ವಿಚಾರಣೆ ವೇಳೆ ಸಿಸಿಬಿ ಅಧಿಕಾರಿಗಳ ಮುಂದೆ ರಾಧಿಕಾ ಕುಮಾರಸ್ವಾಮಿ ಹೇಳಿದ್ದೇನು?

ಬೆಂಗಳೂರು: ಸ್ಯಾಂಡಲ್​ವುಡ್ ‘ಸ್ವೀಟಿ’ ರಾಧಿಕಾ ಕುಮಾರಸ್ವಾಮಿ ಅವರನ್ನು ನಿನ್ನೆ ಸಿಸಿಬಿ ಅಧಿಕಾರಿಗಳು ಸತತವಾಗಿ ನಾಲ್ಕು ಗಂಟೆಗಳ ಕಾಲ ವಿಚಾರಣೆ ಮಾಡಿದರು. ಈ ವೇಳೆ ಸಾಕಷ್ಟು ಪ್ರಶ್ನೆಗಳನ್ನು ಮಾಡಿದ್ದು, ಕೆಲವು ದಾಖಲೆಗಳು ಸಹ ಅಧಿಕಾರಿಗಳಿಗೆ ನೀಡಿದ್ದಾರೆ. ಆ ನಾಲ್ಕು ಗಂಟೆಗಳ ವಿಚಾರಣೆಯಲ್ಲಿ ಏನೆಲ್ಲಾ ಅಂಶಗಳು ಹೊರಬಿತ್ತು ಅನ್ನೋ Exclusive ಮಾಹಿತಿ ಸಿಕ್ಕಿದೆ.

ನಿನ್ನೆ ಶುಕ್ರವಾರ ಮುಂಜಾನೆ 11 ಗಂಟೆ ಸುಮಾರಿಗೆ ಸಿಸಿಬಿ ಕಚೇರಿಗೆ ಬಂದ ನಟಿ ರಾಧಿಕಾ ಕುಮಾರಸ್ವಾಮಿ ಎಸಿಪಿ ನಾಗರಾಜ್ ಮುಂದೆ ವಿಚಾರಣೆಗೆ ಹಾಜರಾದರು. ಈ ವೇಳೆ ವಂಚನೆ ಪ್ರಕರಣದ ಆರೋಪಿ ಯುವರಾಜ್ ತಮಗೆ ಹೇಗೆ ಪರಿಚಯ ಎಂದು ತನಿಖಾಧಿಕಾರಿ ಕೇಳಿದಾಗ, ಸುಮಾರು 18 ವರ್ಷಗಳಿಂದ ಅಪ್ಪನಿಗೆ ಪರಿಚಯಯಿದ್ದ ನಂತ್ರ ನಮಗೆಲ್ಲ ಪರಿಚಯ ಆದರು ಎಂದು ರಾಧಿಕಾ ತಿಳಿಸಿದರು. ಪರಿಚಯ ಆದ ಬಳಿಕ ಅನೇಕ ಬಾರಿ ರಾಜಕೀಯಕ್ಕೆ ಬರುವಂತೆಯೂ ಹೇಳಿದ್ದು ಮುಂದೆ ನೋಡೋಣ ಅಂದಿದ್ದೆ. ಈ ವೇಳೆ ಸಿನಿಮಾವೊಂದನ್ನು ತೆಗೆಯೋಣ. ಹಣ ನಾನು ಹಾಕ್ತೀನಿ ಅಂದಾಗ ಒಕೆ ಅಂದಿದ್ದೆ. ಅಡ್ವಾನ್ಸ್ ರೂಪದಲ್ಲಿ ಅವರ ಅಕೌಂಟ್ ಇಂದ 15 ಲಕ್ಷ ಹಾಗೂ ಸ್ನೇಹಿತನ ಅಕೌಂಟ್​ನಿಂದ 60 ಲಕ್ಷ ರೂ ಹಾಕಿದರು ಎಂದು ಹೇಳಿದ ರಾಧಿಕಾರ, ಅದಕ್ಕೆ ಸಂಬಂಧಪಟ್ಟ ಬ್ಯಾಂಕ್ ದಾಖಲಾತಿ ಗಳನ್ನು ತನಿಖಾಧಿಕಾರಿಗೆ ನೀಡಿದರು.

ಯುವರಾಜ್ ಹಾಗೂ ನಡುವೆ ಬೇರೆ ಏನಾದರೂ ವ್ಯವಹಾರ ಇದೆಯಾ ಎಂಬ ಪ್ರಶ್ನೆಗೆ, ಅಂತಹದ್ದು ಏನು ಇಲ್ಲ ಸಾರ್ ಅಂದಿದ್ದಾರೆ ಸ್ವೀಟಿ. ಈ ವೇಳೆ ನಟಿಯ ಮೊಬೈಲ್ ಪೋನ್ ಅನ್ನು ಒಂದು ‌ಗಂಟೆಗಳ ಕಾಲ ಎಸಿಪಿ ನಾಗರಾಜ್ ಪರಿಶೀಲನೆ ಮಾಡಿದ್ದಾರೆ. ವಾಟ್ಸಪ್, ಮೆಸೆಂಜರ್, ಟ್ವಿಟರ್​ನ್ನು ಪರಿಶೀಲನೆ ಮಾಡಿದ್ದಾರೆ. ಆದ್ರೆ ಮೇಲ್ನೋಟಕ್ಕೆ ಯಾವುದೇ ಬೇರೆ ವ್ಯವಹಾರದ ಬಗ್ಗೆ ಮಾಹಿತಿ ಸಿಕ್ಕಿಲ್ಲ.‌ಇದಾದ ಬಳಿಕ ಅರ್ಧ ಗಂಟೆಯ ಕಾಲ ಯುವರಾಜ್ ಹಾಗೂ ರಾಧಿಕಾ ಕುಮಾರಸ್ವಾಮಿಯನ್ನು ಮುಖಾಮುಖಿ ಕೂರಿಸಿಯೂ ವಿಚಾರಣೆ ಮಾಡಲಾಯಿತಾದರೂ ಬೇರೆ ವ್ಯವಹಾರದ ಕುರಿತು ಮಾಹಿತಿ ಸಿಕ್ಕಿಲ್ಲ. ಮುಖಾಮುಖಿ ಕೂರಿಸಿದಾಗ ನಿಮ್ಮ ಹಣವನ್ನು ನಿಮಗೆ ವಾಪಸ್ ಕೊಡ್ತೀನಿ. ನಿಮ್ಮ ಜೊತೆ ವ್ಯವಹಾರವೇ ಬೇಡ ಎಂದು ಯುವರಾಜ್​ಗೆ ನಟಿ ರಾಧಿಕಾ ತಿಳಿಸಿದರು.

ಒಟ್ಟಾರೆ, ನಿನ್ನೆಯ ವಿಚಾರಣೆಯನ್ನು ನಟಿ ರಾಧಿಕಾ ಕುಮಾರಸ್ವಾಮಿ ಮುಗಿಸಿದ್ದಾರೆ. ಆರೋಪಿ ಯುವರಾಜನನ್ನು ಅಧಿಕಾರಿಗಳು ತೀವ್ರ ವಿಚಾರಣೆ ಮಾಡ್ತಾ ಇದ್ದಾರೆ. ‌ಒಂದು ವೇಳೆ‌ ಮತ್ತೆ ವಿಚಾರಣೆ ವೇಳೆ ರಾಧಿಕಾ ವ್ಯವಹಾರ ಕುರಿತಾಗಿ ಮಾಹಿತಿ ಬಂದ್ರೆ ಮತ್ತೆ ವಿಚಾರಣೆಗೆ ಕರೆಯೋ ಸಾಧ್ಯತೆ ಇದೆ. ಆದ್ರೆ ಸದ್ಯದ ಮಟ್ಟಿಗೆ ರಾಧಿಕಾ ಕುಮಾರಸ್ವಾಮಿ ಅವರಿಗೆ ರಿಲೀಫ್ ಅಂತಿದ್ದಾರೆ ಸಿಸಿಬಿ ಅಧಿಕಾರಿಗಳು. ಇತ್ತ ರಾಧಿಕಾ ಕುಮಾರಸ್ವಾಮಿ ವಿಚಾರಣೆ ಮುಕ್ತಾಯ ಆಗಿದ್ದೇ ಯುವರಾಜ ಅಲಿಯಾಸ್ ಸ್ವಾಮಿಯನ್ನು ಎರಡು ಗಂಟೆಗಳ ಕಾಲ ವಿಚಾರಣೆ ಮಾಡಿ ಆತನಿಂದಲೂ ಕೆಲವೊಂದು ಮಾಹಿತಿಯನ್ನು ಪಡೆದಿದ್ದು, ನಂತ್ರ ಆಡುಗೋಡಿಯ ಟೆಕ್ನಿಕಲ್ ಸೆಲ್​ಗೆ ಕರೆದೊಯ್ದಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *