ಸಂಸತ್ ದಾಳಿಗೆ ನಿರುದ್ಯೋಗ, ಹಣದುಬ್ಬರ ಕಾರಣ: ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ಟೀಕೆ
ಹೈಲೈಟ್ಸ್:
- ಸಂಸತ್ ಭವನದ ಭದ್ರತಾ ವ್ಯವಸ್ಥೆ ಬಲವರ್ಧನೆಗೆ ಸ್ಪೀಕರ್ ಓಂ ಬಿರ್ಲಾ ಒತ್ತು
- ಈ ಸಂಬಂಧ ಉನ್ನತ ಮಟ್ಟದ ಸಮಿತಿ ರಚನೆ, ಶೀಘ್ರ ವರದಿ ಸಲ್ಲಿಕೆಯ ನಿರೀಕ್ಷೆ
- 14 ಸಂಸದರ ಅಮಾನತು, ಭದ್ರತಾ ಲೋಪಕ್ಕೆ ಸಂಬಂಧವಿಲ್ಲ ಎಂದು ಸ್ಪಷ್ಟನೆ
ಹೊಸದಿಲ್ಲಿ: ಲೋಕಸಭೆಯಲ್ಲಿ ಭದ್ರತಾ ಲೋಪ ಹಾಗೂ ನಾಲ್ಕು ಜನರು ಸಂಸತ್ ಕಟ್ಟಡಕ್ಕೆ ನುಗ್ಗಿ ದಾಂಧಲೆ ಎಬ್ಬಿಸಿದ ಪ್ರಕರಣದ ಹಿನ್ನೆಲೆಯಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಉನ್ನತ ಮಟ್ಟದ ತನಿಖಾ ಸಮಿತಿ ಹಾಗೂ ಭದ್ರತಾ ವ್ಯವಸ್ಥೆ ಬಲವರ್ಧನೆಗೆ ಸಮಿತಿಯೊಂದನ್ನು ರಚಿಸಿದ್ದಾರೆ. ಈ ಸಮಿತಿಯು ಸಂಸತ್ ಆವರಣದಲ್ಲಿ ಕೈಗೊಳ್ಳಬಹುದಾದ ಹೆಚ್ಚಿನ ಪ್ರಮಾಣದ ಆಧುನಿಕ ಭದ್ರತೆ ಹಾಗೂ ತಪಾಸಣೆ ವ್ಯವಸ್ಥೆಯ ಬಗ್ಗೆ ಶೀಘ್ರವೇ ಸ್ಪೀಕರ್ ಅವರಿಗೆ ವರದಿ ಸಲ್ಲಿಸಲಿದೆ.
ಸಂಸದರಿಗೆ ಪತ್ರ
ಸಮಿತಿ ರಚನೆ ಕುರಿತು ಶನಿವಾರ ಸಂಸತ್ನ ಎಲ್ಲ ಸದಸ್ಯರಿಗೆ ಪತ್ರವನ್ನು ಬರೆದಿರುವ ಸ್ಪೀಕರ್ ಬಿರ್ಲಾ ಅವರು, ” ಸಂಸತ್ಗೆ ನುಗ್ಗಿ ದಾಂಧಲೆ ಕೃತ್ಯಕ್ಕೂ ಹಾಗೂ 14 ಸಂಸತ್ ಸದಸ್ಯರ ಅಮಾನತು ಕ್ರಮಕ್ಕೆ ಯಾವುದೇ ರೀತಿ ಸಂಬಂಧವಿಲ್ಲ. ಎರಡೂ ಬೇರೆಯ ಕಾರಣ ಹೊಂದಿವೆ,” ಎಂದು ಸ್ಪಷ್ಟಪಡಿಸಿದ್ದಾರೆ.
” ಕೆಲವು ರಾಜಕೀಯ ಪಕ್ಷಗಳು ಹಾಗೂ ನಾಯಕರು ಸಂಸದರ ಅಮಾನತು ಕ್ರಮಕ್ಕೆ ಲೋಕಸಭೆಯಲ್ಲಿ ದಾಂಧಲೆ ಕೃತ್ಯವನ್ನು ತಳುಕು ಹಾಕಿ, ತಪ್ಪು ಸಂದೇಶವನ್ನು ಸಮಾಜಕ್ಕೆ ರವಾನಿಸುತ್ತಿದ್ದಾರೆ. ಇದರಿಂದಾಗಿ ಸಂಸತ್ ಕಲಾಪಗಳಲ್ಲಿ ಅರ್ಥಪೂರ್ಣ ಚರ್ಚೆಯ ಬದಲು ಗೊಂದಲ ಉಂಟಾಗಿದೆ. ಸಂಸತ್ನ ಘನತೆಗೆ ಧಕ್ಕೆ ಉಂಟಾಗುತ್ತಿದೆ. ಇದು ದುರದೃಷ್ಟಕರ ಸಂಗತಿ,” ಎಂದು ಪತ್ರದಲ್ಲಿ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
“ಪ್ರತಿಪಕ್ಷಗಳ ‘ಐಎನ್ಡಿಐಎ’ ಕೂಟವು ಲೋಕಸಭೆಗೆ ನುಗ್ಗಿ ದಾಂಧಲೆ ನಡೆಸಿದವರ ರಕ್ಷಣೆಗೆ ನಿಂತಿದೆ. ಯಾಕೆಂದರೆ, ದಾಂಧಲೆ ನಡೆಸಿದವರ ಜತೆಗಿನ ತಮ್ಮ ಸಂಪರ್ಕ ಬಯಲಾಗುವ ಭೀತಿ ಅವರನ್ನು ಕಾಡುತ್ತಿದೆ” ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಟೀಕಿಸಿದ್ದಾರೆ.
ನಿರುದ್ಯೋಗ, ಹಣದುಬ್ಬರ ಕುರಿತ ಅಸಹನೆಯೇ ಕಾರಣ: ರಾಹುಲ್ ಗಾಂಧಿ
”ಯುವಕರು ಲೋಕಸಭೆ ಕಲಾಪಕ್ಕೆ ನುಗ್ಗಿ ಆತಂಕ ಸೃಷ್ಟಿಸಿದ ಘಟನೆಗೆ ಹಣದುಬ್ಬರ, ನಿರುದ್ಯೋಗ ಸಮಸ್ಯೆಯಿಂದ ಬೇಸತ್ತು ಅವರು ಸರಕಾರದ ವಿರುದ್ಧ ಅಸಹನೆಗೊಂಡಿರುವುದು ಸ್ಪಷ್ಟವಾಗಿದೆ,” ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.
ಘಟನೆ ಕುರಿತು ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, ”ಇದೊಂದು ಭಾರಿ ಭದ್ರತಾ ವೈಫಲ್ಯ ಎಂಬುದು ನಿಜ. ಅದನ್ನು ನಾನೂ ಒಪ್ಪಿಕೊಳ್ಳುತ್ತೇನೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಸರಕಾರ ನೀತಿಗಳಿಂದ ದೇಶದಲ್ಲಿ ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ. ಯುವಕರು ಬೇಸತ್ತು ಸರಕಾರದ ಗಮನ ಸೆಳೆಯಲು ಈ ರೀತಿ ಮಾಡಿದ್ದಾರೆ,” ಎಂದು ಹೇಳಿದ್ದಾರೆ.