517 ಧಾರ್ಮಿಕ ಕಟ್ಟಡಗಳ ತೆರವಿಗೆ ಬಿಬಿಎಂಪಿ ಸಿದ್ಧತೆ, ಆಡಳಿತ ಮಂಡಳಿಗೆ ನೋಟಿಸ್‌

ಬೆಂಗಳೂರು:ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ, ಪಾದಚಾರಿ ಮಾರ್ಗ, ಉದ್ಯಾನ, ಆಟದ ಮೈದಾನ, ಸರಕಾರಿ ಜಾಗಗಳು ಹಾಗೂ ಇನ್ನಿತರೆ ಸಾರ್ವಜನಿಕ ಸ್ಥಳಗಳನ್ನು ಅತಿಕ್ರಮಿಸಿ ಅನಧಿಕೃತವಾಗಿ ನಿರ್ಮಿಸಿರುವ 517 ಧಾರ್ಮಿಕ ಕೇಂದ್ರಗಳಿಗೆ ತೆರವಿಗೆ ಭೀತಿ ಎದುರಾಗಿದೆ. ಈಗಾಗಲೇ ಸಂಬಂಧಪಟ್ಟ ಧಾರ್ಮಿಕ ಕಟ್ಟಡಗಳ ಆಡಳಿತ ಮಂಡಳಿಗಳಿಗೆ ನೋಟಿಸ್‌ ಜಾರಿ ಮಾಡಲಾಗಿದೆ.

ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ ಆದೇಶದಂತೆ ಪಾಲಿಕೆಯು 8 ವಲಯಗಳಲ್ಲೂಸಮೀಕ್ಷೆ ನಡೆಸಿ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಧಾರ್ಮಿಕ ಕಟ್ಟಡಗಳ ಪಟ್ಟಿ ಸಿದ್ಧಪಡಿಸಿದೆ. ರಸ್ತೆ, ಫುಟ್‌ಪಾತ್‌, ಉದ್ಯಾನ, ಆಟದ ಮೈದಾನ ಮತ್ತು ಸರಕಾರಿ ಜಾಗಗಳಲ್ಲಿಅನಧಿಕೃತವಾಗಿ ನಿರ್ಮಿಸಿರುವ ಮಂದಿರ, ಮಸೀದಿ, ಚರ್ಚ್, ಗುರುದ್ವಾರಗಳ ತೆರವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ 2009ರಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಸಾರ್ವಜನಿಕ ಸ್ಥಳಗಳಲ್ಲಿಅನುಮತಿ ಪಡೆಯದೆ ಅಕ್ರಮವಾಗಿ ನಿರ್ಮಿಸಿರುವ ಧಾರ್ಮಿಕ ಕೇಂದ್ರಗಳನ್ನು ಗುರುತಿಸಿ, ತೆರವುಗೊಳಿಸಲು ಆದೇಶಿಸಿದೆ. ಈ ಆದೇಶವು ಕೇವಲ ಬಿಬಿಎಂಪಿಗೆ ಮಾತ್ರವಲ್ಲ; ಇಡೀ ದೇಶಕ್ಕೆ ಅನ್ವಯಿಸುತ್ತದೆ.

 

2009ರ ಸೆ.29ಕ್ಕೆ ಮೊದಲು ಅನುಮತಿ ಪಡೆಯದೆ ಅನಧಿಕೃತವಾಗಿ ನಿರ್ಮಿಸಿರುವ ಧಾರ್ಮಿಕ ಕಟ್ಟಡಗಳನ್ನು ಸಕ್ರಮಗೊಳಿಸಲು, ಸ್ಥಳಾಂತರ ಅಥವಾ ತೆರವುಗೊಳಿಸಲು ನ್ಯಾಯಾಲಯ ಆದೇಶಿಸಿದೆ. ಆದರೆ, 2009ರ ಸೆ.29ರ ನಂತರ ಅಕ್ರಮವಾಗಿ ನಿರ್ಮಿಸಲಾದ ಧಾರ್ಮಿಕ ಕಟ್ಟಡಗಳ ಸಕ್ರಮ ಮತ್ತು ಸ್ಥಳಾಂತರಕ್ಕೆ ಅವಕಾಶವಿಲ್ಲ. ಈ ಕಟ್ಟಡಗಳನ್ನು ತೆರವುಗೊಳಿಸಲೇಬೇಕಿದೆ.

