ಅಮಾನವೀಯ ಕೃತ್ಯ: ಮೂಢನಂಬಿಕೆಯ ಹೆಸರಲ್ಲಿ ಹೆತ್ತ ಮಕ್ಕಳನ್ನೇ ಬಲಿಕೊಟ್ಟ ದಂಪತಿ!
ಮದನಪಲ್ಲಿ: ಆಘಾತಕಾರಿ ಘಟನೆಯೊಂದರಲ್ಲಿ, ದಂಪತಿಗಳು ತಮ್ಮ ಇಬ್ಬರು ಹೆಣ್ಣುಮಕ್ಕಳನ್ನು ಡಂಬಲ್ಸ್ ಎಂದು ಶಂಕಿಸಲಾಗಿರುವ ಮೊಂಡಾದ ಆಯುಧದಿಂದ ಹೊಡೆದು ಹತ್ಯೆ ಮಾಡಿದ್ದಾರೆ.
ನಗರದ ಹೊರವಲಯದಲ್ಲಿರುವ ಶಿವ ನಗರದ ಶ್ರೀ ಶಿರಡಿ ಸಾಯಿಬಾಬಾ ಅಪಾರ್ಟ್ ಮೆಂಟ್ ನಿವಾಸಿಗಳಾದ ಪದ್ಮಜಾ ಮತ್ತು ಪುರುಷೋತ್ತಮ್ ನಾಯ್ಡು ಎಂಬ ದಂಪತಿಗಳು ಈ ಕೃತ್ಯ ಎಸಗಿದ್ದು ಈ ಇಬ್ಬರೂ ಉನ್ನತ ಶಿಕ್ಷಣ ಪಡೆದವರಾಗಿದ್ದಾರೆ. ಪದ್ಮಜಾ ಖಾಸಗಿ ಶಾಲೆಯಲ್ಲಿ ಉಪಪ್ರಾಂಶುಪಾಲೆಯಾಗಿದ್ದರೆ ಪುರುಷೋತ್ತಮ್ ಸರ್ಕಾರಿ ಶಾಲೆಯೊಂದರಲ್ಲಿ ಉಪ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದನು.
ಇವರ ಹಿರಿಯ ಮಗಳು ಅಲೈಕ್ಯ (27) ಭೋಪಾಲ್ ನಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದರು. ಕಿರಿಯ ಪುತ್ರಿ ಸಾಯಿ ದಿವ್ಯಾ (22) ಬಿಬಿಎ ಮಾಡಿದ್ದಲ್ಲದೆ ಮುಂಬೈನ ಎಆರ್ ರಹಮಾನ್ ಮ್ಯೂಸಿಕ್ ಶಾಲೆಯ ವಿದ್ಯಾರ್ಥಿಯಾಗಿದ್ದರು. ಈಕೆ ಕೋವಿಡ್ ಲಾಕ್ ಡೌನ್ ನಂತರ ಮನೆಗೆ ಮರಳಿದ್ದರು.
ಕೋವಿಡ್ -19 ಕಂಡುಬಂದ ನಂತರದಲ್ಲಿ ಹೆಚ್ಚಿನ ಸಮಯವನ್ನು ತಮ್ಮ ಮನೆಯಲ್ಲೇ ಕಳೆಯುತ್ತಿದ್ದ ಪದ್ಮಜಾ-ಪುರುಷೋತ್ತಮ್ ದಂಪತಿಗಳು ಕೆಲವೊಮ್ಮೆ ವಿಚಿತ್ರವಾಗಿ ವರ್ತಿಸುತ್ತಿದ್ದರು. ನಿನ್ನೆ (ಜನವರಿ 24) ಮನೆಯಿಂದ ವಿಚಿತ್ರವಾದ ಮತ್ತು ದೊಡ್ಡ ಶಬ್ದಗಳನ್ನು ಕೇಳಿದ ಸ್ಥಳೀಯರು ಪೋಲೀಸರಿಗೆ ಮಾಹಿತಿ ನೀಡಿದ್ದರು. ಆರಂಭದಲ್ಲಿ ದಂಪತಿಗಳು ಪೊಲೀಸರನ್ನು ಮನೆಗೆ ಪ್ರವೇಶಿಸದಂತೆ ತಡೆದರು. ಪೊಲೀಸರು ಮನೆಯೊಳಗೆ ಪ್ರವೇಶಿದ ವೇಳೆ ಒಬ್ಬ ಯುವತಿ ಪೂಜಾಕೋಣೆಯಲ್ಲಿ ಶವವಾಗಿದ್ದರೆ ಇನ್ನೊಬ್ಬಳು ಇನ್ನೊಂದು ಕೋಣೆಯಲ್ಲಿ ಹೆಣವಾಗಿ ಕಂಡುಬಂದಿದ್ದಾಳೆ. ಎರಡೂ ಶವಗಳ ದೇಹಕ್ಕೆ ಕೆಂಪು ಬಣ್ಣದ ಬಟ್ಟೆ ಸುತ್ತಲಾಗಿದ್ದು ಅವುಗಳ ಸುತ್ತ ಕೆಲವು ಪೂಜಾ ಸಾಮಗ್ರಿಗಳನ್ನು ಇರಿಸಲಾಗಿತ್ತು.
“ಪ್ರಾಥಮಿಕತನಿಖೆಯ ಸಮಯದಲ್ಲಿ, ದಂಪತಿಗಳು ತಮ್ಮ ಹೆಣ್ಣುಮಕ್ಕಳು ಮತ್ತೆ ಜೀವ ಪಡೆಯುತ್ತಾರೆಎಂದು ಹೇಳುವ ಮೂಲಕ ಶವಗಳನ್ನು ಒಂದು ದಿನ ಮನೆಯಲ್ಲಿಇರಿಸಲು ಒತ್ತಾಯಿಸಿದ್ದರು.” ಮದನಪಲ್ಲಿ ಡಿಎಸ್ಪಿ ರವಿ ಮನೋಹರ ಚಾರಿ ಹೇಳಿದ್ದಾರೆ.

“ಕಲಿಯುಗವು ಇಂದು ರಾತ್ರಿ ಕೊನೆಗೊಳ್ಳಲಿದ್ದು, ಸತ್ಯಯುಗದ ಆರಂಭ ನಾಳೆ ಆಗಲಿದೆ. ಆ ಸಮಯಕ್ಕೆ ಸರಿಯಾಗಿ ಈ ಇಬ್ಬರೂ ಹೆಣ್ಣುಮಕ್ಕಳು ಪುನರ್ಜನ್ಮ ಪಡೆಯಲಿದ್ದಾರೆ ಹಾಗಾಗಿ ಇವರನ್ನು ಬಲಿ ನೀಡುವಂತೆ ದೈವ ಸಂದೇಶ ನೀಡಿದೆ” ಎಂದು ದಂಪತಿಗಳು ಪೊಲೀಸರಿಗೆ ತಿಳಿಸಿದ್ದಾರೆ.
ಇದೀಗ ಸಾಕಷ್ಟು ಮನವೊಲಿಕೆಯ ನಂತರ ಎರಡೂ ಶವಗಲನ್ನು ಮರಣೋತ್ತರ ಪರೀಕ್ಷೆಗೆ ವರ್ಗಾಯಿಸಲಾಗಿದ್ದು ವಿಚಾರಣೆಗಾಗಿ ದಂಪತಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಪ್ರಕರಣ ದಾಖಲಾಗಿದೆ.