ಸಿಎಂ, ಡಿಸಿಎಂ ದೆಹಲಿಗೆ ಬುಲಾವ್: ಮುಖ್ಯಮಂತ್ರಿ ಬದಲಾವಣೆ ಸೂಚನೆಯೇ?
ಬೆಂಗಳೂರು: ಮುಡಾ ಅಕ್ರಮ, ಮಹರ್ಷಿ ವಾಲ್ಮೀಕಿ ನಿಗಮ ಹಗರಣ ಗದ್ದಲ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇಂದು ಮಂಗಳವಾರ ದೆಹಲಿಯಲ್ಲಿ ಹೈಕಮಾಂಡ್ ಭೇಟಿಯಾಗುತ್ತಿದ್ದು ತೀವ್ರ ಕುತೂಹಲ ಮೂಡಿಸಿದೆ.
ಮುಂದಿನ ದಿನಗಳಲ್ಲಿ ಆಡಳಿತಾರೂಢ ಕಾಂಗ್ರೆಸ್ ನಲ್ಲಿ ಸರ್ಕಾರದ ಚುಕ್ಕಾಣಿ ಹಿಡಿದಿರುವ ನಾಯಕರ ಬದಲಾವಣೆಯಾಗಲಿದೆ ಎಂಬ ಮಾತುಗಳು ದಟ್ಟವಾಗಿ ಕೇಳಿಬರುತ್ತಿದೆ.
ಪಕ್ಷದಲ್ಲಿ ಇನ್ನೂ ಆಂತರಿಕ ವಲಯದಲ್ಲಿ ಚರ್ಚೆಯಾಗದಿದ್ದರೂ ಕೂಡ ಕಾಂಗ್ರೆಸ್ ನ ಪ್ರಖ್ಯಾತ ಹಿರಿಯ ನಾಯಕರೊಬ್ಬರು ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ ಎಂದು ಆಂತರಿಕ ಮೂಲಗಳು ಹೇಳುತ್ತಿವೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಗಳಿಗೆ ಗ್ಯಾರಂಟಿ ಯೋಜನೆಗಳಿಗೆ ಮೀಸಲಿಟ್ಟ ಹಣವನ್ನು ಬೇರೆಡೆಗೆ ವರ್ಗಾಯಿಸಿ ಮಹರ್ಷಿ ವಾಲ್ಮೀಕಿ ನಿಗಮ ಹಗರಣಕ್ಕೆ ಕಾರವಾಗಿರುವ ಆರೋಪವನ್ನು ಮತ್ತು ಮತ್ತು ಮೈಸೂರು ನಗರಾಭಿವೃದ್ಧಿ ಕಾರದ ಮುಡಾ ನಿವೇಶನ ಅಕ್ರಮಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದಗಳ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ ಎಂದು ಹೆಸರು ಹೇಳಲು ಇಚ್ಛಿಸದ ಪಕ್ಷದ ಮೂಲಗಳು ತಿಳಿಸಿವೆ. ಅಭಿವೃದ್ಧಿ ಪ್ರಾಧಿಕಾರದ (MUDA) ಅಕ್ರಮಗಳು – ಸಿದ್ದರಾಮಯ್ಯ ಅವರ ಪತ್ನಿ ಹೆಸರಿಗೆ ನಿವೇಶನ ಹಂಚಿಕೆ ಇದು ಸಿದ್ದರಾಮಯ್ಯನವರ ಸಿಎಂ ಹುದ್ದೆಗೆ ತೊಂದರೆಯುಂಟುಮಾಡುತ್ತಿದೆ ಎಂದು ಹೇಳಲಾಗಿದೆ. ಮುಡಾ ಹಗರಣದಲ್ಲಿ ಸಿದ್ದರಾಮಯ್ಯನವರು ಭಾಗಿಯಾಗಿರುವುದು ಇನ್ನೂ ಸಾಬೀತಾಗಿಲ್ಲ. ಆರೋಪ ಕೇಳಿಬಂದಾಗಿನಿಂದ ಅವರು ಕೂಡ ಇದನ್ನು ನಿರಾಕರಿಸುತ್ತಲೇ ಬಂದಿದ್ದಾರೆ. ಮುಡಾ ಮಂಜೂರು ಮಾಡಿದ ಭೂಮಿಯಲ್ಲಿನ ಅಕ್ರಮಗಳ ಆರೋಪಗಳನ್ನು ತನಿಖೆ ಮಾಡಲು ಏಕಸದಸ್ಯ ತನಿಖಾ ಆಯೋಗವನ್ನು ಸಹ ರಚಿಸಿದ್ದಾರೆ.