517 ಧಾರ್ಮಿಕ ಕಟ್ಟಡಗಳ ತೆರವು
”ಪಾಲಿಕೆಯ ಎಂಟು ವಲಯಗಳಲ್ಲಿರುವ ಧಾರ್ಮಿಕ ಕಟ್ಟಡಗಳ ಸಮೀಕ್ಷೆ ಪೂರ್ಣಗೊಳಿಸಿ, ವರದಿ ಸಿದ್ಧಪಡಿಸಲಾಗಿದೆ. 2009ರ ಸೆ.29ಕ್ಕೆ ಮೊದಲು ಖಾಸಗಿ ಜಮೀನುಗಳಲ್ಲಿ3,335 ಹಾಗೂ 2009ರ ಸೆ.29ರ ನಂತರ 379 ಧಾರ್ಮಿಕ ಕೇಂದ್ರಗಳು ನಿರ್ಮಾಣಗೊಂಡಿವೆ. ಈ ಕಟ್ಟಡಗಳು ನಿರ್ಮಾಣವಾಗಿರುವ ಸ್ಥಳದ ದಾಖಲೆಗಳನ್ನು ಸಂಗ್ರಹಿಸಿ ಪರಿಶೀಲನೆ ನಡೆಸಲಾಗಿದೆ,” ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.

”ಸರಕಾರಿ ಜಾಗಗಳಲ್ಲಿ2009ರ ಸೆ.29ಕ್ಕಿಂತ ಮುಂಚೆ 1,893 ಮಂದಿರ, ಮಸೀದಿ, ಚರ್ಚ್, ಗುರುದ್ವಾರಗಳನ್ನು ಕಟ್ಟಲಾಗಿದೆ. ಈ ಪೈಕಿ 1,548 ಧಾರ್ಮಿಕ ಕೇಂದ್ರಗಳನ್ನು ಸಕ್ರಮಗೊಳಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ. 105 ಕಟ್ಟಡಗಳನ್ನು ಸ್ಥಳಾಂತರ ಮಾಡಲಾಗುವುದು. ಉಳಿದ 240 ಧಾರ್ಮಿಕ ಕಟ್ಟಡಗಳನ್ನು ತೆರವು ಮಾಡಲಾಗುವುದು. ಹಾಗೆಯೇ, 2009ರ ಸೆ.29ರ ನಂತರ 277 ಧಾರ್ಮಿಕ ಕೇಂದ್ರಗಳನ್ನು ಕಟ್ಟಿದ್ದು, ಇವೆಲ್ಲವನ್ನೂ ತೆರವು ಮಾಡಲೇಬೇಕಿದೆ. ಹೀಗಾಗಿ, ಸಂಬಂಧಪಟ್ಟವರಿಗೆ ನೋಟಿಸ್‌ ಜಾರಿ ಮಾಡಿ ಸ್ವಯಂಪ್ರೇರಿತವಾಗಿ ತೆರವು ಮಾಡಲು ಸೂಚಿಸಲಾಗಿದೆ. ಒಂದೊಮ್ಮೆ ತೆರವುಗೊಳಿಸದಿದ್ದರೆ, ಪಾಲಿಕೆಯಿಂದಲೇ ತೆರವು ಮಾಡಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುವುದು,” ಎಂದು ಹೇಳಿದರು

ಸುಸ್ತಿದಾರರ ಸ್ಥಿರಾಸ್ತಿ ಮುಟ್ಟುಗೋಲು
”ಕೋಟ್ಯಂತರ ರೂ. ತೆರಿಗೆ ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರ ಚರಾಸ್ತಿಯನ್ನಷ್ಟೇ ಜಪ್ತಿ ಮಾಡಲು ಕಾನೂನಿನಲ್ಲಿಅವಕಾಶವಿತ್ತು. ಸದ್ಯ ಕಾನೂನಿಗೆ ತಿದ್ದುಪಡಿ ಮಾಡಿದ್ದು, ಸುಸ್ತಿದಾರರ ಸ್ಥಿರಾಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಹರಾಜು ಹಾಕಲು ಅವಕಾಶ ಕಲ್ಪಿಸಲಾಗಿದೆ,” ಎಂದು ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.

ತೆರಿಗೆ ಕಟ್ಟದಿದ್ದರೆ ಮಂತ್ರಿಮಾಲ್‌ಗೆ ಬೀಗ
”ಮಲ್ಲೇಶ್ವರಂನಲ್ಲಿರುವ ಮಂತ್ರಿಮಾಲ್‌ನಿಂದ ಆಸ್ತಿ ತೆರಿಗೆ, ಬಡ್ಡಿ, ದಂಡ ಸೇರಿ 30 ಕೋಟಿ ರೂ. ಬರಬೇಕಿದೆ. ಈಗಾಗಲೇ ನೋಟಿಸ್‌ ನೀಡಲಾಗಿದ್ದು, 30 ಕೋಟಿ ರೂ. ಪಾವತಿಸಲು ಮಾರ್ಚ್ ಅಂತ್ಯದವರೆಗೆ ಗಡುವು ನೀಡಲಾಗಿದೆ. ಅಷ್ಟರೊಳಗೆ ತೆರಿಗೆ ಕಟ್ಟದಿದ್ದರೆ, ಮಾಲ್‌ಗೆ ಬೀಗ ಹಾಕಿ ಬಾಕಿ ವಸೂಲಿಗೆ ಕ್ರಮ ಕೈಗೊಳ್ಳಲಾಗುವುದು,” ಎಂದು ಹೇಳಿದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *