ಖಾಸಗಿ ಶಾಲೆಗಳು, ಪೋಷಕರಿಬ್ಬರಿಗೂ ಪರಿಹಾರ ನೀಡುವುದು ನನ್ನೆದುರಿನ ದೊಡ್ಡ ಸವಾಲು; ಸಚಿವ ಸುರೇಶ್ ಕುಮಾರ್
ಈ ಮಹಾಮಾರಿಯ ಕಾರಣದಿಂದ ಪೋಷಕರು ಮತ್ತು ಖಾಸಗಿ ಶಾಲೆಗಳ ನಡುವೆ ಉಂಟಾಗಿರುವ ಅಪನಂಬಿಕೆಯನ್ನು ದೂರ ಮಾಡುವುದು ಒಂದು ದೊಡ್ಡ ಸವಾಲು. ಈ ಸವಾಲನ್ನು ಎದುರಿಸುವಲ್ಲಿ ಪೋಷಕರು ಮತ್ತು ಖಾಸಗಿ ಶಾಲಾ ವ್ಯವಸ್ಥಾಪಕ ಮಂಡಳಿಯವರು ಇಬ್ಬರೂ ಆರೋಗ್ಯಕರ ಸಹಕಾರ ನೀಡಬೇಕೆಂದು ನನ್ನ ಮನವಿ ಎಂದು ಸುರೇಶ್ ಕುಮಾರ್ ಫೇಸ್ಬುಕ್ನಲ್ಲಿ ಮನವಿ ಮಾಡಿದ್ದಾರೆ.
ಬೆಂಗಳೂರು (ಡಿ. 21): ಖಾಸಗಿ ಶಾಲೆಗಳು ಹಾಗೂ ಶಾಲಾ ಶುಲ್ಕ ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಲೇ ಇವೆ. ಶಿಕ್ಷಣ ಸಚಿವ ಶಾಸಗಿ ಶಿಕ್ಷಣ ಸಂಸ್ಥೆಗಳ ಜೊತೆ ಶಾಮೀಲಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ಸಚಿವನಾಗಿ ಎದುರಿಸುತ್ತಿರುವ ಸಮಸ್ಯೆಗಳ ಪೈಕಿ ದೊಡ್ಡ ಸಮಸ್ಯೆಯಿದು. ಖಾಸಗಿ ಶಾಲೆಗಳು ಮತ್ತು ಪೋಷಕರ ನಡುವಿನ ಈ ಸಂಘರ್ಷದಲ್ಲಿ ಮಕ್ಕಳ ಪರಿಸ್ಥಿತಿ ಬಗ್ಗೆ ನಾವು ಯೋಚಿಸಬೇಕು. ಈ ಪರಿಸ್ಥಿತಿಯಲ್ಲಿ ಇಬ್ಬರಿಗೂ ಹಿತಕರವಾದ ಪರಿಹಾರ ಹುಡುಕುವ ಜವಾಬ್ದಾರಿ ನನ್ನ ಪಾಲಿಗೆ ಬಂದಿದೆ. ಇದು ಬಹಳ ಕಷ್ಟ ಕೂಡ ಹೌದು. ಶ್ರೀಮಂತ ಶಾಲೆಗಳನ್ನು ಹೊರತುಪಡಿಸಿ ಬಜೆಟ್ ಶಾಲೆಗಳೆಂದು ಕರೆಯಲ್ಪಡುವ ಮಧ್ಯಮ ದರ್ಜೆ ಶಾಲೆಗಳು ಎದುರಿಸುತ್ತಿರುವ ಕಷ್ಟ ಅಪಾರ. ಕೋವಿಡ್ ಪ್ರಾರಂಭ ಆದಾಗಿನಿಂದಲೂ ನಾನು ಪೋಷಕರ ಪರವಾಗಿ ಕ್ರಮ ಕೈಗೊಂಡಿದ್ದೇನೆ. ಪೋಷಕರ ಪರಿಸ್ಥಿತಿಯನ್ನು ಶಾಲೆಗಳು