ಕೇವಲ ₹200ಕ್ಕೆ ಸ್ಟಂಟ್ ಮಾಡ್ತಾಯಿದ್ದ ದುನಿಯಾ ವಿಜಯ್ ಹೀರೋ ಆಗಿದ್ದು ಹೇಗೆ ಗೊತ್ತಾ..?
Actor Duniya Vijay: ಕರಿಚಿರತೆ, ಸ್ಯಾಂಡಲ್ವುಡ್ ಸಲಗ, ದುನಿಯಾ ವಿಜಿ ಹೀಗೆ ಕರೆಸಿಕೊಳ್ಳುವ ದುನಿಯಾ ವಿಜಯ್ ಅಲಿಯಾಸ್ ಬಿ.ಆರ್.ವಿಜಯ್ ಕುಮಾರ್ ಕನ್ನಡಚಿತ್ರರಂಗದಲ್ಲಿ ಹಲವಾರು ಸೂಪರ್ ಡೂಪರ್ ಹಿಟ್ ಸಿನಿಮಾಗಳನ್ನು ನೀಡಿದವರು. ತಮ್ಮ ವಿಭಿನ್ನ ನಟನೆಯ ಮೂಲಕ ದುನಿಯಾ ವಿಜಯ್ ಲಕ್ಷಾಂತರ ಅಭಿಮಾನಿಗಳು ಸಂಪಾದಿಸಿದ್ದಾರೆ. ಇಂದು ಸ್ಟಾರ್ ನಟರಾಗಿ ಗುರುತಿಸಿಕೊಂಡಿರುವ ಈ ನಟ ಆರಂಭದಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡಿಕೊಂಡಿದ್ದರು. ಕೇವಲ 200 ರೂ.ಗೆ ಸ್ಟಂಟ್ ಮಾಡ್ತಾಯಿದ್ದ ದುನಿಯಾ ವಿಜಯ್ ಸ್ಟಾರ್ ನಟನಾಗಿ ಬೆಳೆದದ್ದೇ ರೋಚಕ. ಚಿತ್ರರಂಗದಲ್ಲಿ ಅವರ ವೃತ್ತಿಜೀವನ ಯಾರೂ ಊಹಿಸದ ರೀತಿಯಲ್ಲಿದೆ.
ದುನಿಯಾ ವಿಜಯ್ 1974ರ ಜನವರಿ 20ರಂದು ಬೆಂಗಳೂರಿನಲ್ಲಿ ಜನಿಸಿದರು. ಬಡ ಕುಟುಂಬದಲ್ಲಿ ಬೆಳೆದುಬಂದ ಇವರಿಗೆ ಬಾಲ್ಯದಿಂದಲೂ ಸಿನಿಮಾದಲ್ಲಿ ನಟಿಸುವ ಆಸೆಯಿತ್ತು. ಅದರಂತೆ ಕೆಲ ಸಿನಿಮಾಗಳಲ್ಲಿ ಚಿಕ್ಕ-ಚಿಕ್ಕ ಪಾತ್ರಗಳಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಕಿಚ್ಚ ಸುದೀಪ್ ಅಭಿನಯದ ರಂಗ SSLC ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ನಟಿಸುವ ಮೂಲಕ ಸ್ಯಾಂಡಲ್ವುಡ್ ಪ್ರವೇಶಿಸಿದರು. ನಂತರ ಮೊನಲಿಸಾ, ರಿಷಿ, ರಾಕ್ಷಸ, ಜೋಗಿ, ಡೆಡ್ಲಿ ಸೋಮ, ಶ್ರೀ, ಕಲ್ಲಾರಳಿ ಹೂವಾಗಿ, ಅಂಬಿ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಚಿಕ್ಕ-ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರ ಜೋಗಿ ಸಿನಿಮಾದಲ್ಲಿ ರೌಡಿ ಪಾತ್ರದಲ್ಲಿಯೂ ಮಿಂಚಿದ್ದರು.
