ಕಲಬುರಗಿ : ಶಹಾಬಾದನಲ್ಲಿ ಮತ್ತೆ ಕಾಣಿಸಿಕೊಂಡ ಕೊರೋನಾ ಸೋಂಕು:ಮಹಾರಾಷ್ಟ್ರ ಮತ್ತು ಕೇರಳದಿಂದ ಬಂದವರು ಮಾಹಿತಿ ಕೊಡಿ
ಕಲಬುರಗಿ : ಶಹಾಬಾದ ಪಟ್ಟಣದಲ್ಲಿ ಮತ್ತೆ ಕೋವಿಡ್ ಸೋಂಕು ಕಂಡುಬಂದಿದ್ದರಿಂದ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಇತ್ತೀಚೆಗೆ ಮಹಾರಾಷ್ಟ್ರ, ಕೇರಳ ರಾಜ್ಯದಿಂದ ತಾಲೂಕಿಗೆ ಹಿಂದಿರುಗಿದರೆ ಮಾಹಿತಿ ಕೊಡಬೇಕು ಎಂದು ಶಹಾಬಾದ ತಹಶೀಲ್ದಾರ ಸುರೇಶ ವರ್ಮಾ ತಿಳಿಸಿದ್ದಾರೆ.
ಮಹಾರಾಷ್ಟ್ರ ಮತ್ತು ಕೇರಳ ರಾಜ್ಯದಲ್ಲಿ ಪಾಸಿಟಿವ್ ಸಂಖ್ಯೆ ಏರುತ್ತಿದ್ದು, ಕೋವಿಡ್ ಎರಡನೇ ಅಲೆಯ ಮುನ್ಸೂಚನೆಯಾಗಿದೆ. ಕೋವಿಡ್ ಸೋಂಕು ನಮ್ನಿಂದ ಇನ್ನೂ ದೂರವಾಗಿಲ್ಲ ಎಂಬುದನ್ನು ಜನರು ಮರೆಯಬಾರದು ಎಂದಿದ್ದಾರೆ.
ಕೋವಿಡ್ ಸೋಂಕಿನ ಜೊತೆ ಬದುಕು ಸಾಗಿಸುವುದು ಅನಿವಾರ್ಯವಾಗಿದೆ.
ಕೊರೋನಾ ಸೋಂಕು ಹರಡದಂತೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲನೆ ಹಾಗೂ ಆಗಾಗ ಸಾಬೂನು, ಹ್ಯಾಂಡ್ ಸ್ಯಾನಿಟೈಸರಿನಿಂದ ಕೈ ತೊಳೆಯುವ ರೂಢಿಯನ್ನು ಬಿಡಬಾರದು ಎಂದು ಅವರು ಸಲಹೆ ನೀಡಿದ್ದಾರೆ.
ಕೆಮ್ಮು, ನೆಗಡಿ, ಜ್ವರ, ತೀವ್ರತರಹದ ಮೈಕೈ ನೋವಿನ ಲಕ್ಷಣ ಕಂಡುಬಂದಲ್ಲಿ ತಡ ಮಾಡದೇ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಬೇಕು ಎಂದು ಅವರು ತಿಳಿಸಿದ್ದಾರೆ.
ವ್ಯಾಕ್ಸಿನ್ ಪಡೆಯಿರಿ:
ತಾಲೂಕಿನ ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಾರದಲ್ಲಿ ಸೋಮವಾರ, ಬುಧವಾರ, ಶುಕ್ರವಾರ ಹಾಗೂ ಶನಿವಾರ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ವೈದ್ಯರ ದೃಢೀಕರಣದ ಮೇರೆಗೆ 45 ರಿಂದ 59 ವರ್ಷದೊಳಗಿನ ಧೀರ್ಘ ಕಾಯಿಲೆಯಿಂದ ಬಳಲುತ್ತಿರುವವರಿಗೆ ಉಚುತವಾಗಿ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಯಾವುದೇ ಭಯವಿಲ್ಲದೆ ಲಸಿಕೆ ಪಡೆಯಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಜಾತ್ರೆ, ಉರುಸ್ ನಡೆಸಿದರೆ ಕಾನೂನು ಕ್ರಮ:
ಕೋವಿಡ್ ಎರಡನೇ ಅಲೆಯ ಭೀತಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರು ಈಗಾಗಲೆ ಜಿಲ್ಲೆಯಾದ್ಯಂತ ಜಾತ್ರೆ, ಉರುಸ್ ಗಳನ್ನು ನಿಷೇಧಿಸಿದ್ದು, ತಾಲೂಕಿನಲ್ಲಿ ಎಲ್ಲಿಯೂ ಜಾತ್ರೆ, ಉರುಸ್ ಆಯೋಜಿಸುವಂತಿಲ್ಲ. ಇದನ್ನು ಉಲ್ಲಂಘಿಸಿದಲ್ಲಿ ಕಾನೂನು ಕ್ರಮ ಅನಿವಾರ್ಯ ಎಂದು ತಹಶೀಲ್ದಾರ ಸುರೇಶ ವರ್ಮಾ ಎಚ್ಚರಿಕೆ ನೀಡಿದ್ದಾರೆ.
ಶಾಲೆ ತೆರೆದರೆ ಕ್ರಿಮಿನಲ್ ಕೇಸ್ : ರಾಜ್ಯ ಸರ್ಕಾರವು 1 ರಿಂದ 5ನೇ ತರಗತಿ ವರೆಗಿನ ಶಾಲೆಗಳನ್ನು ತೆರೆಯಲು ಇನ್ನು ಅನುಮತಿ ನೀಡಿಲ್ಲ. ಹೀಗಿರುವಾಗ ಶಾಲೆ ತೆರೆದು ಮಕ್ಕಳಿಗೆ ಶಾಲೆಗೆ ಬರುವಂತೆ ಒತ್ತಾಯ ಮಾಡಿದಲ್ಲಿ ಅಂತವರ ಮೇಲೆ ಕ್ರಿಮಿನಲ್ ಕೇಸ್ ಹಾಕಲಾಗುವುದು ಎಂದು ತಾಲೂಕಿನ ದಂಡಾಧಿಕಾರಿಯಾಗಿರುವ ಸುರೇಶ ವರ್ಮಾ ಖಡಕ್ ಎಚ್ಚರಿಕೆ ನೀಡಿದ್ದಾರೆ.