿ
- ನಂತರ ಆ ಉತ್ಪನ್ನ ಅಥವಾ ಅದರ ತಯಾರಕರೊಂದಿಗೆ ಸೆಲ್ಫಿಯನ್ನು ಕ್ಲಿಕ್ಕಿಸಿ, ‘ನಮೋ ಆ್ಯಪ್’ನಲ್ಲಿ ಪೋಸ್ವ್ ಮಾಡುವಂತೆ ಸೂಚನೆ
- ಭಾರತದ ಉದ್ಯಮಶೀಲತೆ ಮತ್ತು ಸೃಜನಶೀಲ ಮನೋಭಾವವನ್ನು ಹಬ್ಬದ ಸಂದರ್ಭದಲ್ಲಿ ಎತ್ತಿ ಹಿಡಿಯೋಣ ಎಂದ ಪ್ರಧಾನಿ
ಹೊಸದಿಲ್ಲಿ: ಈ ದೀಪಾವಳಿಯಲ್ಲಿ ಸ್ಥಳೀಯವಾಗಿ ತಯಾರಿಸಿದ ಉತ್ಪನ್ನಗಳನ್ನು ಖರೀದಿಸಿ. ನಂತರ ಆ ಉತ್ಪನ್ನ ಅಥವಾ ಅದರ ತಯಾರಕರೊಂದಿಗೆ ಸೆಲ್ಫಿಯನ್ನು ಕ್ಲಿಕ್ಕಿಸಿ, ‘ನಮೋ ಆ್ಯಪ್’ನಲ್ಲಿ ಪೋಸ್ವ್ ಮಾಡಿ ಎಂದು ದೇಶದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ (ಟ್ವಿಟರ್) ಈ ಸಂದೇಶವನ್ನು ಪ್ರಧಾನಿ ಬುಧವಾರ ಪ್ರಕಟಿಸಿದ್ದಾರೆ. ”ಈ ದೀಪಾವಳಿಯಲ್ಲಿ ನಮೋ ಅಪ್ಲಿಕೇಶನ್ನಲ್ಲಿ #VocalForLocal ಥ್ರೆಡ್ಗಳೊಂದಿಗೆ ನಿಮ್ಮ ಸೆಲ್ಫಿಯನ್ನು ಪೋಸ್ಟ್ ಮಾಡಿ. ಭಾರತದ ಉದ್ಯಮಶೀಲತೆ ಮತ್ತು ಸೃಜನಶೀಲ ಮನೋಭಾವವನ್ನು ಹಬ್ಬದ ಸಂದರ್ಭದಲ್ಲಿ ಎತ್ತಿ ಹಿಡಿಯೋಣ,” ಎಂದು ಮೋದಿ ಹೇಳಿದ್ದಾರೆ.
“ಈ ಅಭಿಯಾನ ಗಟ್ಟಿಗೊಳಿಸಲು, ಸಕಾರಾತ್ಮಕ ಮನೋಭಾವವನ್ನು ಹರಡಲು ನಿಮ್ಮ ಸ್ನೇಹಿತರು ಮತ್ತು ಕುಟುಂಬವನ್ನು ಆಹ್ವಾನಿಸಿ,” ಎಂದೂ ನರೇಂದ್ರ ಮೋದಿ ಕರೆ ನೀಡಿದ್ದಾರೆ.
”ಸ್ಥಳೀಯ ಪ್ರತಿಭೆಗಳನ್ನು ಬೆಂಬಲಿಸಲು ಡಿಜಿಟಲ್ ಮಾಧ್ಯಮದ ಶಕ್ತಿಯನ್ನು ಬಳಸೋಣ. ನಮ್ಮ ಜತೆಗಿನ ಭಾರತೀಯರ ಸೃಜನಶೀಲತೆಯನ್ನು ಪ್ರೋತ್ಸಾಹಿಸೋಣ ಮತ್ತು ನಮ್ಮ ಸಂಪ್ರದಾಯಗಳನ್ನು ಪ್ರವರ್ಧಮಾನಕ್ಕೆ ತರೋಣ,” ಎಂದು ಅವರು ಸಲಹೆ ನೀಡಿದ್ದಾರೆ.
ಅಕ್ಟೋಬರ್ನ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲೂ ಸ್ವದೇಶಿ ಉತ್ಪನ್ನಗಳನ್ನು ಮೋದಿ ಬೆಂಬಲಿಸಿದ್ದರು. ”ಸ್ಥಳೀಯರಿಗೆ ಧ್ವನಿಯಾಗಲು,” ಅವರು ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ. ಪ್ರತಿ ಬಾರಿಯಂತೆ ಈ ಬಾರಿಯೂ ಹಬ್ಬ ಹರಿದಿನಗಳಲ್ಲಿ ‘ವೋಕಲ್ ಫಾರ್ ಲೋಕಲ್’ ನಮ್ಮ ಆದ್ಯತೆಯಾಗಬೇಕು’ ಎಂದು ಹೇಳಿದ್ದರು.
”ನೀವು ಪ್ರವಾಸ ಅಥವಾ ತೀರ್ಥಯಾತ್ರೆಗೆ ಹೋದಲ್ಲೆಲ್ಲಾ ಸ್ಥಳೀಯ ಕುಶಲಕರ್ಮಿಗಳಿಂದ ತಯಾರಿಸಿದ ಉತ್ಪನ್ನಗಳನ್ನು ಖರೀದಿಸಿ ಎಂದು ನಾನು ನನ್ನ ವಿನಂತಿಯನ್ನು ಪುನರುಚ್ಚರಿಸಲು ಬಯಸುತ್ತೇನೆ,” ಎಂದಿದ್ದರು.
ಡಿಜಿಟಲ್ ಪೇಮೆಂಟ್ ಮಾಡಿ…
ವಹಿವಾಟಿನ ಸಮಯದಲ್ಲಿ ಯುಪಿಐ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಬಳಸುವಂತೆ ನಾಗರಿಕರನ್ನು ಪ್ರಧಾನಿ ಒತ್ತಾಯಿಸಿದ್ದಾರೆ. “ಸ್ಥಳೀಯ ಉತ್ಪನ್ನಗಳನ್ನು ಖರೀದಿಸುವುದರಿಂದ ಕುಶಲಕರ್ಮಿಗಳಿಗೆ ಮುಂಬರುವ ದೀಪಾವಳಿ ಹಬ್ಬದ ಹೊಳಪು ಹರಡುತ್ತದೆ,” ಎಂದು ಅಭಿಪ್ರಾಯಪಟ್ಟಿದ್ದಾರೆ.
ಭಾರತಕ್ಕೆ ಶುಭಸುದ್ದಿ!
ಇಸ್ರೇಲ್ ಯುದ್ಧ ಆರಂಭವಾದ ಬಳಿಕ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ತೀವ್ರ ಏರಿಕೆಯಾಗಿತ್ತು. ಬ್ಯಾರೆಲ್ಗೆ 90 ಡಾಲರ್ ಅನ್ನೂ ದಾಟಿತ್ತು. ಆದರೆ, ಈಗ ಪ್ರತಿ ಬ್ಯಾರೆಲ್ಗೆ 80 ಡಾಲರ್ಗಿಂತ ಕಡಿಮೆ ಮಟ್ಟಕ್ಕೆ ಇಳಿದಿದೆ. ಕಚ್ಚಾ ತೈಲದ ದೊಡ್ಡ ಆಮದುದಾರರಾಗಿರುವ ಭಾರತ ಸೇರಿದಂತೆ ಅನೇಕ ದೇಶಗಳಿಗೆ, ಈ ಬೆಳವಣಿಗೆಯು ಸಮಾಧಾನ ನೀಡುವಂತಿದೆ. ಕಚ್ಚಾ ತೈಲದ ದರ ಇಳಿಕೆಯಿಂದ ಭಾರತಕ್ಕೆ ದೊಡ್ಡ ಲಾಭವಾಗಲಿದೆ.