Fali S Nariman: ಕಾವೇರಿ ವಿಚಾರದಲ್ಲಿ ಕರ್ನಾಟಕದ ಪರ ವಕಾಲತ್ತು ವಹಿಸಲು ನಿರಾಕರಿಸಿದ್ದ ನಾರಿಮನ್
ಹೈಲೈಟ್ಸ್:
- ಕಾವೇರಿ ವಿಚಾರದಲ್ಲಿ ರಾಜ್ಯದ ಪರ ದಶಕಗಳ ಕಾಲ ವಕೀಲರಾಗಿದ್ದ ಫಾಲಿ ಎಸ್ ನಾರಿಮನ್ ನಿಧನ
- ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವಿನ ದಶಕಗಳ ಹಳೆಯ ಕಾವೇರಿ ನದಿ ನೀರು ಹಂಚಿಕೆ ವಿವಾದ
- ಕರ್ನಾಟಕ, ನ್ಯಾಯಾಲಯದ ಆದೇಶ ಪಾಲಿಸದ ಹಿನ್ನಲೆಯಲ್ಲಿ ವಾದ ಮಂಡಿಸಲು ನಿರಾಕರಿಸಿದ್ದ ನಾರಿಮನ್
ಸರ್ವೋಚ್ಚ ನ್ಯಾಯಾಲಯದ ಹಿರಿಯ ವಕೀಲ, ಖ್ಯಾತ ನ್ಯಾಯ ಶಾಸ್ತ್ರಜ್ಞ ಮತ್ತು ಕಾವೇರಿ ವಿಚಾರದಲ್ಲಿ ರಾಜ್ಯದ ಪರ ದಶಕಗಳ ಕಾಲ ವಕೀಲರಾಗಿದ್ದ ಫಾಲಿ ಎಸ್ ನಾರಿಮನ್ ಇಂದು ( ಫೆ 21) ಬೆಳಗ್ಗೆ ನಿಧನರಾಗಿದ್ದಾರೆ. ನಾಡಿನ ಗಣ್ಯರು ನಾರಿಮನ್ ನಿಧನಕ್ಕೆ ( Fali S Nariman ) ಸಂತಾಪ ಸೂಚಿಸಿದ್ದಾರೆ. 2016ರಲ್ಲಿ ಕಾವೇರಿ ವಿಚಾರಕ್ಕೆ ಸಂಬಂಧಿಸಿದಂತೆ ನಾರಿಮನ್ ರಾಜ್ಯದ ಪರ ವಕಾಲತ್ತು ವಹಿಸಲು ನಿರಾಕರಿಸಿದ್ದ ವಿದ್ಯಮಾನವೊಂದು ಹೀಗಿತ್ತು:
ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವಿನ ದಶಕಗಳ ಹಳೆಯ ಕಾವೇರಿ ನದಿ ನೀರು ಹಂಚಿಕೆಯ ವಿವಾದದ (Cauvery Water Dispute) ಕುರಿತು ಸುಪ್ರೀಂ ಕೋರ್ಟ್ನ ಐತಿಹಾಸಿಕ ತೀರ್ಪುನ್ನು ನೀಡಿತ್ತು. ಆ ವೇಳೆ, ನಾರಿಮನ್ ಅವರು ಕರ್ನಾಟಕದ ಪರ ವಾದ ಮಂಡಿಸುವುದನ್ನು ಮುಂದುವರಿಸಲು ನಿರಾಕರಿಸಿದ್ದರು.
ಸೆಪ್ಟಂಬರ್ 2016ರಲ್ಲಿ ಕಾವೇರಿ ವಿಚಾರಕ್ಕೆ ಸಂಬಂಧಿಸಿದಂತೆ ಆರು ಸಾವಿರ ಕ್ಯೂಸೆಕ್ಸ್ ನೀರನ್ನು ತಮಿಳುನಾಡಿಗೆ ಬಿಡಬೇಕೆಂದು ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಆದರೆ, ಈ ಆದೇಶವನ್ನು ಕರ್ನಾಟಕ ಆ ವೇಳೆ ಪಾಲಿಸದ ಹಿನ್ನಲೆಯಲ್ಲಿ ನಾರಿಮನ್ ರಾಜ್ಯದ ಪರವಾಗಿ ವಾದ ಮಂಡಿಸದೇ ಇರುವ ನಿರ್ಧಾರಕ್ಕೆ ಬಂದಿದ್ದರು.
