ಬೆಳಗಾವಿ ಗಡಿ ವಿವಾದ: ಸಿಎಂ ಉದ್ಧವ್ ಠಾಕ್ರೆ ಹೇಳಿಕೆ ಪುಷ್ಟೀಕರಿಸುವ ಹಳೆ ದಾಖಲೆಗಳನ್ನು ಬಿಡುಗಡೆ ಮಾಡಿದ ‘ಮಹಾ’ಸರ್ಕಾರ
ಮುಂಬೈ: ಕರ್ನಾಟಕದಲ್ಲಿ ಮರಾಠಿ ಮಾತನಾಡುವ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಣೆ ಮಾಡಬೇಕು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕರೆ ನೀಡಿದ ನಂತರ ಅವರ ನೇತೃತ್ವದ ಮಹಾ ವಿಕಾಸ್ ಅಘಡಿ ಸರ್ಕಾರ ಮುಖ್ಯಮಂತ್ರಿಗಳ ಮಾತಿಗೆ ಪುಷ್ಟಿ ನೀಡುವಂತೆ ಹಳೆ ದಾಖಲೆಗಳನ್ನು ಬಿಡುಗಡೆ ಮಾಡಿದೆ.
ಮರಾಠಿ ಜನರು ಮಾತನಾಡುವ ಪ್ರದೇಶಗಳಿಗೆ ಮುಖ್ಯಮಂತ್ರಿಗಳು ಹೇಳಿರುವ ಹೇಳಿಕೆಗೆ ಪೂರಕವಾದ ದಾಖಲೆಗಳು, ಫೋಟೋಗಳು, ಆಡಿಯೊ ದೃಶ್ಯಗಳು, ಮರಾಠಿ ಭಾಷೆಯ ಅಚ್ಚಳಿಯದ ಹೆಜ್ಜೆಗುರುತುಗಳು, ವಿವಾದಿತ ಪ್ರದೇಶದಲ್ಲಿ ಸಾಂಸ್ಕೃತಿಕ ಹಿನ್ನೆಲೆ ಎಲ್ಲವೂ ದಾಖಲೆಗಳಲ್ಲಿ ಒಳಗೊಂಡಿದೆ. ಕಾರವಾರದಲ್ಲಿ 60 ವರ್ಷಗಳ ಹಿಂದೆ ಇಂಗ್ಲಿಷ್ ಮತ್ತು ಕೊಂಕಣಿ ಭಾಷೆಗಳಷ್ಟೇ ಪ್ರಾಮುಖ್ಯತೆ ಪಡೆದಿತ್ತು ಎಂದು ಮಹಾರಾಷ್ಟ್ರ ಸರ್ಕಾರದ ದಾಖಲೆಗಳು ಹೇಳುತ್ತವೆ.
ಮೊದಲ ಮರಾಠಿ ಪತ್ರಿಕೆ ವಿಚಾರಿ 1912ರಲ್ಲಿ ಇಲ್ಲಿ ಪ್ರಕಟವಾಯಿತು. ಅಲ್ಲದೆ ಸೂಚನಾ ಫಲಕಗಳು ಇಲ್ಲಿ ಮರಾಠಿಯಲ್ಲಿದ್ದವು, ಹಲವು ಸಹಕಾರಿ ನಿಗಮಗಳು ಮತ್ತು ಸರ್ಕಾರದ ದಾಖಲೆಗಳು ಮರಾಠಿಯಲ್ಲಿಯೇ ಪ್ರಕಟವಾಗುತ್ತಿದ್ದವು. ಈ ಪ್ರದೇಶ ಮಹಾರಾಷ್ಟ್ರಕ್ಕೆ ಸೇರಿದ್ದಾಗಿತ್ತು ಎಂದು 100-125 ಕ್ಕೂ ಹೆಚ್ಚು ವರ್ಷಗಳ ಹಳೆ ದಾಖಲೆಗಳು ಹೇಳುತ್ತವೆ ಎಂದು ಉದ್ಧವ್ ಠಾಕ್ರೆಯವರ ಕಚೇರಿ ಹೊರಡಿಸಿರುವ ದಾಖಲೆಗಳು ಹೇಳುತ್ತವೆ.
ನ್ಯಾಯಕ್ಕಾಗಿ ಹೋರಾಟ ಎಂಬ ಶೀರ್ಷಿಕೆಯನ್ನು ಹೊತ್ತಿರುವ 35 ನಿಮಿಷಗಳ ಕಪ್ಪು-ಬಿಳುಪು ದಾಖಲೆಯನ್ನು ಮಹಾರಾಷ್ಟ್ರ ಸರ್ಕಾರ 50 ವರ್ಷಗಳ ಹಿಂದೆಯೇ ಮಂಡಿಸಿದ್ದು ಅದನ್ನು ಈಗ ಡಿಜಿಟಲ್ ಮಾದರಿಯಲ್ಲಿ ಮರು ಬಿಡುಗಡೆಗೊಳಿಸಲಾಗಿದೆ. ಅದರಲ್ಲಿ ಬೆಳಗಾವಿ ಮತ್ತು ಇತರ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಒತ್ತಾಯಿಸಲಾಗಿದೆ.