2007ರಲ್ಲಿ ದುನಿಯಾ ಸೂರಿ ನಿರ್ದೇಶನದಲ್ಲಿ ಮೂಡಿಬಂದ ‘ದುನಿಯಾ’ ಸಿನಿಮಾದಲ್ಲಿ ನಾಯಕನಾಗಿ ನಟಿಸಿದರು. ಈ ಚಿತ್ರ ಬ್ಲಾಕ್ಬಸ್ಟರ್ ಹಿಟ್ ಆಗುವುದರ ಜೊತೆಗೆ ವಿಜಯ್ಗೆ ಸ್ಟಾರ್ಗಿರಿ ಪಟ್ಟವನ್ನು ತಂದುಕೊಟ್ಟಿತು. ಈ ಸಿನಿಮಾದ ಅದ್ಭುತ ನಟನೆಯಿಂದ ‘ದುನಿಯಾ ವಿಜಯ್ʼ ಎಂದೇ ಖ್ಯಾತಿ ಗಳಿಸಿದರು. ಈ ಸಿನಿಮಾಗೆ ಅತ್ಯುತ್ತಮ ನಟ ಫಿಲ್ಮಫೇರ್ ಪ್ರಶಸ್ತಿ ಕೂಡ ಪಡೆದುಕೊಂಡರು. ದುನಿಯಾ ನಂತರ ವಿಜಯ್ ಅನೇಕ ಸಿನಿಮಾಗಳಲ್ಲಿ ನಾಯಕನಾಗಿ ಅಭಿನಯಿಸಿದರು. ಚಂಡ, ಜರಾಸಂಧ, ಜಂಗ್ಲಿ, ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್, ಜಯಮ್ಮನ ಮಗ, ದನ ಕಾಯೋನು, RX ಸೂರಿ, ಸಲಗ ಹೀಗೆ ಹಲವು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡರು.
ಇಂದು ಸ್ಟಾರ್ ನಟ ಎನಿಸಿಕೊಂಡಿರುವ ದುನಿಯಾ ವಿಜಯ್ ಓರ್ವ ಸ್ಟಂಟ್ ಆರ್ಟಿಸ್ಟ್ ಆಗಿ ಸಿನಿಮಾರಂಗಕ್ಕೆ ಪ್ರವೇಶಿಸಿದ್ದರು. ಬಾಡಿ ಬಿಲ್ಡಿಂಗ್ ಮಾಡುತ್ತಾ ತಮ್ಮ ನಟನಾಗುವ ಕನಸನ್ನು ಬೆನ್ನುಹತ್ತಿದ ವಿಯಯ್, ನಾನು ಸ್ಟಂಟ್ ಆರ್ಟಿಸ್ಟ್ ಆಗಬಾರದು, ಓರ್ವ ಉತ್ತಮ ಕಲಾವಿದನಾಗಿ ಗುರುತಿಸಿಕೊಳ್ಳಬೇಕೆಂದು ಆರಂಭದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿದರು. ಪ್ರತಿನಿತ್ಯ ಕಷ್ಟಪಟ್ಟು ಕೆಲಸ ಮಾಡುತ್ತಿದ್ದ ದುನಿಯಾ ವಿಜಯ್ ಕಾಸು ಕಾಸಿಗೂ ಪರದಾಡುತ್ತಿದ್ದರು. ಬರುವ ಅಲ್ವಸ್ವಲ್ಪ ಹಣದಲ್ಲಿಯೇ ತಮ್ಮ ಸಂಸಾರವನ್ನು ನೋಡಿಕೊಳ್ಳುವ ಮಹತ್ತರ ಜವಾಬ್ದಾರಿ ದುನಿಯಾ ವಿಜಯ್ ಮೇಲಿತ್ತು. ಸ್ಟಂಟ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾಗ ಬರುತ್ತಿದ್ದ ಅಲ್ಪಸ್ವಲ್ಪ ದುಡಿಮೆಗೆ ಇವರು ಹಗಲು ರಾತ್ರಿ ಕಷ್ಟಪಡಬೇಕಿತ್ತು. ಮೈ-ಕೈ ಮುರಿಸಿಕೊಂಡು ದುಡಿಯುತ್ತಿದ್ದ ವಿಯಯ್ ನಟನಾಗುವ ಆಸೆಗೆ ಬಂದ ಎಲ್ಲಾ ನೋವನ್ನು ನುಂಗಿಕೊಂಡು ಕನಸು ಕಾಡುತ್ತಿದ್ದರು.