ಸೆಪ್ಟಂಬರ್ 2016 ಕಾನೂನಾತ್ಮಕವಾಗಿ ಕರ್ನಾಟಕಕ್ಕೆ ಬಹಳ ದೊಡ್ಡ ಹೊಡೆತ ನೀಡಿದ್ದ ತಿಂಗಳಾಗಿತ್ತು. ನ್ಯಾಯಾಲಯದ ಐದು ಆದೇಶಗಳು ರಾಜ್ಯದ ವಿರುದ್ದವಾಗಿ ಬಂದಿದ್ದವು. ರಾಜ್ಯ ಭೀಕರ ಬರ ಎದುರಿಸುತ್ತಿದ್ದ ಸಂದರ್ಭದಲ್ಲಿ ಕೋರ್ಟ್ ಆದೇಶವು ರಾಜ್ಯಕ್ಕೆ ಮರ್ಮಾಘಾತ ನೀಡಿತ್ತು. ಆ ವೇಳೆ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಕಾನೂನು ಸಚಿವರಾಗಿದ್ದ ಟಿ.ಬಿ.ಜಯಚಂದ್ರ, ನಾರಿಮನ್ ಅವರನ್ನು ಮತ್ತೆ ರಾಜ್ಯದ ಪರವಾಗಿ ವಾದ ಮಂಡಿಸುವಂತೆ ಮನವೊಲಿಸಲು ಪ್ರಯತ್ನಿಸುವುದಾಗಿ ಹೇಳಿದ್ದರು.
ಸುಪ್ರೀಂಕೋರ್ಟ್ ಆದೇಶವನ್ನು ರಾಜ್ಯ ಪಾಲಿಸದೇ ಇದ್ದದ್ದು ಮತ್ತು ನಾರಿಮನ್ ಇದರಿಂದ ಕುಪಿತಗೊಂಡು ಕರ್ನಾಟಕದ ಪರ ವಾದ ಮಂಡಿಸದೇ ಇರುವ ತೀರ್ಮಾನಕ್ಕೆ ಬಂದಿದ್ದನ್ನು, ಮುಖ್ಯ ನ್ಯಾಯಮೂರ್ತಿ ಆಗಿದ್ದ ದೀಪಕ್ ಮಿಶ್ರಾ , ನ್ಯಾಯಪೀಠಕ್ಕೆ ಬರೆದಿದ್ದ 465 ಪುಟಗಳ ತೀರ್ಪಿನಲ್ಲೂ ಉಲ್ಲೇಖಿಸಿದ್ದರು. ನ್ಯಾಯಮೂರ್ತಿಗಳಾದ ಅಮಿತವ್ ರಾಯ್ ಮತ್ತು ಎ.ಎಂ. ಖಾನ್ವಿಲ್ಕರ್ ಅವರನ್ನೊಳಗೊಂಡ ಪೀಠವು, ನಾರಿಮನ್ ಅವರು ಈ ವಿಷಯದ ಬಗ್ಗೆ ತೆಗೆದುಕೊಂಡ ನಿಲುವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದರು.
ಸೆಪ್ಟೆಂಬರ್ 30, 2016 ರಂದು ಈ ಪ್ರಕರಣ ಮತ್ತೆ ವಿಚಾರಣೆಗೆ ಬಂದಾಗ, ನಾರಿಮನ್ ಅವರು ಎರಡು ಪತ್ರಗಳನ್ನು ಸುಪ್ರೀಂಕೋರ್ಟಿಗೆ ಸಲ್ಲಿಸಿದ್ದರು ಮತ್ತು ಇದನ್ನು ದಾಖಲೆಯಾಗಿ ತೆಗೆದುಕೊಳ್ಳುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆ ಎರಡು ಪತ್ರಗಳಲ್ಲಿ ಒಂದು ಸುಪ್ರೀಂಕೋರ್ಟ್ ಆದೇಶ ಪಾಲನೆ ಹಿನ್ನಲೆಯಲ್ಲಿ ಸರ್ವಪಕ್ಷಗಳ ಸಭೆಯನ್ನು ಸಿಎಂ ಸಿದ್ದರಾಮಯ್ಯ ಕರೆದು ತೆಗೆದುಕೊಂಡ ಸರ್ವಾನುಮತದ ನಿರ್ಣಯ.
ಇನ್ನೊಂದು, ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಪಾಲಿಸುವವರೆಗೆ ಕರ್ನಾಟಕದ ಪರ ವಾದ ಮಂಡಿಸುವುದಿಲ್ಲ ಎಂದು ರಾಜ್ಯ ಸರ್ಕಾರಕ್ಕೆ ಬರೆದಿದ್ದ ಪತ್ರವನ್ನು ನಾರಿಮನ್ ಕೋರ್ಟಿಗೆ ನೀಡಿದ್ದರು. ವಕೀಲ ವೃತ್ತಿಯ ಕಾರ್ಯತತ್ಪರೆಯನ್ನು ನೀವು ಎತ್ತಿ ಹಿಡಿದಿದ್ದೀರಿ ಎಂದು ಸುಪ್ರೀಂಕೋರ್ಟ್ ನಾರಿಮನ್ ಅವರಿಗೆ ಶಹಬ್ಬಾಸ್ ಗಿರಿ ನೀಡಿತ್ತು. ಆ ವೇಳೆ ಸರ್ಕಾರದ ಟಿಪ್ಪಣಿಯನ್ನು ಮಾತ್ರ ನಾರಿಮನ್ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ್ದರೇ ವಿನಃ, ರಾಜ್ಯದ ಪರ ವಾದ ಮಂಡಿಸಿರಲಿಲ್ಲ.