ಆಂಧ್ರದ ಸಾರ್ವಜನಿಕ ಕುಂದುಕೊರತೆ ಪರಿಹಾರ ಯೋಜನೆ ‘ಸ್ಪಂದನಾ’ ರಾಜ್ಯದಲ್ಲೂ ಜಾರಿ ಸಾಧ್ಯತೆ
ವಿಜಯವಾಡ: ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರು ಪ್ರಾರಂಭಿಸಿದ ಸಾರ್ವಜನಿಕ ಕುಂದುಕೊರತೆ ಪರಿಹಾರ ಕಾರ್ಯಕ್ರಮ ‘ಸ್ಪಂದನಾ’ವನ್ನು ಕರ್ನಾಟಕದಲ್ಲೂ ಜಾರಿಗೆ ತರುವ ಸಾಧ್ಯತೆ ಇದೆ.
ಜಗನ್ ಅವರು ಸಾರ್ವಜನಿಕರ ಕುಂದುಕೊರತೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸ್ಪಂದನಾ ಜಾರಿಗೆ ತಂದಿದ್ದು, ಇದರಿಂದ ಪ್ರೇರಿತವಾಗಿರುವ ಕರ್ನಾಟಕ ಸರ್ಕಾರ, ರಾಜ್ಯದ ಯೋಜನೆಯ ನಿರ್ದೇಶಕ, ಇ-ಗವರ್ನನ್ಸ್ ಯುನಿಟ್, ಪ್ರೋಗ್ರಾಂ ಮ್ಯಾನೇಜರ್, ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ ಮತ್ತು ಇತರರು ಸೋಮವಾರ ಆಂಧ್ರ ಪ್ರದೇಶ ಸೆಕ್ರೆಟರಿಯೇಟ್ನ ಆರ್ಟಿಜಿಎಸ್ನಲ್ಲಿರುವ ಕೇಂದ್ರ ಸ್ಪಂದನಾ ಮಾನಿಟರಿಂಗ್ ಘಟಕಕ್ಕೆ ಭೇಟಿ ನೀಡಿದರು.
ರಾಜ್ಯದಲ್ಲೂ ಸಾರ್ವಜನಿಕ ಕುಂದುಕೊರತೆ ಪರಿಹಾರಕ್ಕೆ ಸ್ಪಂದನಾ ಮಾದರಿಯ ಯೋಜನೆ ಜಾರಿಗೆ ತರಬೇಕು ಎಂಬ ಉದ್ದೇಶದಿಂದ ಕರ್ನಾಟಕ ತಂಡ ಆಂಧ್ರಕ್ಕೆ ಭೇಟಿ ನೀಡಿದ್ದು, ಆಂಧ್ರ ಮುಖ್ಯಮಂತ್ರಿಗಳ ವಿಶೇಷ ಅಧಿಕಾರಿ ಡಾ.ಎಂ.ಹರಿಕೃಷ್ಣ ಮತ್ತು ಆರ್ಟಿಜಿಎಸ್ ಸಿಇಒ ವಿದ್ಯಾ ಸಾಗರ್ ಅವರು ಸ್ಪಂದನಾ ಯೋಜನೆ ಮತ್ತು ಅದರ ತಾಂತ್ರಿಕತೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಸ್ಪಂದನಾ ಕಾರ್ಯಕ್ರಮದ ಹಿಂದಿನ ಮುಖ್ಯಮಂತ್ರಿಗಳ ದೂರದೃಷ್ಟಿ ಮತ್ತು ಕುಂದುಕೊರತೆ ಪರಿಹಾರ ಪ್ರಕ್ರಿಯೆಯಲ್ಲಿನ ಮಾನವೀಯತೆಯನ್ನು ಹರಿಕೃಷ್ಣ ಅವರು ವಿವರಿಸಿದರು.
ಜಗನ್ ಮೋಹನ್ ರೆಡ್ಡಿ ಅವರು ಅಧಿಕಾರಕ್ಕೆ ಬಂದ ನಂತರ ನಡೆದ ಮೊದಲ ಸಂಪುಟ ಸಭೆಯಲ್ಲಿಯೇ ಸ್ಪಂದನಾ ಯೋಜನೆಯನ್ನು ಘೋಷಿಸಿದರು. “ಸ್ಪಂದನಾ ಯೋಜನೆ ಕರ್ನಾಟಕ ತಂಡಕ್ಕೆ ಸ್ಫೂರ್ತಿ ನೀಡಿದೆ ಮತ್ತು ಮುಖ್ಯಮಂತ್ರಿಗಳು ಈ ಕಾರ್ಯಕ್ರಮವನ್ನು ವೈಯಕ್ತಿಕವಾಗಿ ಹೇಗೆ ಮೇಲ್ವಿಚಾರಣೆ ಮಾಡುತ್ತಾರೆ ಎಂಬುದನ್ನು ತಿಳಿದುಕೊಂಡರು” ಎಂದು ಅಧಿಕಾರಿಗಳು ತಿಳಿಸಿದ್ದಾರೆ.