ಹೀಗೆ ಹಲವಾರು ಸಿನಿಮಾಗಳಲ್ಲಿ ಕ್ಯಾಮೆರಾ ಕಣ್ಣಿನ ಹಿಂದೆ ಸ್ಟಂಟ್ ಮಾಸ್ಟರ್ ಆಗಿ ಕೆಲಸ ಮಾಡುತ್ತಿದ್ದ ದುನಿಯಾ ವಿಜಯ್, ಕಿಚ್ಚ ಸುದೀಪ್ ಅಭಿನಯದ ರಂಗ SSLC ಸಿನಿಮಾದಿಂದ ಮೊಟ್ಟ ಮೊದಲ ಬಾರಿಗೆ ಪೂರ್ಣ ಪಾತ್ರದಲ್ಲಿ ಅಭಿನಯಿಸಿದರು. ಸೂರಿಯವರ ದುನಿಯಾ ಸಿನಿಮಾಗೆ ವಿಜಯ್ ಅವರನ್ನು ನಾಯಕನಾಗಿ ಆಯ್ಕೆ ಮಾಡಿಕೊಳ್ಳುವಂತೆ ಸ್ಯಾಂಡಲ್ವುಡ್ ಸ್ಟಾರ್ ಡೈರೆಕ್ಟರ್ ಯೋಗರಾಜ್ ಭಟ್ ಸಲಹೆ ನೀಡಿದ್ದರಂತೆ. ಹೀಗಾಗಿ ಸೂರಿ ಅವರು ದುನಿಯಾ ಸಿನಿಮಾಗೆ ವಿಜಯ್ ಅವರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಚಿತ್ರವನ್ನು ತೆರೆಗೆ ತರಲು ಸೂರಿ ಹಾಗೂ ವಿಜಯ್ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಯಾಕಂದ್ರೆ ಬಜೆಟ್ ಸಮಸ್ಯೆಯಿಂದ ಈ ಚಿತ್ರದ ಚಿತ್ರೀಕರಣವೇ ನಿಂತು ಹೋಗಿರುತ್ತದೆ. ಆದರೆ ಯಾವುದಕ್ಕೂ ಹೆದರದ ವಿಜಯ್, ಏನಾದರೂ ಆಗಲಿ, ಸಿನಿಮಾವನ್ನು ತೆರೆಗೆ ತರಲೇಬೇಕು ಅಂತಾ ಹೋರಾಟ ನಡೆಸಿ ಅದರಲ್ಲಿ ಯಶಸ್ವಿಯೂ ಆಗುತ್ತಾರೆ. ಆದರೆ ಇದಕ್ಕೆ ಅವರು ತುಂಬಾ ಕಷ್ಟ ಮತ್ತು ನೋವು ಸಹ ಅನುಭವಿಸುತ್ತಾರೆ.
2007ರಲ್ಲಿ ಬಿಡುಗಡೆಯಾದ ದುನಿಯಾ ಸಿನಿಮಾ ಬ್ಲಾಕ್ ಬಾಸ್ಟರ್ ಹಿಟ್ ಆಗುವ ಮೂಲಕ ವಿಜಯ್ ಅವರ ಜೀವನವನ್ನೇ ಬದಲಿಸಿಬಿಟ್ಟಿತು. ಕನ್ನಡ ಚಿತ್ರಂಗದಲ್ಲಿ ಈ ಸಿನಿಮಾ ಹೊಸ ಚರಿತ್ರೆಯನ್ನೇ ಸೃಷ್ಟಿಸಿತು. ಈ ಸಿನಿಮಾದ ಅಭಿನಯಕ್ಕಾಗಿ ದುನಿಯಾ ವಿಜಯ್ಗೆ ಸಾಕಷ್ಟ ಪ್ರಶಸ್ತಿ ಪುರಸ್ಕಾರಗಳು ದೊರೆತವು. ಹೀಗೆ ನಟಿಸಿದ ಮೊದಲ ಸಿನಿಮಾದಲ್ಲೇ ವಿಜಯ್ ಸ್ಟಾರ್ ಆಗಿ ಗುರುತಿಸಿಕೊಂಡರು. ಈ ಮೂಲಕ ಕೇವಲ ಸ್ಟಂಟ್ ಬಾಯ್ ಆಗಿದ್ದ ದುನಿಯಾ ವಿಜಯ್ ಇಂದು ಸ್ಟಾರ್ ನಟರಾಗಿ ಗುರುತಿಸಿಕೊಂಡಿದ್ದಾರೆ. ಬೇರೆ ಭಾಷೆಯ ಸಿನಿಮಾಗಳಲ್ಲಿಯೂ ಅದ್ಭುತವಾಗಿ ನಟಿಸುವ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ದುನಿಯಾ ಸಿನಿಮಾ ಬಳಿಕ ವಿಜಯ್ ಅವರ ಜೀವನವೇ ಬದಲಾಗಿ ಹೋಯಿತು. ಸುಮಾರು ಹತ್ತು ವರ್ಷಗಳ ಕಾಲ ನಿರಂತರವಾಗಿ ಕಷ್ಟಪಟ್ಟ ವಿಜಯ್ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆತಿದೆ. ಅವರಿಗೆ ದೊಡ್ಡ ಅಭಿಮಾನಿ ಬಳಗವನ್ನು ಸಂಪಾದಿಸಿದ್ದು, ಅವರ ಅಭಿರುಚಿಗೆ ತಕ್ಕಂತೆ ಸಿನಿಮಾಗಳನ್ನು ಮಾಡುತ್ತಿದ್ದಾರೆ. ದುನಿಯಾ ವಿಜಯ್ ಅವರ ಜೀವನ ಕಷ್ಟಪಟ್ಟು ಸಾಧನೆ ಮಾಡಬೇಕು ಅನ್ನೋರಿಗೆ ಸ್ಫೂರ್ತಿಯಾಗಿದೆ.