ರೈತರ ಹೋರಟಕ್ಕಿಂದು 4 ತಿಂಗಳು: ಕೃಷಿ ಮಸೂದೆ ರದ್ದತಿಗೆ ಆಗ್ರಹಿಸಿ ಇಂದು ಭಾರತ್ ಬಂದ್, ಸಾಮಾನ್ಯ ಜನಜೀವನದಲ್ಲಿ ವ್ಯತ್ಯಯ ಸಾಧ್ಯತೆ
ನವದೆಹಲಿ: ಕೇಂದ್ರ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರಾಜಧಾನಿ ದೆಹಲಿಯಲ್ಲಿ ವಿವಿಧ ರಾಜ್ಯಗಳ ರೈತರು ನಡೆಸುತ್ತಿರುವ ಪ್ರತಿಭಟನೆ ಶುಕ್ರವಾರ 4 ತಿಂಗಳನ್ನು ಪೂರೈಸಲಿದೆ. ಈ ಹಿನ್ನೆಲೆಯಲ್ಲಿ ರೈತ ಸಂಘಟನೆಗಳು ಶುಕ್ರವಾರ ಭಾರತ್ ಬಂದ್’ಗೆ ಕರೆ ಕೊಟ್ಟಿದ್ದು, ಇದನ್ನು ಯಶಸ್ವಿಗೊಳಿಸುವಂತೆ ದೇಶದ ಜನತೆಯನ್ನು ಮನವಿ ಮಾಡಿಕೊಂಡಿವೆ. ಹೀಗಾಗಿ ಕೆಲ ರಾಜ್ಯಗಳಲ್ಲಿ ಶುಕ್ರವಾರ ರಸ್ತೆ, ರೈಲು, ಸಂಚಾರ ಮತ್ತು ಸಾಮಾನ್ಯ ಜನಜೀವನದಲ್ಲಿ ವ್ಯತ್ಯಯವಾಗುವ ಸಾಧ್ಯತೆಗಳಿವೆ.
ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಎರಡನೇ ಭಾರತ್ ಬಂದ್ ಇದಾಗಿದೆ. ಡಿ.8ರಂದು ರೈತರು ನಡೆಸಿದ್ದ ಬಂದ್’ಗೆ ದೆಹಲಿ, ಹರಿಯಾಣ, ಪಂಜಾಬ್, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು ಹಾಗೂ ಅಸ್ಸಾಂನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಹಲವು ಕಾರ್ಮಿಕ ಸಂಘಟನೆಗಳು, ಕಾಂಗ್ರೆಸ್, ಎನ್’ಸಿಪಿ ಸೇರಿದಂತೆ 24 ರಾಜಕೀಯ ಪಕ್ಷಗಳು ಆ ಬಂದ್’ಗೆ ಬೆಂಬಲ ನೀಡಿದ್ದವು. ಶುಕ್ರವಾರ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಬಂದ್ ಇರಲಿದ್ದು, ಎಲ್ಲಾ ಅಂಗಡಿ-ಮುಂಗಟ್ಟುಗಳು ಮುಚ್ಚಲಿವೆ. ರಸ್ತೆ, ರೈಲು ಸಂಚಾರಕ್ಕೆ ಅವಕಾಶ ಇರುವುದಿಲ್ಲ ಎಂದು ರೈತ ಸಂಘಟನೆಗಳು ತಿಳಿಸಿವೆ.
ಇದೇ ವೇಳೆ ಮಾರ್ಚ್ 28ರಂದು ಹೋಳಿ ಹಬ್ಬ ಇದ್ದು, ಅಂದು ಹೋಳಿ ದಹನದ ವೇಳೆಗೆ ಕೃಷಿ ಕಾಯ್ದೆಗಳನ್ನು ರೈತರು ದಹಿಸಲಿದ್ದಾರೆಂದು ತಿಳಿಸಿದ್ದಾರೆ.
ಭಾರತ್ ಬಂದ್ ಹಿನ್ನೆಲೆ ಘಾಜಿಪುರ ಗಡಿ ರಾಷ್ಟ್ರೀಯ ಹೆದ್ದಾರಿ 24ರನ್ನು ಬಂದ್ ಮಾಡಲಾಗಿದೆ. ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಜನರು ಕೊರೋನಾ ಮುಂಜಾಗ್ರತಾ ಕ್ರಮಗಳನ್ನು ಪಾಲನೆ ಮಾಡಬೇಕಿದ್ದು, ಮಾಸ್ಕ್, ಸ್ವಚ್ಛತೆ ಹಾಗೂ ಸಾಮಾಜಿಕ ಅಂತರ ಪಾಲನೆ ಮಾಡಬೇಕೆಂದು ದೆಹಲಿ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.
ಸಾಮಾನ್ಯ ಜನ ಜೀವನದ ಮೇಲೆ ಪರಿಣಾಮ ಬೀರದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಶಾಂತಿ ಹದಗೆಡಲು ಯಾವುದೇ ಕಾರಣಕ್ಕೂ ಆಸ್ಪದ ನೀಡುವುದಿಲ್ಲ. ಈಗಾಗಲೇ ಬ್ಯಾರಿಕೇಡ್ ಗಳನ್ನೂ ಅಳವಡಿಸಲಾಗಿದೆ ಎಂದು ದೆಹಲಿ ಪೊಲೀಸ್ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.