ಬೆಳಗಾವಿ ಬಳಿ ಅಪಘಾತ: ಮಾನವೀಯತೆ ಮೆರೆದ ಸಚಿವ ನಿರಾಣಿ
ಬೆಳಗಾವಿ: ಕಾರು ಮತ್ತು ಬಸ್ ನಡುವೆ ಪರಸ್ಪರ ಮುಖಾಮುಖಿ ಡಿಕ್ಕಿಯಾಗಿ ಬಹಳ ಆತಂಕಗೊಂಡಿದ್ದ ಪ್ರಯಾಣಿಕರ ಯೋಗಕ್ಷೇಮ ವಿಚಾರಿಸುವ ಮೂಲಕ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ಆರ್.ನಿರಾಣಿ ಅವರು ಮಾನವೀಯತೆ ಮೆರೆದಿದ್ದಾರೆ.
ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಧ್ವಜರಾಹೋಣ ನೆರವೇರಿಸಲು ಯಾದಗಿರಿ ಜಿಲ್ಲೆಗೆ ನಿಯೋಜನೆಗೊಂಡಿರುವ ಸಚಿವ ನಿರಾಣಿ ಅವರು, ಬೆಳಗಾವಿ ರಸ್ತೆ ಮಾರ್ಗವಾಗಿ ಮುಧೋಳಕ್ಕೆ ತೆರಳುತ್ತಿದ್ದರು.ಈ ವೇಳೆ ಬೆಳಗಾವಿ ಹೊರವಲಯದ ನೇಸರ್ಗಿ ಸಮೀಪ ರಾಜ್ಯ ರಸ್ತೆ ಸಾರಿಗೆ ಬಸ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಕೆಲ ಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಇದೇ ಮಾರ್ಗದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮತ್ತು , ಅಪಘಾತವಾಗಿರುವುದನ್ನು ಕಂಡ ಕೂಡಲೇ ಸಚಿವರು ಕಾರು ನಿಲ್ಲಿಸಿ ಪ್ರಯಾಣಿಕರಿಗೆ ಆಗಿರುವ ಸಮಸ್ಯೆಯನ್ನು ಖುದ್ದು ವಿಚಾರಿಸಿ ಮಾನವೀಯತೆ ಕಾಳಜಿ, ಕಳಕಳಿಯನ್ನು ವ್ಯಕ್ತಪಡಿಸಿದರು.ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ಜೊತೆ ದೂರವಾಣಿ ಮೂಲಕ ಮಾಹಿತಿ ನೀಡಿ ಖುದ್ದು ಅಂಬುಲೆನ್ಸ್ ಬರುವ ವ್ಯವಸ್ಥೆ ಮಾಡಿ ಮಾನವೀಯತೆಯನ್ನು ತೋರಿದರು.
ಜೊತೆಗೆ ಸ್ವತಃ ಸಚಿವರೇ ಎಲ್ಲಾ ಪ್ರಯಾಣಿಕರ ಯೋಗಕ್ಷೇಮ ವಿಚಾರಿಸಿ ಚಿಕಿತ್ಸೆಗೆ ನೆರವು ಬೇಕಾದರೆ ತಮ್ಮ ಸಹಾಯ ಪಡೆಯುವಂತೆ ಮನವಿ ಮಾಡಿದರು
ಸಚಿವರ ಈ ಕಳಕಳಿಗೆ ಪ್ರಯಾಣಿಕರಿಂದ ಪ್ರಶಂಸೆ ವ್ಯಕ್ತವಾಗಿದೆ. ಈ ಅಪಘಾತದಲ್ಲಿ ಮೂವರು ಮಹಿಳೆಯರು ಸೇರಿದಂತೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಮುರಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.