ಬಿಲ್ವಪತ್ರೆಗಳ ವನ; ಇಡೀ ದೇಶದಲ್ಲಿ ಒಂದೇ ಕಡೆ ಅತಿಹೆಚ್ಚು ಬಿಲ್ವಪತ್ರೆ ಇರೋದು ಚಿಕ್ಕಮಗಳೂರಲ್ಲಿ
ಚಿಕ್ಕಮಗಳೂರು: ಬಿಲ್ವಪತ್ರೆ ಅಂದ್ರೆ ಶಿವನ ಭಕ್ತರಿಗೆ ಎಲ್ಲಿಲ್ಲದ ಗೌರವ. ಸಾಕ್ಷಾತ್ ಶಿವನಿಗೆ ಪರಮಪ್ರಿಯವಾದ ಹೂ. ಬಿಲ್ವ ಪತ್ರೆಯಲ್ಲೇ ಶಿವನನ್ನ ಪೂಜಿಸಬೇಕು ಅನ್ನೋದು ಶಿವಭಕ್ತರ ಕನಸು. ಬಿಲ್ವಪತ್ರೆಯಲ್ಲಿ ಶಿವಾರಾಧನೆ ಮಾಡುದ್ರೆ ಶಿವ ಮೆಚ್ಚಿ ಭಕ್ತರ ಬೇಡಿಕೆ ಈಡೇರಿಸ್ತಾನೆ ಅನ್ನೋದು ಭಕ್ತರ ನಂಬಿಕೆ. ಆದ್ರೆ, ಈ ಬಿಲ್ವಪತ್ರೆ ಎಲ್ಲೆಂದರಲ್ಲಿ ಸಿಗೋದಿರೋದೆ ಶಿವಭಕ್ತರ ಕೊರಗು. ತಮ್ಮ ಕನಸನ್ನು ಈಡೇರಿಸಿಕೊಳ್ಳಲು ಸಸ್ಯ ರಾಶಿಯಲ್ಲೇ ಅಪರೂಪ ಹಾಗೂ ಆಧ್ಯಾತ್ಮಿಕವಾಗಿ ಪರಮ ಶ್ರೇಷ್ಠವಾಗಿರುವ ಬಿಲ್ವ ಪತ್ರೆಗಾಗಿ ಕಾಡು-ಮೇಡು ಅಲೆಯೋ ಭಕ್ತರೂ ಉಂಟು. ಆದ್ರೆ, ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣಕ್ಕೆ ಹೊಂದಿಕೊಂಡಂತಿರೋ ಕಲ್ಮುರುಡೇಶ್ವರ ಸ್ವಾಮಿ ಮಠದ ಆವರಣದಲ್ಲಿ ಒಂದಲ್ಲ, ಎರಡಲ್ಲ, 800ಕ್ಕೂ ಅಧಿಕ ಬಿಲ್ವಪತ್ರೆ ಮರಗಳಿವೆ. ದೇಶದಲ್ಲೇ ಪ್ರಥಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಬಿಲ್ವಪತ್ರೆ ವನದ ಸೊಬಗು ಸವಿಯಲು ರಾಜ್ಯದ ಮೂಲೆ, ಮೂಲೆಗಳಿಂದ ಪ್ರತಿನಿತ್ಯ ನೂರಾರು ಭಕ್ತರು ಆಗಮಿಸ್ತಾರೆ. ಮಠಕ್ಕಾಗಮಿಸೋ ನೂರಾರು ಭಕ್ತರು ತಣ್ಣೀರು ಸ್ನಾನ ಮಾಡಿ ಬಿಲ್ವಪತ್ರೆ ಎಲೆ ಕೊಯ್ದು ಭಕ್ತಿಯಿಂದ ಇಲ್ಲಿನ ಕಲ್ಮುರುಡೇಶ್ವರನಿಗೆ ಮುಡಿಸೋದು ವಾಡಿಕೆ. ಹೀಗೆ ಮಾಡೋದ್ರಿಂದ ಭಕ್ತರ ಇಷ್ಟಾರ್ಥಗಳು ನೆರವೇರುತ್ವೆ ಅನ್ನೋದು ಅವ್ರ ನಂಬಿಕೆ.
ಇತ್ತೀಚಿನ ದಿನಗಳಲ್ಲಿ ಅಪರೂಪದಲ್ಲೂ ಅತ್ಯಂತ ವಿರಳವಾಗಿರುವ ಬಿಲ್ವಪತ್ರೆಯ ಒಂದು ಮರ ಕಂಡರೆಯೇ ಶಿವಭಕ್ತರು ನಾನೇ ಧನ್ಯ ಅಂತಾರೆ. ಅಂತದ್ದರಲ್ಲಿ ನೂರಾರು ಮರಗಳನ್ನ ಇಲ್ಲಿಗೆ ತಂದು ನೆಟ್ಟೋರ್ಯಾರು ಅನ್ನೋ ಪ್ರಶ್ನೆಗೆ ಉತ್ತರವಿಲ್ಲ. ಆದ್ರೆ, ಈ ಪ್ರಶ್ನೆಗೆ ಸ್ಥಳೀಯರು ಹತ್ತಾರು ಪುರಾಣದ ಕಥೆ ಹೇಳ್ತಾರೆ. ನೂರಾರು ವರ್ಷಗಳ ಹಿಂದೆ ಮರುಳಸಿದ್ದೇಶ್ವರನೆಂಬ ಸನ್ಯಾಸಿಯೊಬ್ಬ ಇಲ್ಲಿ ತಪಸ್ಸು ಮಾಡ್ತಿದ್ರಂತೆ. ಆ ವೇಳೆ ಅವ್ರು ರುದ್ದಾಕ್ಷಿಯನ್ನು ಮಠದ ಸುತ್ತಲೂ ಚೆಲ್ಲಿದ್ದರಿಂದ ಈ ಮರಗಳು ಬೆಳೆದಿವೆ, ಮರಗಳನ್ನು ಯಾರು ಬೆಳೆಸಿಲ್ಲ. ಈ ದೇವಾಲಯದ ಸುತ್ತಲೂ ಬಿಲ್ವಪತ್ರೆ ಮರಗಳಿವೆ. ಮಧ್ಯದಲ್ಲಿ ಕಲ್ಮುರೇಶ್ವರ ಸ್ವಾಮಿಯ ಗದ್ದುಗೆ ಇದೆ. ಶಿವನ ಶಕ್ತಿಯಿಂದ ನೈಸರ್ಗಿಕವಾಗಿ ಬೆಳೆದು ನಿಂತಿವೆ ಅಂತಾರೆ ಇಲ್ಲಿನ ಹಿರೀಕರು ಹಾಗೂ ಭಕ್ತರು.
ಒಟ್ಟಾರೆ, ಈ ವನದಲ್ಲಿ ಬಿಲ್ವಪತ್ರೆ ಹೊರತುಪಡಿಸಿ ಬೇರಾವ ಮರಗಿಡಗಳಿಲ್ಲ. ಸುಮಾರು 2 ಎಕರೆ ಪ್ರದೇಶದಲ್ಲಿ ಎಗ್ಗಿಲ್ಲದ ಬೆಳೆದಿರೋ ಈ ಮರಗಳು ಭಕ್ತರ ಪಾಲಿಗೆ ಸಾಕ್ಷಾತ್ ಶಿವನ ರೂಪ. ಹತ್ತಾರು ಎಕರೆಯಲ್ಲಿದ್ದ ಬಿಲ್ವಪತ್ರೆ ವನ ಸೂಕ್ತ ನಿರ್ವಹಣೆ ಇಲ್ದೆ ಸೊರಗಿದೆ. ಸ್ಥಳೀಯ ದಾನಿಯೊಬ್ಬರ ಸಹಾಯದಿಂದ ಮಠ ನಡೆಯುತ್ತಿದ್ದು, ಸರ್ಕಾರದ ಸಹಕಾರವಿಲ್ಲ. ಮಠಕ್ಕಿರೋ ಅಲ್ಪ ಅದಾಯದಿಂದ ಈ ವನದ ರಕ್ಷಣೆಯಾಗುತ್ತಿದೆ. ರಾಜ್ಯದಲ್ಲಿ ಬೇರೆಲ್ಲೂ ಸಿಗದ ಈ ಅಪರೂಪದ ಸಸ್ಯ ಸಂಪತ್ತಿನತ್ತ ಸರ್ಕಾರ ಗಮನ ಹರಿಸಬೇಕೆಂಬುದು ಸ್ಥಳಿಯರ ಆಗ್ರಹಿಸಿದ್ದಾರೆ.