ಬಿಎಸ್ವೈ ಬಜೆಟ್ನತ್ತ ಕಲ್ಯಾಣ ಕರ್ನಾಟಕದ ಚಿತ್ತ; ಚಿಗುರುವುದೇ ಕಮರಿದ ಕನಸುಗಳು?
ಹೈಲೈಟ್ಸ್:
- ತೊಗರಿಗೆ ಬ್ರ್ಯಾಂಡ್ ಮಾಡುವ ಹೊಸ ಯೋಜನೆಗಳ ನಿರೀಕ್ಷೆ
- ನಿಮ್ಹಾನ್ಸ್ ಉಪಕೇಂದ್ರ ಘೋಷಣೆ ನಿರೀಕ್ಷೆ
- ಕಲ್ಯಾಣ ಕರ್ನಾಟಕ ಖಾಲಿ ಹುದ್ದೆಗಳ ಭರ್ತಿಗೆ ವಿಶೇಷ ಕ್ರಮ
- ಎಪಿಎಂಸಿ ಸೆಸ್ 60 ಪೈಸೆಯಿಂದ 30 ಪೈಸೆಗೆ ಇಳಿಸಿಬೇಕು
- ಕೆಎಸ್ಎಸ್ಐಡಿಸಿಯಿಂದ ಜಮೀನು ಅಭಿವೃದ್ಧಿಪಡಿಸಿ ಸಣ್ಣ ಉದ್ಯಮಿಗಳಿಗೆ ನೀಡುವ ಯೋಜನೆ
- ರೈಲ್ವೆ ವಿಭಾಗೀಯ ಕೇಂದ್ರಕ್ಕೆ ರಾಜ್ಯ ಸರಕಾರದ ಅನುದಾನ ಮೀಸಲಿಡಬೇಕು
- ದೊಡ್ಡ ಕೈಗಾರಿಕೆಗಳಿಗೆ ಸ್ಪೆಷಲ್ ಯೋಜನೆ ಘೋಷಣೆ
ಕಲಬುರಗಿ: ಇಂದು ರಾಜ್ಯದ ಜನತೆಯ ಚಿತ್ತ ಸಿಎಂ ಬಿಎಸ್ ಯಡಿಯೂರಪ್ಪನವರು ಮಂಡಿಸಲಿರುವ ಬಜೆಟ್ನತ್ತ ನೆಟ್ಟಿದೆ. ಸಿಎಂ ಬಿಎಸ್ವೈ ಸೋಮವಾರ ಮಂಡಿಸಲಿರುವ ಬಜೆಟ್ಗೆ ಹಿಂದುಳಿದ ಕಲ್ಯಾಣ ಕರ್ನಾಟಕದ ಹಲವು ನಿರೀಕ್ಷೆಗಳು ಗರಿಗೆದರಿವೆ.
ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಸದಾ ಬದ್ಧ ಎಂದು ಹೇಳುವ ಸಿಎಂ, ಬಜೆಟ್ನಲ್ಲಿ ಜನರ ನಿರೀಕ್ಷೆಗೆ ತಕ್ಕಂತೆ ಅನುದಾನ ನೀಡುವರೆ ಎಂಬ ಕಾತರ ಶುರುವಾಗಿದೆ. ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದ ಸಿಎಂ ಕಲ್ಯಾಣ ನಾಡಿಗೆ ಅಪಾರ ಕೊಡುಗೆ ನೀಡಬೇಕೆಂಬುದು ಈ ಭಾಗದ ಜನರ ಬೇಡಿಕೆಯಾಗಿದೆ.
ಕೆಕೆಆರ್ಡಿಬಿಗೆ 2000 ಕೋಟಿ
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ 2000 ಕೋಟಿ ರೂ. ಘೋಷಿಸಬೇಕು ಎಂಬುದು ಬಹುದಿನಗಳಿಂದ ಜನರ ಬೇಡಿಕೆಯಾಗಿದೆ. ಪ್ರಸ್ತುತ ಮಂಡಳಿಗೆ 1500 ಕೋಟಿ ರೂ. ನೀಡಲಾಗುತ್ತಿದೆ. ಈ ಬಜೆಟ್ನಲ್ಲಿ 500 ಕೋಟಿ ರೂ. ಹೆಚ್ಚಿಸಬೇಕು ಎಂದು ಜನರು ನಿರೀಕ್ಷಿಸುತ್ತಿದ್ದಾರೆ. ಜೊತೆಗೆ ಬಹುದಿನಗಳ ಬೇಡಿಕೆಯಿರುವ ಏಮ್ಸ್ಗೆ ಕೇಂದ್ರದ ಶೇ.50, ರಾಜ್ಯದ ಶೇ.50 ಅನುದಾನ ನೀಡಬೇಕು. ಇದರಲ್ಲಿ ರಾಜ್ಯ ಸರಕಾರದ ತನ್ನ ಪಾಲು ಶೇ.50ರಷ್ಟು ಅನುದಾನ ಮೀಸಲಿಟ್ಟು, ಬೇಕಿರುವ ಜಮೀನು ನೀಡಿದರೆ ಕೇಂದ್ರ ಸರಕಾರವೂ ಏಮ್ಸ್ ಆರಂಭಿಸಲು ಮುಂದಾಗಲಿದೆ.
ಉತ್ತರ ಕರ್ನಾಟಕದಲ್ಲೂ ಎಸ್ಇಝೆಡ್ ಘೋಷಿಸಲಿ
ಕಲ್ಯಾಣ ಕರ್ನಾಟಕ ಭಾಗದಲ್ಲಿಎಸ್ಇಝೆಡ್(ವಿಶೇಷ ಆರ್ಥಿಕ ವಲಯ)ಗಳಿಲ್ಲ. ಬೆಂಗಳೂರಿನಲ್ಲಿ ಈಗಾಗಲೇ 34 ಎಸ್ಇಝೆಡ್ಗಳಿದ್ದು, ಹೊಸದಾಗಿ 24 ಘೋಷಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಹಿನ್ನೆಲೆಯಲ್ಲಿಎಸ್ಇಝೆಡ್ಗಳು ಘೋಷಿಸಿದರೆ ಐದು ವರ್ಷಗಳವರೆಗೆ ಕೈಗಾರಿಕೆಗಳಿಗೆ ವಿದ್ಯುತ್ ಟ್ಯಾಕ್ಸ್ ಮನ್ನಾ ಆಗಲಿದ್ದು, ಆರ್ಥಿಕ ಚೇತರಿಕೆಯಾಗಿ, ಉದ್ಯೋಗವೂ ಹೆಚ್ಚಳವಾಗಿ, ಅಭಿವೃದ್ಧಿಯಾಗಲಿದೆ.
ರಾಜ್ಯದವರಿಗೇ ವಿದ್ಯುತ್ ನೀಡಿ
ಪ್ರಸ್ತುತ ಉತ್ತರ ಕರ್ನಾಟಕ ಭಾಗದಲ್ಲಿ ಉತ್ಪಾದನೆಯಾಗುತ್ತಿರುವ ವಿದ್ಯುತನ್ನು ರಾಜ್ಯದಿಂದ ಅರುಣಾಚಲ ಪ್ರದೇಶಕ್ಕೆ 2.49 ಪೈಸೆಗೆ ಮಾರಾಟ ಮಾಡಲಾಗುತ್ತಿದೆ. ಆದರೆ, ಅದೇ ವಿದ್ಯುತನ್ನು ನಮ್ಮ ಕೈಗಾರಿಕೆಗಳಿಗೆ 7 ರೂ.ವರೆಗೆ ನೀಡಲಾಗುತ್ತಿದೆ. ಅವರಿಗೆ ವಿದ್ಯುತ್ ನೀಡುವ ಬದಲು ನಮ್ಮ ರಾಜ್ಯದವರಿಗೆ 3 ರೂ.ವರೆಗೆ ನೀಡಿದರೆ ಇಲ್ಲಿನವರಿಗೆ ಅನುಕೂಲವಾಗುತ್ತಿದೆ. ಇದಕ್ಕೆ ನಿಯಮಗಳನ್ನು ರೂಪಿಸಿ ಇಲ್ಲೇ ವಿದ್ಯುತ್ ಬಳಕೆಗೆ ಅನುಕೂಲ ಮಾಡಿಕೊಡಬೇಕೆಂಬುದು ಜನರ ಬೇಡಿಕೆಯಾಗಿದೆ.
ಸಚಿವಾಲಯಕ್ಕೆ ನೀಡಿ ಅನುದಾನ
ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ಕಳೆದ ಬಜೆಟ್ನಲ್ಲಿ ಹಾಗೂ ಸಿಎಂ ಕಲ್ಯಾಣ ಕರ್ನಾಟಕ ಉತ್ಸವ ಸಂದರ್ಭದಲ್ಲಿ ಘೋಷಿಸಿದ್ದಾರೆ. ಆದರೆ ಅನುದಾನವೇ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಈ ಬಾರಿ ಸಚಿವಾಲಯಕ್ಕೆ ಅನುದಾನ ಕೊಟ್ಟು ಈ ಭಾಗದ ಅಭಿವೃದ್ಧಿಗೆ ಮುಂದಾಗಬೇಕಿದೆ.