Lok Sabha Election Flash Back : 2 ಬಾರಿ ಚುನಾವಣೆಗೆ ಸ್ಪರ್ಧಿಸಿ, ದೆಹಲಿ ಸಹವಾಸ ಬೇಡ ಅಂದಿದ್ದ ಸಿದ್ದರಾಮಯ್ಯ
ಹೈಲೈಟ್ಸ್:
- 2 ಬಾರಿ ಚುನಾವಣೆಗೆ ಸ್ಪರ್ಧಿಸಿ ಗೆಲ್ಲಲು ವಿಫಲವಾಗಿದ್ದ ಸಿಎಂ ಸಿದ್ದರಾಮಯ್ಯ
- ದೆಹಲಿ ರಾಜಕಾರಣ ನನಗೆ ಆಗಿ ಬರಲ್ಲ ಎಂದು ಪಾರ್ಲಿಮೆಂಟ್ ಚುನಾವಣೆಗೆ ಸ್ಪರ್ಧಿಸದ ಸಿಎಂ
- ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಹೆಚ್ಚಿನ ಸೀಟ್ ಗೆಲ್ಲಿಸುವ ಅನಿವಾರ್ಯತೆ
ಹದಿನೆಂಟನೇ ಲೋಕಸಭಾ ಚುನಾವಣೆಗೆ ಆಖಾಡ ಸಿದ್ದವಾಗಿದೆ, ಇನ್ನೆರಡು ದಿನಗಳಲ್ಲಿ ಕರ್ನಾಟಕದ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇರುವ ಗಡುವು ಮುಗಿಯಲಿದೆ. ಈಗಾಗಲೇ ಹಲವು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿಯಾಗಿದೆ. ನಾಮಪತ್ರ ಹಿಂದಕ್ಕೆ ಪಡೆಯಲು ಏಪ್ರಿಲ್ ಎಂಟು ಕೊನೆಯ ದಿನವಾಗಿದೆ, ಚುನಾವಣೆ ಏಪ್ರಿಲ್ 26ಕ್ಕೆ ನಡೆಯಲಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತ ನಂತರ ಜುಲೈ 3, 2019ರಂದು ಎಐಸಿಸಿ ಅಧ್ಯಕ್ಷ ಹುದ್ದೆಗೆ ರಾಹುಲ್ ಗಾಂಧಿ ರಾಜೀನಾಮೆ ನೀಡಿದ್ದರು. ಕಾಂಗ್ರೆಸ್ ಮತ್ತು ಯುಪಿಎ ಮೈತ್ರಿಕೂಟದ ಸದಸ್ಯ ಪಕ್ಷದವರ ಒತ್ತಡಕ್ಕೆ ಮಣಿಯದ ರಾಹುಲ್, ರಾಜೀನಾಮೆ ಹಿಂದಕ್ಕೆ ಪಡೆಯಲು ನಿರಾಕರಿಸಿದ್ದರು.
ಆ ವೇಳೆ ಸೋನಿಯಾ ಗಾಂಧಿ ಎಐಸಿಸಿಯ ಹಂಗಾಮೀ ಅಧ್ಯಕ್ಷೆಯಾಗಿದ್ದ ವೇಳೆ, ಮುಂದಿನ ಅಧ್ಯಕ್ಷರು ಯಾರು ಎನ್ನುವ ಚರ್ಚೆ ಜೋರಾಗಿ ನಡೆಯುತ್ತಿತ್ತು. ಆಗ, ಕರ್ನಾಟಕದಲ್ಲಿ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರವಿತ್ತು. ಬಿಜೆಪಿ ವಿರುದ್ದ ಅಂಕಿಅಂಶದ ಸಮೇತ ಮಾತನಾಡುವಲ್ಲಿ ಪ್ರಸಿದ್ದರಾಗಿದ್ದ ಸಿದ್ದರಾಮಯ್ಯನವರೇ ಎಐಸಿಸಿ ಅಧ್ಯಕ್ಷರಾಗಬೇಕು ಎನ್ನುವ ಚರ್ಚೆಯೂ ಮುನ್ನಲೆಗೆ ಬಂದಿತ್ತು.
ನನ್ನದು ಏನಿದ್ದರೂ ರಾಜ್ಯ ರಾಜಕಾರಣ, ದೆಹಲಿ ರಾಜಕೀಯ, ಲೋಕಸಭಾ ಚುನಾವಣೆ ಎಲ್ಲಾ ನನಗೆ ಆಗಿ ಬರುವುದಿಲ್ಲ ಎಂದು ಸಿದ್ದರಾಮಯ್ಯ ನಯವಾಗಿ ಅಧ್ಯಕ್ಷ ಹುದ್ದೆಯನ್ನು ನಿರಾಕರಿಸಿದ್ದರು. ಸಿದ್ದರಾಮಯ್ಯ ಜೆಡಿಎಸ್ ನಲ್ಲಿ ಮತ್ತು ಬೇರೊಂದು ಪಕ್ಷದಲ್ಲಿ ಇದ್ದ ವೇಳೆ ಎರಡು ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರು.
ಅಸಲಿಗೆ ಸಿದ್ದರಾಮಯ್ಯ ಎರಡು ಬಾರಿ ಲೋಕಸಭೆಗೆ ಸ್ಪರ್ಧಿಸಿದ್ದರು, ಆದರೆ ಎರಡೂ ಬಾರಿ ಸೋಲು ಅನುಭವಿಸಿದ್ದರು. 1983ರ ಅಸೆಂಬ್ಲಿ ಚುನಾವಣೆಯಲ್ಲಿ ಭಾರತೀಯ ಲೋಕದಳದಿಂದ ಮೈಸೂರಿನ ಚಾಮುಂಡೇಶ್ವರಿ ಅಸೆಂಬ್ಲಿ ಕ್ಷೇತ್ರದಿಂದ ಸಿದ್ದರಾಮಯ್ಯ ಗೆದ್ದಿದ್ದರು. ಅದಕ್ಕೂ ಮುನ್ನ 1980ರ ಲೋಕಸಭಾ ಚುನಾವಣೆಯಲ್ಲಿ ಮೈಸೂರು ಲೋಕಸಭಾ ಕ್ಷೇತ್ರದಿಂದ ಜೆಎನ್ಪಿ (ಎಸ್) ಟಿಕೆಟಿನಿಂದ ಸಿದ್ದರಾಮಯ್ಯ ಸ್ಪರ್ಧಿಸಿದ್ದರು.
ಆ ಚುನಾವಣೆಯಲ್ಲಿ ಸಿದ್ದರಾಮಯ್ಯ ಠೇವಣಿ ಕಳೆದುಕೊಂಡಿದ್ದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ( INC – Indira Gandhi ) ಅಭ್ಯರ್ಥಿಯಾಗಿದ್ದ ಎಂ. ರಾಜಶೇಖರ ಮೂರ್ತಿ ತಮ್ಮ ಪ್ರತಿಸ್ಪರ್ಧಿ ( INC – Urs ) ಅಭ್ಯರ್ಥಿ ಎಚ್.ಡಿ.ತುಳಸೀದಾಸ್ ದಾಸಪ್ಪ ಅವರ ವಿರುದ್ದ 83,036 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಸಿದ್ದರಾಮಯ್ಯ ಕೇವಲ 8,300 ಮತಗಳನ್ನಷ್ಟೇ ಪಡೆದಿದ್ದರು.
ಇದಾದ ನಂತರ 1991ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಮತ್ತೆ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಎಚ್.ಡಿ.ದೇವೇಗೌಡರ ನೇತೃತ್ವದ ಜನತಾದಳದಿಂದ ಸ್ಪರ್ಧಿಸಿದ್ದ ಸಿದ್ದರಾಮಯ್ಯ ಮತ್ತೆ ಸೋಲನ್ನು ಅನುಭವಿಸಿದ್ದರು. ಆ ಬಾರಿ ಕಾಂಗ್ರೆಸ್ಸಿನ ಬಸವರಾಜ್ ಪಾಟೀಲ್ ಅನ್ವರಿ ವಿರುದ್ದ ಸೋಲುಂಡಿದ್ದರು.