ಅಪ್ರಾಪ್ತೆಯ ಪ್ಯಾಂಟ್‌ ಜಿಪ್ ತೆರೆದರೆ ಲೈಂಗಿಕ ದೌರ್ಜನ್ಯ ಅಲ್ಲ ಎಂದಿದ್ದ ನ್ಯಾಯಮೂರ್ತಿಯ ಭಡ್ತಿಗೆ ತಡೆ

ನವದೆಹಲಿ: ಚರ್ಮಕ್ಕೆ ಚರ್ಮ ತಾಗಿದರೆ ಮಾತ್ರ ಲೈಂಗಿಕ ದೌರ್ಜನ್ಯವಾಗಿ ಪರಿಗಣಿಸಬೇಕು, ಅಪ್ರಾಪ್ತ ಬಾಲಕಿಯ ಕೈ ಹಿಡಿದು ಪ್ಯಾಂಟ್‌ ಜಿಪ್‌ ತೆರೆದರೆ ಅದು ಪೋಕ್ಸೋ ಕಾಯ್ದೆಯಡಿ ಲೈಂಗಿಕ ದೌರ್ಜನ್ಯ ಎಂದು ಪರಿಗಣಿಸಲಾಗದು.. ಹೀಗೆ ಸಾಲು ಸಾಲು ವಿವಾದಾತ್ಮಕ ತೀರ್ಪು ನೀಡಿದ್ದ ನ್ಯಾಯಧೀಶರ ಭಡ್ತಿಯನ್ನು ಸುಪ್ರೀಂ ಕೋರ್ಟ್‌ ತಡೆ ಹಿಡಿದಿದೆ.

ಬಾಂಬೆ ಹೈ ಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸುತ್ತಿರುವ ನ್ಯಾ. ಪುಷ್ಪಾ ವಿರೇಂದ್ರ ಗನೇಡಿವಾಲ ಅವರನ್ನು ಖಾಯಂ ನ್ಯಾಯಮೂರ್ತಿಯನ್ನಾಗಿ ನೇಮಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮಾಡಿದ್ದ ಶಿಫಾರಸ್ಸನ್ನು ಸುಪ್ರೀಂ ಕೋರ್ಟ್‌ ಕೊಲೀಜಿಯಂ ಹಿಂಪಡೆದಿದೆ.

ಪೋಕ್ಸೋ ಹಾಗೂ, ಲೈಂಗಿಕ ದೌರ್ಜನ್ಯದ ಪ್ರಕರಣಗಳಲ್ಲಿ ಭಾರೀ ವಿವಾದಕ್ಕೆ ಕಾರಣವಾದ ತೀರ್ಪು ನೀಡಿದ ಬೆನ್ನಲ್ಲೇ, ಅವರ ಖಾಯಮಾತಿ ಶಿಫಾರಸ್ಸನ್ನು ಹಿಂಪಡೆಯಲಾಗಿದೆ.

ಮೂಲಗಳಿಂದ ಮಾಹಿತಿ ಪ್ರಕಾರ ಅವರನ್ನು ಮತ್ತೆ ಜಿಲ್ಲಾ ನ್ಯಾಯಾಲಯಕ್ಕೆ ಹಿಂಬಡ್ತಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. 2019ರ ಫೆಬ್ರವರಿಯಲ್ಲಿ ಅವರು ಹೈ ಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕವಾಗಿದ್ದರು.

ನ್ಯಾ. ಪುಷ್ಪಾ ಅವರನ್ನು ಬಾಂಬೆ ಹೈ ಕೋರ್ಟ್‌ನ ಖಾಯಂ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಬೇಕು ಎಂದು ಸುಪ್ರೀಂ ಕೋರ್ಟ್‌ ಸಿಜೆಐ ಎಸ್‌.ಎ ಬೋಬ್ಡೆ ನೇತೃತ್ವದ ಸಮಿತಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು.

ಜನವರಿ 19 ರಂದು ನೀಡಿ ತೀರ್ಪೊಂದರಲ್ಲಿ ನ್ಯಾ. ಪುಷ್ಪಾ ಅವರು, 12 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಹೊತ್ತ 39 ವರ್ಷದ ವ್ಯಕ್ತಿಯನ್ನು ಪೋಕ್ಸೋ ಕಾಯ್ದೆಯಡಿಯಲ್ಲಿನ ಆರೋಪಗಳಿಂದ ಖುಲಾಸೆಗೊಳಿಸಿದ್ದರು.

ಬಟ್ಟೆ ಬಿಚ್ಚದೇ, ಚರ್ಚಕ್ಕೆ ಚರ್ಮ ತಾಗದೇ ಇದ್ದರೆ ಅದನ್ನು ಲೈಂಗಿಕ ಕಿರುಕುಳ ಎಂದು ವ್ಯಾಖ್ಯಾನಿಸಲಾಗದು ಎಂದು ತೀರ್ಪು ನೀಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಅಪ್ರಾಪ್ತ ಬಾಲಕಿಯ ಕೈ ಹಿಡಿಯುವುದು, ಪ್ಯಾಂಟ್‌ ಜಿಪ್‌ ತೆರೆಯುವುದು ಇವೆಲ್ಲಾ ಲೈಂಗಿಕ ದೌರ್ಜನ್ಯದ ವ್ಯಾಖ್ಯಾನದಡಿ ಬರುವುದಿಲ್ಲ ಎಂದು ತೀರ್ಪಿದ್ದರು. ಶುಕ್ರವಾರ ನೀಡಿದ ತೀರ್ಪೊಂದರಲ್ಲಿ, ಪ್ರತಿರೋಧ ಕಂಡು ಬರದೇ ಇದ್ದರೇ ಅದನ್ನು ಅತ್ಯಾಚಾರ ಎನ್ನಲಾಗದು ಎಂದು ನ್ಯಾಯ ನಿರ್ಣಯಿಸಿದ್ದರು.

ನ್ಯಾ. ಪುಷ್ಪಾ ಅವರ ಈ ತೀರ್ಪುಗಳು ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ವಾದ ಪ್ರತಿವಾದಕ್ಕೆ ಕಾರಣವಾಗಿತ್ತು. ಅಟಾರ್ನಿ ಜನರಲ್ ಕೆ.ಕೆ ವೇಣುಗೋಪಾಲ್‌ ಕೂಡ ಈ ತೀರ್ಪುಗಳ ಬಗ್ಗೆ ತೀವ್ರ ಕಳವಳ ವ್ಯಕ್ತ ಪಡಿಸಿದ್ದರು. ಇದರ ಬೆನ್ನಲ್ಲೇ ಅವರನ್ನುಖಾಯಮಾತಿ ಮಾಡುವ ಶಿಫಾರಸ್ಸನ್ನು ಹಿಂಪಡೆಯಲಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *