ಕೃಷಿ ಕಾಯ್ದೆ ವಿಚಾರವಾಗಿ ರಾಜವಂಶಸ್ಥ ಯದುವೀರ್ ಒಡೆಯರ್ ಹೆಸರಲ್ಲಿ ನಕಲಿ ಪೋಸ್ಟ್..!

ಹೈಲೈಟ್ಸ್‌:

  • ಮೈಸೂರು ರಾಜವಂಶಸ್ಥರ ಹೆಸರಿನಲ್ಲಿ ನಕಲಿ ಟ್ವಿಟ್ಟರ್ ಖಾತೆ
  • ಕೃಷಿ ಕಾಯ್ದೆಗಳ ವಿಚಾರವಾಗಿ ಯದುವೀರ್ ಹೆಸರಿನಲ್ಲಿ ಟ್ವೀಟ್
  • ಪ್ರಧಾನಿ ಮೋದಿಯವರೇ ರೈತರ ಸಮಸ್ಯೆ ಬಗೆಹರಿಸಿ ಎಂದು ಟ್ವೀಟ್

ಮೈಸೂರು: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿಚಾರವಾಗಿ ಮೈಸೂರು ರಾಜವಂಶಸ್ಥ ಯದುವೀರ್‌ ಚಾಮರಾಜ ಒಡೆಯರ್‌ ಹೆಸರಿನಲ್ಲಿ ನಕಲಿ ಅಕೌಂಟ್‌ ಸೃಷ್ಟಿಸಿ ಪೋಸ್ಟ್‌ ಮಾಡಿರುವ ಘಟನೆ ನಡೆದಿದೆ.

ಕೃಷಿ ಮಸೂದೆ ಕುರಿತಾಗಿ ನಿಜವಾದ ರೈತರ ಹೋರಾಟ ಹಾಗೂ ರೈತರ ಹೆಸರಿನಲ್ಲಿ ಹಲವು ಸಮಾಜ ಘಾತುಕ ಶಕ್ತಿಗಳಿಂದ ಹಿಂಸಾಚಾರ ನಡೆಯುತ್ತಿದೆ. ಅನ್ನದಾತರ ಪರವಾಗಿ ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳೂ ಪರ-ವಿರೋಧ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಲೇ ಬಂದಿದ್ದಾರೆ. ಇದರ ನಡುವೆಯೇ ಅಂಥದ್ದೇ ಒಂದು ಟ್ವೀಟ್ ಮೈಸೂರು ರಾಜವಂಶಸ್ಥ ಯದುವಂಶದ ಯದುವೀರ್ ಹೆಸರಿನ ನಕಲಿ ಟ್ವಿಟ್ಟರ್ ಖಾತೆಯಿಂದ ಪೋಸ್ಟ್ ಆಗಿದೆ.

ಆ ಪೋಸ್ಟ್‌ನಲ್ಲಿ ‘ನಾವು ರೈತರ ಪರವಾಗಿದ್ದೇವೆ. ರೈತರನ್ನು ಬೆಂಬಲಿಸುವುದು ನಮ್ಮ ಆದ್ಯತೆಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರೇ ಕೃಷಿ ಸಮಸ್ಯೆಗಳನ್ನು ಈಗಾಗಲಾದರೂ ಬಗೆಹರಿಸಿ’ ಎಂದು ಟ್ವೀಟ್ ಮಾಡಲಾಗಿದೆ. ಈ ಟ್ವೀಟ‌ನ್ನು ಕೃಷಿ ಕಾಯ್ದೆ ವಿರೋಧಿಗಳು ಸಹ ಶೇರ್ ಮಾಡಿಕೊಂಡು ತಮ್ಮ ಖಾತೆಗೆ ರೀ ಪೋಸ್ಟ್‌ ಮಾಡುತ್ತಿದ್ದಾರೆ.

ಯದುವೀರ್ ಅವರ ಹೆಸರಿನಲ್ಲಿ ಇರುವ ಈ ಪೋಸ್ಟ್‌ಗೆ ಸಹಸ್ರಾರು ಪರ-ವಿರೋಧ ಕಮೆಂಟ್‌ಗಳು ಬಂದಿವೆ. ಆದರೆ ಅಸಲಿಯತ್ತು ಬೇರೆಯಾಗಿದೆ. ಈ ಟ್ವೀಟ್ ಕಂಡು ಯದುವೀರ್ ಅವರೇ ಸ್ಪಷ್ಟನೆ ನೀಡಿದ್ದಾರೆ. ಇದು ನಮ್ಮ ಖಾತೆಯಲ್ಲ ಎಂದು ಅವರು ಹೇಳಿದ್ದಾರೆ. ನನ್ನ ಹೆಸರಿನಲ್ಲಿ ಫೋಟೋ ಹಾಕಿಕೊಂಡು ಫೇಕ್ ಐಡಿ ರಚನೆ ಮಾಡಲಾಗಿದೆ ಎಂದು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *