ಉಮೇಶ ಕತ್ತಿಗೆ ಸಚಿವ ‘ಭಾಗ್ಯ’?: ಮಂಗಳವಾರ ಬೆಂಗಳೂರಿಗೆ ಆಗಮನ!
ಬೆಂಗಳೂರು: ಬಹುನಿರೀಕ್ಷೆ ಹುಟ್ಟಿಸಿದ್ದ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಗ್ರೀನ್ ಸಿಗ್ನಲ್ ಸಿಕ್ಕಿದ್ದು ಬರುವ 13 ಅಥವಾ 14 ನೇ ತಾರೀಖು ವಿಸ್ತರಣೆಯಾಗಲಿದೆ.
ತಮ್ಮ ಸಂಪುಟಕ್ಕೆ ಸಿಎಂ ಯಡಿಯೂರಪ್ಪ 7 ಶಾಸಕರನ್ನು ಸೇರಿಸಿಕೊಳ್ಳಲಿದ್ದಾರೆ ಎದು ಹೇಳಲಾಗಿದ್ದರೂ ಅವರ ಹೆಸರುಗಳನ್ನು ಬಹಿರಂಗ ಪಡಿಸಿಲ್ಲ. ಆದರೆ ಬೆಳಗಾವಿ ಶಾಸಕ ಉಮೇಶ್ ಕತ್ತಿ ಮಂಗಳವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಉಮೇಶ್ ಕತ್ತಿ ಸೇರಿದಂತೆ ನಾಲ್ಕು ಶಾಸಕರುಗಳ ಹೆಸರನ್ನು ಸಿಎಂ ಪೈನಲ್ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇನ್ನು ಬಾಕಿಯಿರುವ ಎರಡು ಸ್ಥಾನಗಳಿಗಾಗಿ ಮುರುಗೇಶ್ ನಿರಾಣಿ ಸೇರಿದಂತೆ 15 ಮಂದಿ ಆಕಾಂಕ್ಷಿಗಳಿದ್ದಾರೆ ಎಂದು ತಿಳಿದು ಬಂದಿದೆ.
ಹುಕ್ಕೇರಿಯಿಂದ 8 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಉಮೇಶ್ ಕತ್ತಿ, ಈ ಹಿಂದೆ ಹಲವು ಪ್ರಮುಖ ಖಾತೆಗಳನ್ನು ನಿಭಾಯಿಸಿದ್ದಾರೆ. ಸಂಪುಟಕ್ಕೆ ಯಾರ್ಯಾರು ಸೇರಲಿದ್ದಾರೆ ಎಂಬ ಬಗ್ಗೆ ನನಗೆ ಮಾಹಿತಿಯಿಲ್ಲ, ಆದರೆ ಮಂಗಳವಾರ ನಾನು ಬೆಂಗಳೂರಿಗೆ ತೆರಳುತ್ತಿದ್ದೇನೆ, ಪಟ್ಟಿಯಲ್ಲಿ ನನ್ನ ಹೆಸರಿದ್ದರೇ ಸಚಿವನಾಗಿ ಕೆಲಸ ಮಾಡುತ್ತೇನೆ, ಒಂದು ವೇಳೆ ಸಚಿವನಾಗದಿದ್ದರೇ ಶಾಸಕನಾಗಿಯೇ ಮುಂದುವರಿಯುತ್ತೇನೆ ಎಂದು ಉಮೇಶ್ ಕತ್ತಿ ಹೇಳಿದ್ದಾರೆ.
ಯಡಿಯೂರಪ್ಪ ಅವರ ಆಪ್ತರಾಗಿರುವ ಉಮೇಶ್ ಕತ್ತಿ. ಸಿಎಂ ಆಗಿ ಯಡಿಯೂರಪ್ಪ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ರಚನೆಯಾದಾಗ ಅವರನ್ನು ರಾಜ್ಯ ಸಂಪುಟದಲ್ಲಿ ಸೇರಿಸಿಕೊಳ್ಳಬೇಕಿತ್ತು, ಆದರೆ ಹೈಕಮಾಂಡ್ ಜೊತೆಗಿನ ಭಿನ್ನಾಭಿಪ್ರಾಯದಿಂದಾಗಿ ಉಮೇಶ್ ಕತ್ತಿಗೆ ಅವಕಾಶ ಸಿಗಲಿಲ್ಲ.
ಇದರಿಂದ ಅಸಮಾಧಾನಗೊಂಡಿದ್ದ ಉಮೇಶ್ ಕತ್ತಿ ಹಲವು ಬಾರಿ ಪಕ್ಷ ಮತ್ತು ಸಿಎಂ ವಿರುದ್ಧ ಹರಿಹಾಯ್ದಿದ್ದರು. ಆದರೆ ಈ ಬಾರಿ ಉಮೇಶ್ ಕತ್ತಿ ಸಂಪುಟ ಸೇರುವುದು ಬಹುತೇಕ ಖಚಿತವಾಗಿದೆ, ಹೀಗಾಗಿ ಕತ್ತಿ ಬೆಂಗಳೂರಿಗೆ ಮಂಗಳವಾರ ಆಗಮಿಸುತ್ತಿದ್ದಾರೆ.
ಉಮೇಶ್ ಕತ್ತಿಗೆ ಸಚಿವ ಸ್ಥಾನ ನೀಡಿದರೇ ಬೆಳಗಾವಿ ಜಿಲ್ಲೆಯಿಂದ ಐವರು ಶಾಸಕರು ಸಚಿವರಾಗಿ ಕೆಲಸ ನಿರ್ವಹಿಸುವಂತಾಗುತ್ತದೆ, ಈಗಾಗಲೇ ರಮೇಶ್ ಜಾರಕಿಹೊಳಿ, ಲಕ್ಷ್ಮಣ ಸವದಿ, ಶ್ರೀಮಂತ ಪಾಟೀಲ್, ಹಾಗೂ ಶಶಿಕಲಾ ಜೊಲ್ಲೆ ಸಚಿವರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.