ಜಾನಪದ ಹಾಡುಗಳು, ನೃತ್ಯಗಳು, ಹಳೆಯ ಪುಸ್ತಕಗಳು, ಪತ್ರಿಕೆಗಳು, ದೇವಾಲಯಗಳು ಮತ್ತು ಸರ್ಕಾರಿ ದಾಖಲೆಗಳು ಮರಾಠಿ ಪ್ರಾಬಲ್ಯದ ಮುದ್ರೆ ಬಹಿರಂಗಪಡಿಸುತ್ತವೆ. ಆದರೆ ನಂತರ, ಕರ್ನಾಟಕ ಸರ್ಕಾರವು ನಗರಗಳ ಹೆಸರನ್ನು ಬದಲಾಯಿಸುವ ಮೂಲಕ, ಹಳೆಯ ದಾಖಲೆಗಳನ್ನು ಸುಡುವ ಮೂಲಕ, ಮರಾಠಿ ಶಾಲೆಗಳು ಮತ್ತು ಚಿತ್ರಮಂದಿರಗಳನ್ನು ಮುಚ್ಚುವ ಮೂಲಕ ಮರಾಠಿಯ ಮುದ್ರೆಯನ್ನು ಅಳಿಸಲು ಬಲವಂತವಾಗಿ ಪ್ರಯತ್ನಿಸಿತು ಎಂದು ಬೆಳಗಾವಿ ಮತ್ತು ಮಹಾರಾಷ್ಟ್ರ ಏಕೀಕರಣ ಸಮಿತಿಯ ನಿವಾಸಿ ಮಲೋಜಿ ಅಶ್ಟೆಕರ್ ಆರೋಪಿಸುತ್ತಾರೆ.
ಸುಪ್ರೀಂ ಕೋರ್ಟ್ನಲ್ಲಿ ಮಹಾರಾಷ್ಟ್ರ ಸರ್ಕಾರದ ಅಫಿಡವಿಟ್ನ ಪ್ರಕಾರ, 865 ಹಳ್ಳಿಗಳು ಮತ್ತು ಬೆಳಗಾವಿ, ಕಾರವಾರ, ನಿಪ್ಪಾಣಿ ಮತ್ತು ಅಲಿಯಾಲ್ನಂತಹ ಆರು ನಗರಗಳು ಸಂಯುಕ್ತ ಮಹಾರಾಷ್ಟ್ರದ ಭಾಗಗಳಾಗಿವೆ. ನ್ಯಾಯಮೂರ್ತಿ ಮೆಹರ್ ಚಂದ್ ಮಹಾಜನ್ ಅವರು ‘ಪಕ್ಷಪಾತದ ವರದಿಯನ್ನು ನೀಡಿದ್ದರು ಎಂದು ಮಹಾರಾಷ್ಟ್ರ ಸರ್ಕಾರದ ವಿಶೇಷ ಕರ್ತವ್ಯದ ಅಧಿಕಾರಿ ದೀಪಕ್ ಪವಾರ್ ತಮ್ಮ ಪುಸ್ತಕದಲ್ಲಿ ಹೇಳುತ್ತಾರೆ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಎ.ಆರ್.ಅಂಟುಲ್ಲಿ ಅವರು ಮಹಾಜನ್ ವರದಿ ಅನ್ಕವರ್ ಎಂಬ ಪುಸ್ತಕವನ್ನು ಬರೆದಿದ್ದಾರೆ ಎಂದು ಸರ್ಕಾರದ ದಾಖಲೆ ಹೇಳುತ್ತದೆ.
ಈಗಿನ ವಿವಾದ: ಸುಪ್ರೀಂ ಕೋರ್ಟ್ ನ ತೀರ್ಪು ಹೊರಬರುವವರೆಗೆ ವಿವಾದಿತ ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಬೇಕು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದರೆ, ಉಪ ಮುಖ್ಯಮಂತ್ರಿ ಅಜಿತ್ ಪವಾರ್, ಕರ್ನಾಟಕದಲ್ಲಿ ಮರಾಠಿ ಮಾತನಾಡುವ ಜನರನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಒತ್ತಾಯಿಸಿದ್ದರು.
ಇದಕ್ಕೆ ತೀಕ್ಷ್ಮವಾಗಿ ಪ್ರತಿಕ್ರಿಯಿಸಿರುವ ಸಿಎಂ ಯಡಿಯೂರಪ್ಪ, ಮಹಾರಾಷ್ಟ್ರ ಸರ್ಕಾರ ಕನ್ನಡಿಗರನ್ನು ಕೆರಳಿಸುತ್ತಿದ್ದು, ಮಹಾರಾಷ್ಟ್ರದ ಬೇಡಿಕೆಯನ್ನು ತಿರಸ್ಕರಿಸುವುದಲ್ಲದೆ, ನಮಗೆ ಮಹಾಜನ್ ವರದಿಯೇ ಅಂತಿಮ ಎಂದರು.