ಇತ್ತೀಚೆಗೆ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟ ಮುಗಾರು ಅಧಿವೇಶನದಲ್ಲಿ ಆಪಾದಿತ ಹಗರಣಗಳು ವಿಧಾನಮಂಡಲದ ಉಭಯ ಸದನಗಳನ್ನು ಅಲುಗಾಡಿಸಿದ್ದು, ಈಗ ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್ ಒಗ್ಗೂಡಿ – ಆಗಸ್ಟ್ 3 ರಿಂದ 10 ರವರೆಗೆ ಬೆಂಗಳೂರಿನಿಂದ ಮೈಸೂರಿನವರೆಗೆ ಒಂದು ವಾರದ ಪಾದಯಾತ್ರೆ ನಡೆಸಲು ನಿರ್ಧರಿಸಿವೆ. ಮುಡಾ ಹಗರಣವನ್ನು ಕಾಂಗ್ರೆಸ್ ಸರ್ಕಾರ ತಿರಸ್ಕರಿಸುತ್ತಲೇ ಬಂದಿದೆ.
ಸಿಎಂ ಬದಲಾವಣೆ ಪಟ್ಟಭದ್ರ ಹಿತಾಸಕ್ತಿಗಳ ವದಂತಿ: ಮುಡಾದಿಂದ ದೇವನೂರು ಲೇಔಟ್ ಅಭಿವೃದ್ಧಿಗೆ 3.16 ಎಕರೆ ಬಿಟ್ಟುಕೊಡಲು, ಮೈಸೂರಿನ ಪ್ರಮುಖ ಪ್ರದೇಶದಲ್ಲಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರಿಗೆ 14 ನಿವೇಶನ ಹಂಚಿಕೆ ಮಾಡಲಾಗಿದೆ ಎಂದು ಪ್ರತಿಪಕ್ಷವಾದ ಬಿಜೆಪಿ ಆರೋಪಿಸುತ್ತ ಬಂದಾಗಿನಿಂತ ಮುಡಾ ಹಗರಣ ಭಾರೀ ಸುದ್ದಿಯಾಯಿತು.
ಈ ಊಹಾಪೋಹಗಳ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಿಬ್ಬಂದಿ ಸಿಎಂ ಬದಲಾವಣೆಯಿದೆಯೇ ಎಂದು ಕೇಳಿದಾಗ ಕೆಲವು ಕಾಂಗ್ರೆಸ್ ನಾಯಕರು ನಿರಾಕರಿಸಿದ್ದಾರೆ. ಸಿದ್ದರಾಮಯ್ಯನವರ ನಾಯಕತ್ವದಲ್ಲಿ ಎಲ್ಲರಿಗೂ ನಂಬಿಕೆಯಿದೆ. ರಾಜ್ಯದಲ್ಲಿ ಐದು ಗ್ಯಾರಂಟಿ ಕಾರ್ಯಕ್ರಮಗಳು ಸುಧಾರಿಸಿಕೊಂಡು ಹೋಗುತ್ತಿರುವ ಸಮಯದಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಂದ ಈ ವದಂತಿಗಳನ್ನು ಹಬ್ಬಿಸಲಾಗುತ್ತಿದೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.
ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ನೇರ ಮಾಹಿತಿ ಪಡೆಯಲು ಪಕ್ಷದ ಕೇಂದ್ರ ನಾಯಕರು ಸಿಎಂ ಮತ್ತು ಡಿಸಿಎಂ ಅವರನ್ನು ದೆಹಲಿಗೆ ಕರೆಸಿರಬಹುದು. ನಾಯಕತ್ವ ಬದಲಾವಣೆಯ ಬಗ್ಗೆ ಯಾವುದೇ ಮಾತುಕತೆ ಇಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ. ಕೇಂದ್ರ ನಾಯಕರ ಜತೆಗಿನ ಸಭೆಯಲ್ಲಿ ಎಸ್ಟಿ ಅಭಿವೃದ್ಧಿ ನಿಗಮ ಮತ್ತು ಮುಡಾ ಸಮಸ್ಯೆಗಳು ಚರ್ಚೆಗೆ ಬರುವ ಸಾಧ್ಯತೆ ಇದೆ.