ಅರ್ಥ ಮಾಡಿಕೊಳ್ಳಬೇಕು. ತಮ್ಮ ಶಾಲೆಗಳ ಶಿಕ್ಷಕರ ಜೀವನ ನಿರ್ವಹಣೆಯ ಕುರಿತು ಪೋಷಕರು ಯೋಚಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಪೋಷಕರು ಖಾಸಗಿ ಶಾಲಾ ಶಿಕ್ಷಕರ ಪರಿಸ್ಥಿತಿ ನನಗೆ ಅರ್ಥವಾಗಿದೆ. ಆರ್ಥಿಕವಾಗಿ ಶಕ್ತಿವಂತರಾಗಿರುವವರು ಕೂಡ ಮಕ್ಕಳ ಶುಲ್ಕ ಪಾವತಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಕೋವಿಡ್-19 ರ ನೆಪ ಮುಂದಿಡುತ್ತಿರುವ ಪ್ರಸಂಗಗಳು ನಡೆಯುತ್ತಿವೆ . ಶ್ರೀಮಂತ ಶಾಲೆಗಳನ್ನು ಹೊರತು ಪಡಿಸಿ ಬಜೆಟ್ ಶಾಲೆಗಳೆಂದು ಕರೆಯಲ್ಪಡುವ ಮಧ್ಯಮ ದರ್ಜೆ ಶಾಲೆಗಳು ಎದುರಿಸುತ್ತಿರುವ ಕಷ್ಟ ಅಪಾರ. ಕೋವಿಡ್ ಪ್ರಾರಂಭ ಆದಾಗಿನಿಂದಲೂ ನಾನು ಪೋಷಕರ ಪರವಾಗಿ ಕ್ರಮ ಕೈಗೊಂಡಿದ್ದೇನೆ. ಪೋಷಕರ ಪರಿಸ್ಥಿತಿಯನ್ನು ಶಾಲೆಗಳು ಅರ್ಥಮಾಡಿಕೊಳ್ಳಬೇಕು. ತಮ್ಮ ಶಾಲೆಗಳ ಶಿಕ್ಷಕರ ಜೀವನ ನಿರ್ವಹಣೆಯ ಕುರಿತು ಪೋಷಕರು ಯೋಚಿಸಬೇಕು. ಇಂದು ಈ ಮಹಾಮಾರಿಯ ಕಾರಣದಿಂದ ಪೋಷಕರು ಮತ್ತು ಖಾಸಗಿ ಶಾಲೆಗಳ ನಡುವೆ ಉಂಟಾಗಿರುವ ಅಪನಂಬಿಕೆಯನ್ನು ದೂರ ಮಾಡುವುದು ಒಂದು ದೊಡ್ಡ ಸವಾಲು. ಈ ಸವಾಲನ್ನು ಎದುರಿಸುವಲ್ಲಿ ಪೋಷಕರು ಮತ್ತು ಖಾಸಗಿ ಶಾಲಾ ವ್ಯವಸ್ಥಾಪಕ ಮಂಡಳಿಯವರು ಇಬ್ಬರೂ ಆರೋಗ್ಯಕರ ಸಹಕಾರ ನೀಡಬೇಕೆಂದು ನನ್ನ ಮನವಿ ಎಂದು ಸುರೇಶ್ ಕುಮಾರ್ ಫೇಸ್ಬುಕ್ನಲ್ಲಿ ಮನವಿ ಮಾಡಿದ್ದಾರೆ.
ಶಿಕ್ಷಣ ಸಚಿವನಾಗಿ ನಾನು ಎದುರಿಸುತ್ತಿರುವ ಸಮಸ್ಯೆಗಳ ಪೈಕಿ ಒಂದು ದೊಡ್ಡ ಸಮಸ್ಯೆಯೆಂದರೆ ಖಾಸಗಿ ಶಾಲೆಗಳು ಮತ್ತು ಪೋಷಕರ ನಡುವಿನ ಶುಲ್ಕದ ವಿಚಾರ….
ಕೊರೋನಾ ಎಲ್ಲಾ ಕ್ಷೇತ್ರಗಳ ಮೇಲೂ ಕರಾಳ ಛಾಯೆ ಚಾಚಿದೆ. ಎಲ್ಲಾ ಕ್ಷೇತ್ರಗಳು ಆರ್ಥಿಕವಾಗಿ ಜರ್ಝರಿತವಾಗಿವೆ. ಆರ್ಥಿಕವಾಗಿ ಸಾಕಷ್ಟು ಶಕ್ತಿವಂತರಾಗಿದ್ದ ಕಾಲದಲ್ಲಿ ಕೆಲವು ಪೋಷಕರು ದುಬಾರಿ ಶುಲ್ಕ ತೆಗೆದುಕೊಳ್ಳುವ ಶಾಲೆಗಳಿಗೆ ಮಕ್ಕಳನ್ನು ಸೇರಿಸಿದ್ದರು. ರಾತ್ರಿಯಿಡೀ ಶಾಲೆಯ ಮುಂದೆ ಸಾಲು ನಿಂತು ಶಾಲೆಯ ಅಡ್ಮಿಶನ್ ಅರ್ಜಿ ಪಡೆದುಕೆಲವು ಗಣ್ಯರಿಂದ ಶಿಫಾರಸು ಪತ್ರ ಪಡೆದು ಕೊನೆಗೂ ತಮ್ಮ ಮಕ್ಕಳಿಗೆ ಆ ಶಾಲೆಯಲ್ಲಿ ಸೀಟು ದೊರಕಿದಾಗ ಪೋಷಕರಿಗೆ ಆಗಿರುವ ಆನಂದ ಊಹಾತೀತ. ಇದೇ ಶಾಲೆಯಲ್ಲಿ ನಮ್ಮ ಮಗು ಓದಬೇಕು ಎಂಬ ಹಂಬಲದಿಂದ ಕೆಲವು ಬಾರಿ ಹಠದಿಂದ ಮಕ್ಕಳನ್ನು ಸೇರಿಸಿರುವ ಪ್ರಕರಣಗಳು ಅನೇಕರಲ್ಲಿದೆ. ಆದರೆ, ಅದೇ ಶಾಲೆಯ ವಿರುದ್ಧ ಪೋಷಕರು ಘೋಷಣೆ ಕೂಗುವ ಪರಿಸ್ಥಿತಿ ಬಂದಿದೆ ಎಂದು ಸಚಿವ ಸುರೇಶ್ ಕುಮಾರ್ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
ಅಂದು ಹಠದಿಂದ ಖಾಸಗಿ ಶಾಲೆಗಳಿಗೆ ಸೇರಿಸಿದ್ದ ಆ ಪೋಷಕರು ಇಂದು ಆರ್ಥಿಕವಾಗಿ ತುಸು ದುರ್ಬಲರಾಗಿದ್ದಾರೆ. ಆದರೆ, ಶಾಲೆಗಳ ಮುಖ್ಯಸ್ಥರು ತಮ್ಮ ಶಿಕ್ಷಕರಿಗೆ ಸಂಬಳ ಕೊಡಲು ಸಾಧ್ಯವಾಗುತ್ತಿಲ್ಲ. ಈಗ ಪೋಷಕರು ಶುಲ್ಕ ಕಟ್ಟುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ಮಾಡುತ್ತಿದ್ದಾರೆ. ನಾನು ಶಿಕ್ಷಣ ಸಚಿವ ಖಾಸಗಿ ಶಾಲೆಗಳಿಗೆ ಸಹಾಯ ಮಾಡುತ್ತಿಲ್ಲ ಎಂಬ ಕೂಗು ಕೇಳುತ್ತಿದೆ. ಅದೇ ರೀತಿ ಶಿಕ್ಷಣ ಸಚಿವ ಖಾಸಗಿ ಶಾಲೆಗಳಿಗೆ ಅಂಕುಶ ಹಾಕುತ್ತಿಲ್ಲ ಎಂಬ ಕೂಗೂ ಕೇಳುತ್ತಿದೆ. ನನಗೆ ಪೋಷಕರ ಕಷ್ಟದ ಅರಿವು ಇದೆ. ಎಷ್ಟೋ ಜನ ಕಳೆದ ಎಂಟು ತಿಂಗಳಲ್ಲಿ ಕೆಲಸ ಕಳೆದು ಕೊಂಡಿದ್ದಾರೆ. ಅವರ ಸಂಬಳದ ಶೇಕಡ 25ರಷ್ಟು ಇಂದು ಅವರಿಗೆ ಬರುತ್ತಿಲ್ಲ. ಅಂಥವರಿಗೆ ತಾವು ಬಯಸಿ ತಮ್ಮ ಮಕ್ಕಳನ್ನು ಸೇರಿಸಿದ್ದ ಶಾಲೆಗಳಿಗೆ ದುಬಾರಿ ಶುಲ್ಕ ಕಟ್ಟಲು ಇಂದು ಅಸಾಧ್ಯವಾಗಿದೆ. ಅಂಥವರಿಗೆ ಈ ವರ್ಷ ಶುಲ್ಕ ರಿಯಾಯಿತಿ ಬೇಕು ಎಂದು ಅನಿಸಿದರೆ ತಪ್ಪಲ್ಲ ಎಂದು ಸಚಿವ ಸುರೇಶ್ ಕುಮಾರ್ ಫೇಸ್ಬುಕ್ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಖಾಸಗಿ ಶಾಲೆಗಳ ಶಿಕ್ಷಕರು ಕಳೆದ ವೇತನವಿಲ್ಲದೇ ಪರದಾಡುತ್ತಿದ್ದಾರೆ. ಕಳೆದ ಎಂಟು ತಿಂಗಳಿಂದ ಪರದಾಡುತ್ತಿರುವ ಪರಿಸ್ಥಿತಿ ನಮ್ಮ ಮುಂದೆ ಇದೆ. ಅನೇಕ ಶಿಕ್ಷಕರು ಜೀವನ ನಿರ್ವಹಣೆಗಾಗಿ ಬೇರೆ ಬೇರೆ ಕೆಲಸ ಮಾಡುತ್ತಿದ್ದಾರೆ. ತರಕಾರಿ ಮಾರುವುದು, ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಕೆಲಸ ಮಾಡುವುದು. ಇಂಥ ಪ್ರಸಂಗಗಳು ವರದಿಯಾಗ್ತಿವೆ. ಖಾಸಗಿ ಶಾಲೆಗಳ ವ್ಯವಸ್ಥಾಪಕರ ವಾದವೆಂದರೆ ಪೋಷಕರು ಶುಲ್ಕ ಕಟ್ಟದಿದ್ದರೆ ಶಿಕ್ಷಕರಿಗೆ ಸಂಬಳ ಕೊಡುವುದು ಹೇಗೆ? ಎಂಬುದು. ಖಾಸಗಿ ಶಾಲೆಗಳ ಶಿಕ್ಷಕರಿಗೆ ಹಣಕಾಸಿನ ಸಹಾಯ ನೀಡಬೇಕೆಂಬುದು ಅವರ ಆಗ್ರಹವಾಗಿದೆ. ಅದಕ್ಕಾಗಿ ನಾವು ಸರ್ಕಾರದಲ್ಲಿ ಯೋಚಿಸಿದ್ದೆವು ಎಂದು ಸಚಿವರು ತಿಳಿಸಿದ್ದಾರೆ.
ಬೇರೆ ಬೇರೆ ಕ್ರಮಗಳ ಬಗ್ಗೆ ಯೋಚಿಸಿದರೂ ಅದು ಕಾರ್ಯಗತವಾಗಲಿಲ್ಲ. ಏಕೆಂದರೆ ಸರಕಾರದ ಹಣಕಾಸಿನ ಪರಿಸ್ಥಿತಿ ಆಶಾದಾಯಕವಾಗಿಲ್ಲ. ಕಳೆದ ವಾರ ಖಾಸಗಿ ಶಾಲೆಗಳ ಮುಖ್ಯಸ್ಥರ ಸಂಘಟನೆಯ ಪ್ರತಿನಿಧಿಗಳು ನನ್ನನ್ನು ಭೇಟಿ ಮಾಡಿದ್ದರು, ತಮ್ಮ ಕಷ್ಟಗಳನ್ನೆಲ್ಲ ವಿವರಿಸಿದರು. ಆಗ ನಾನು ಹೇಳಿದ ಮಾತು ಹೀಗಿತ್ತು… ಪೋಷಕರು ಮತ್ತು ನಿಮ್ಮ ನಡುವೆ ಆರೋಗ್ಯಕರ ಸಂಬಂಧ ಇರಬೇಕು. ಆ ಪೋಷಕರು ನಿಮ್ಮ ಶಾಲೆಯನ್ನು ಪ್ರೀತಿಸಿ ಇದೇ ಶಾಲೆ ಬೇಕೆಂದು ಸೇರಿಸಿದ್ದಾರೆ. ನೀವು ಶಾಲಾ ವ್ಯವಸ್ಥಾಪಕ ಮಂಡಳಿ ರಚಿಸಿ. ಆ ವೇದಿಕೆಯಡಿ ಪೋಷಕರ ಜೊತೆ ಏಕೆ ಮಾತನಾಡಬಾರದು? ಪೋಷಕರ ಸಮಸ್ಯೆಯನ್ನು ಏಕೆ ಆಲಿಸಬಾರದು? ನಂತರ ನಿಮ್ಮ ಪರಿಸ್ಥಿತಿಯನ್ನು ಪೋಷಕರಿಗೆ ಏಕೆ ವಿವರಿಸಬಾರದು? ಇಬ್ಬರ ನಡುವೆ ಸಂವಾದದ ನಂತರ ಇಬ್ಬರಿಗೂ ಹಿತಕರವೆನಿಸುವ ಸೂತ್ರ ಏಕೆ ತೀರ್ಮಾನಿಸ ಬಾರದು? ಆ ಮುಖ್ಯಸ್ಥರು ಚರ್ಚೆ ಮಾಡುತ್ತೇವೆ ಎಂದಿದ್ದಾರೆ.
ಕೊರೋನಾ ಮಹಾಮಾರಿಯ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಆಡಳಿತಾತ್ಮಕ ವೆಚ್ಚಕ್ಕೆ ಮಾತ್ರ ಶುಲ್ಕ ತೆಗೆದುಕೊಳ್ಳುತ್ತೇವೆ. ಪೋಷಕರ ಜೊತೆಗೆ ನಾವು ನಿಲ್ಲುತ್ತೇವೆ ಎಂಬ ಮಾತು ಶಾಲೆಗಳಿಂದ ಬಂದರೆ ಶಾಲೆಯ ಅಸ್ತಿತ್ವಕ್ಕಾಗಿ ನಾವು ಇಷ್ಟು ಶುಲ್ಕ ಕೊಡಲು ಸಿದ್ದ ಎಂದು ಪೋಷಕರು ಘೋಷಿಸಿದರೆ ಆಗ ಸಮಸ್ಯೆಗೆ ಪರಿಹಾರ ಸರಳವಾಗುವುದು. ಅನೇಕ ಶಾಲೆಗಳಲ್ಲಿ ಪೋಷಕರಿಗೆ ಗೇಟಿನ ಒಳಗೆ ಪ್ರವೇಶಕ್ಕೆ ಅವಕಾಶವಿಲ್ಲ ಎಂದು ಕೇಳಿ ಬಂದಿದೆ. ಆಗ ಸಹಜವಾಗಿ ಪೋಷಕರು ಗೇಟಿನ ಆಚೆ ನಿಂತು ಘೋಷಣೆ ಕೂಗುವ ಪರಿಸ್ಥಿತಿ ಬಂದೊದಗುತ್ತದೆ. ಈ ವಾರ ಬೆಂಗಳೂರಿನಲ್ಲಿ ಖಾಸಗಿ ಶಾಲೆಗಳ ಸಂಘಟನೆಗಳು ಪ್ರತಿಭಟನೆ ಮಾಡಿವೆ. ಪೋಷಕರು ಸಹ ಪ್ರತಿಭಟನೆ ಮಾಡಿದ್ದಾರೆ. ಖಾಸಗಿ ಶಾಲೆಗಳು ಮತ್ತು ಪೋಷಕರ ನಡುವಿನ ಈ ಸಂಘರ್ಷದಲ್ಲಿ ಮಕ್ಕಳ ಪರಿಸ್ಥಿತಿ ಬಗ್ಗೆ ನಾವು ಯೋಚಿಸಬೇಕು. ಈ ಪರಿಸ್ಥಿತಿಯಲ್ಲಿ ಇಬ್ಬರಿಗೂ ಹಿತಕರವಾದ ಪರಿಹಾರ ಹುಡುಕುವ ಜವಾಬ್ದಾರಿ ನನ್ನ ಪಾಲಿಗೆ ಬಂದಿದೆ. ಇದು ಬಹಳ ಕಷ್ಟ ಕೂಡ ಹೌದು ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.