ದೂರವಾಗಿಲ್ಲ ಕೋವಿಡ್! ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲಿಸಿ; ಮೈಮರೆಯದಿರಿ ಹುಷಾರು
ಹೈಲೈಟ್ಸ್:
- ರಾಜ್ಯದಲ್ಲಿ ಮತ್ತೆ ಶುರುವಾಗಿದೆ ಕೋವಿಡ್ 19 ಸೋಂಕಿನ ಆತಂಕ
- ಮಾಸ್ಕ್ ಧರಿಸಿ ಹಾಗೂ ಸಾಮಾಜಿಕ ಅಂತರ ಕಡ್ಡಾಯ ಪಾಲಿಸಿ
- ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟಬುತ್ತಿ ಎಚ್ಚರ
ಬೆಂಗಳೂರು: ಕೋವಿಡ್ ಮತ್ತೆ ಸದ್ದು ಮಾಡಲು ಆರಂಭಿಸಿದೆ. ಅದೂ ರೂಪಾಂತರವಾಗಿ ಕಾಡುತ್ತಿದ್ದು ಜನರಲ್ಲಿ ಆತಂಕ ಶುರುವಾಗಿದೆ. ಕೋವಿಡ್ ಲಸಿಕೆ ಬಂದು ಇನ್ನೇನು ಎಲ್ಲ ಸರಿ ಹೋಯಿತು ಎನ್ನುವಷ್ಟರಲ್ಲಿ ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ರೂಪಾಂತರಿ ಕೋವಿಡ್ ನಿಯಂತ್ರಣ ಮೀರಿ ಹರಡುತ್ತಿದೆ. ರಾಜ್ಯದಲ್ಲೂ ಇದು ಭೀತಿಯ ವಾತಾವರಣ ಸೃಷ್ಟಿಸಿದ್ದು ಜನರು ಎಚ್ಚರಿಕೆಯಿಂದ ಇರಬೇಕಾಗಿದೆ.
ಇನ್ನೇನು ಕೋವಿಡ್ ಮುಗಿದೇ ಹೋಯಿತು ಎನ್ನುವಷ್ಟರ ಮಟ್ಟಿಗೆ ಜನರ ವರ್ತನೆ ಇದೆ. ಮಾಸ್ಕ್ ಹಾಕುವವರ ಸಂಖ್ಯೆ ಇಳಿಮುಖವಾಗುತ್ತಿದೆ. ಹಳ್ಳಿ ಪ್ರದೇಶಗಳಲ್ಲಂತೂ ಇಲ್ವೇ ಇಲ್ಲ ಎಂಬಂತಿದೆ. ಇನ್ನು ಸಾಮಾಜಿಕ ಅಂತರವಂತೂ ದೂರದ ಮಾತು. ರಾಜಕೀಯ, ಧಾರ್ಮಿಕ ಸಭೆ ಸಮಾರಂಭಗಳಲ್ಲಿ ಯಾವುದೇ ಸಾಮಾಜಿಕ ಅಂತರ ಇಲ್ಲವೇ ಇಲ್ಲ. ದೊಡ್ಡ ಮಟ್ಟದ ಸಮಾವೇಶಗಳು, ಸಭೆಗಳು ನಿರಂತರವಾಗಿ ನಡೆಯುತ್ತಿದೆ. ಇಂತಹ ಸಭೆ, ಸಮಾರಂಭಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವೇ?
ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾದ ಕಾರಣದಿಂದ ಸರ್ಕಾರವೂ ಸುಮ್ಮನಿತ್ತು. ಬೆಂಗಳೂರಿನಂತಹ ಮಹಾನಗರದಲ್ಲಿ ಬಿಬಿಎಂಪಿಯೂ ಮೌನವಾಗಿತ್ತು. ಮಾಸ್ಕ್ ಕಡ್ಡಾಯಗೊಳಿಸಲು ಕೈಗೊಳ್ಳಲಾಗಿದ್ದ ಎಚ್ಚರಿಕೆಯ ಕ್ರಮಗಳಿಗೂ ಬ್ರೇಕ್ ಬಿತ್ತು. ಪರಿಣಾಮ ಜನರಲ್ಲೂ ಭೀತಿ ದೂರವಾಗಿದೆ. ಕೋವಿಡ್ಗೆ ಭಯ ಪಡಬೇಕಾಗಿಲ್ಲ ನಿಜ. ಆದರೆ ಕನಿಷ್ಟ ಎಚ್ಚರಿಕೆ ತೆಗೆದುಕೊಳ್ಳುವುದು ಅಗತ್ಯ ಅಲ್ಲವೇ ಎಂಬುವುದು ಗಮನಿಸಬೇಕಾದ ವಿಚಾರವಾಗಿದೆ.
ಮಹಾರಾಷ್ಟ್ರ ಹಾಗೂ ಕೇರಳದ ರೂಪಾಂತರಿ ಆತಂಕ
ನೆರೆ ರಾಜ್ಯಗಳಾದ ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಹೆಚ್ಚಳ ಆಗುತ್ತಿದ್ದು ಕರ್ನಾಟಕದಲ್ಲೂ ಆತಂಕದ ವಾತಾವರಣ ನಿರ್ಮಾನ ಆಗಿದೆ. ಈ ನಿಟ್ಟಿನಲ್ಲಿ ಇದೀಗ ದೀಢೀರ್ ಆಗಿ ಸರ್ಕಾರ ಎಚ್ಚೆತ್ತುಕೊಂಡಿದೆ. ತಪಾಸಣೆಗಳ ಸಂಖ್ಯೆ ಹೆಚ್ಚಳಕ್ಕೆ ನಿರ್ಧಾರ ಮಾಡಿದೆ. ಅಲ್ಲದೆ ಜನರು ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದೆ. ಕೇರಳ ಸರ್ಕಾರ ಕೋವಿಡ್ ನಿಯಂತ್ರಣ ಮಾಡಲು ಹೆಚ್ಚಿನ ಮುಂಜಾಗರೂಕತಾ ಕ್ರಮ ಕೈಗೊಂಡಿತ್ತು. ಆದರೆ ಅಲ್ಲೂ ನಿಯಂತ್ರಣಕ್ಕೆ ಬರುತ್ತಿಲ್ಲ. ಇದೀಗ ಗಡಿ ರಾಜ್ಯಗಳ ಜನರು ಕರ್ನಾಟಕ್ಕೂ ಆಗಮಿಸುತ್ತಿರುವುದರಿಂದ ನಮ್ಮ ರಾಜ್ಯದಲ್ಲೂ ಕೋವಿಡ್ ಆತಂಕ ಶುರುವಾಗಿದೆ.
ಕಟ್ಟು ನಿಟ್ಟಿನ ಕ್ರಮದ ಅಗತ್ಯ
ಪರಿಸ್ಥಿತಿ ಕೈಮೀರಿ ಹೋದ ಬಳಿಕ ಕ್ರಮ ಕೈಗೊಂಡರೆ ಅದರಿಂದ ಏನೂ ಲಾಭ ಇಲ್ಲ. ಬದಲಾಗಿ ಈಗಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕಾಗಿದೆ. ಮತ್ತೆ ಲಾಕ್ಡೌನ್ ಅಗತ್ಯ ಬರದಂತೆ ಇತರ ಮಾರ್ಗೋಪಾಯಗಳನ್ನು ಕಂಡುಹಿಡಿಯಬೇಕಿದೆ. ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಡ್ಡಾಯಗೊಳಿಸಬೇಕಿದೆ. ಕೋವಿಡ್ ಮಾರ್ಗಸೂಚಿ ಪಾಲನೆಯನ್ನು ಕಡ್ಡಾಯಗೊಳಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲೂ ಸಂಕಷ್ಟದ ದಿನಗಳನ್ನು ಎದುರಿಸಬೇಕಾಗಿ ಬರಬಹುದು ಎಂಬ ಎಚ್ಚರಿಕೆ ಇರಲಿ.