ರಾಜ್ಯದ ಸರಕಾರಕ್ಕೆ ಬದ್ಧತಾ ವೆಚ್ಚವೇ ಹೊರೆ-ಸಾಲದ ಮೊರೆ, ಕಾಮಗಾರಿಗಳಿಗೆ ದುಡ್ಡೇ ಇಲ್ಲ!
‘ಸಾರ್ವಕಾಲಿಕ ಶ್ರೇಷ್ಠ ದಾಖಲೆ’ ಎಂಬಂತೆ ರಾಜ್ಯದ ಸರಕಾರದ ಬದ್ಧತಾ ವೆಚ್ಚದ ಪ್ರಮಾಣವು 2020-21ರಲ್ಲಿ ಶೇ. 100 ಗಡಿ ದಾಟಿದೆ! ಹಣಕಾಸು ಸ್ಥಿತಿ ಚಿಂತಾಜನಕವಾಗಿರುವುದೇ ಇದಕ್ಕೆ ಕಾರಣ. ಇದೇ ಪರಿಸ್ಥಿತಿ ಮುಂದುವರಿದರೆ ಆಸ್ತಿ ಸೃಜನೆಯಂತಹ ಅಭಿವೃದ್ಧಿ ಕಾಮಗಾರಿಗೆ ಹಣ ಹೊಂದಿಸಲು ಪರದಾಡುವ ಸನ್ನಿವೇಶ ಸೃಷ್ಟಿಯಾಗಲಿದೆ.
ಸದ್ಯದ ಲೆಕ್ಕಾಚಾರದಂತೆ ರಾಜ್ಯದ ಆರ್ಥಿಕತೆ ವರ್ಷದಿಂದ ವರ್ಷಕ್ಕೆ ಇನ್ನಷ್ಟು ಸಂಕಷ್ಟದತ್ತ ಸಾಗಲಿದೆ. 2021-25ಕ್ಕೆ ಸಂಬಂಧಿಸಿದ ಮಧ್ಯಮಾವಧಿ ವಿತ್ತೀಯ ಯೋಜನೆಯಲ್ಲಿಇದರ ಮುನ್ಸೂಚನೆಯಿದೆ. ಅದರಂತೆ 2024-25ರ ಹೊತ್ತಿಗೆ ಬಂಡವಾಳ ವೆಚ್ಚದ(ಅಭಿವೃದ್ಧಿ ಕಾಮಗಾರಿಗೆ ಬಳಕೆಯಾಗುವ ಅನುದಾನ) ಮೊತ್ತ 10,942 ಕೋಟಿ ರೂ.ಗೆ ತಗ್ಗಲಿದೆ. ಹಾಗಾಗಿ ಮತ್ತಷ್ಟು
ಸಾಲ ಮಾಡುವುದೂ ಅನಿವಾರ್ಯವಾಗಲಿದೆ. ಮಧ್ಯಮಾವಧಿ ವಿತ್ತೀಯ ಯೋಜನೆಯ ಲೆಕ್ಕಾಚಾರವೇ ಬುಡಮೇಲಾಗಿ ಯಾವುದಾದರೂ ಮೂಲದಿಂದ ಭರಪೂರ ಸಂಪನ್ಮೂಲ ಹರಿದು ಬಂದರೆ ಮಾತ್ರ ಈ ವಿಷಮ ಸ್ಥಿತಿಯಿಂದ ರಾಜ್ಯ ಪಾರಾಗಬಹುದಾಗಿದೆ.
ಮಧ್ಯಮಾವಧಿ ವಿತ್ತೀಯ ಯೋಜನೆ ಅನುಸಾರ 2020-21ರಲ್ಲಿ ಬದ್ಧತಾ ವೆಚ್ಚದ ಪ್ರಮಾಣ ಶೇ.102ರಷ್ಟಾಗಿದೆ. ಕಳೆದ ವರ್ಷದ ಆಯವ್ಯಯದ ಅಂದಾಜಿನಂತೆ ಈ ಪ್ರಮಾಣ ಶೇ.90ರಷ್ಟು ಇರಬೇಕಿತ್ತು. ಆದರೆ, ಕೋವಿಡ್ ಬಂದದ್ದರಿಂದ ರಾಜಸ್ವ ಸ್ವೀಕೃತಿ ಕಡಿಮೆಯಾಗಿದೆ. ಹಾಗಂತ ಸಂಬಳ, ಸಾರಿಗೆಯನ್ನು ಸರಕಾರ ನಿಲ್ಲಿಸಿಲ್ಲ. ಬಡ ವರ್ಗದವರಿಗೆ ಕೋವಿಡ್ ಪ್ಯಾಕೇಜ್ ಕೂಡ ನೀಡಲಾಗಿದೆ. ಇದರಿಂದಾಗಿಯೇ ಬದ್ಧತಾ ವೆಚ್ಚದಲ್ಲೂ ರಾಜ್ಯ ಸರಕಾರ ದಾಖಲೆ ಬರೆದಂತಾಗಿದೆ.
ಕಳವಳದ ನಡುವೆಯೂ ಏರಿಕೆ
ಹದಿನೈದನೇ ಹಣಕಾಸು ಆಯೋಗದ ಶಿಫಾರಸಿನಂತೆ ಕೇಂದ್ರ ತೆರಿಗೆಯಲ್ಲಿರಾಜ್ಯದ ಪಾಲು ಕಡಿಮೆಯಾಗಿದೆ. ವೇತನ, ಪಿಂಚಣಿ, ಬಡ್ಡಿ ಪಾವತಿ ಸೇರಿ ಬದ್ಧತಾ ವೆಚ್ಚ ಶೇ. 90ರಷ್ಟು ತಲುಪಿದೆ. ಹಾಗಾಗಿ ಜಲಸಂಪನ್ಮೂಲ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ ವಲಯದಲ್ಲಿನ ಬೃಹತ್ ಬಂಡವಾಳ ವೆಚ್ಚ ಭರಿಸಲು ಸವಾಲಾಗಿದೆ. ಈ ಹಿನ್ನೆಲೆಯಲ್ಲಿಜಾಗೃತೆ ಅಗತ್ಯವೆಂದು 2020-21ರ ಮಧ್ಯಮಾವಧಿ ವಿತ್ತೀಯ ಯೋಜನೆಯಲ್ಲಿಕಳವಳ ವ್ಯಕ್ತಪಡಿಸಲಾಗಿದೆ. ಈ ನಡುವೆಯೂ ಬದ್ಧತಾ ವೆಚ್ಚ ಶರವೇಗದಲ್ಲಿಓಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ.