Bharat Bandh: ಇಂದು ಭಾರತ್ ಬಂದ್; ರಾಜ್ಯದಲ್ಲಿ ಏನಿರತ್ತೆ? ಏನಿರಲ್ಲ?
ಬೆಂಗಳೂರು(ಮಾ. 26): ಕೇಂದ್ರ ಸರ್ಕಾರದ ವಿವಾದಿತ ಕೃಷಿ ಮಸೂದೆ ವಿರೋಧಿಸಿ ಕಳೆದ ನಾಲ್ಕು ತಿಂಗಳಿಂದಲೂ ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ನಿರಂತರ ಪ್ರತಿಭಟನೆ ನಡೆಯುತ್ತಿದ್ರೂ ಮಾನ್ಯ ಪ್ರಧಾನಿಗಳು ಮಾತ್ರ ಇದು ವರೆಗೂ ರೈತರ ಪರವಾಗಿ ದನಿ ಎತ್ತಿಲ್ಲ. ಹೀಗಾಗಿ ಕೆಂಡವಾಗಿರೋ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ಭಾರತ್ ಬಂದ್ ಗೆ ಕರೆ ನೀಡಿದೆ. ಇದಕ್ಕೆ ಬೆಂಬಲವಾಗಿ ರಾಜ್ಯ ರೈತ ಸಂಘಟನೆಗಳು ಬೆಂಬಲ ನೀಡಿದೆ. ಇಂದು ದೇಶದ್ಯಾಂತ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಎಲ್ಲ ಸೇವೆಗಳನ್ನು ಬಂದ್ ಮಾಡಲು ಎಸ್ಕೆಎಂ ಕರೆ ನೀಡಿದೆ. ಈ ಅವಧಿಯಲ್ಲಿ ದೇಶದಾದ್ಯಂತ ಎಲ್ಲ ಸಾರಿಗೆ, ರೈಲು, ಮಾರುಕಟ್ಟೆ ಮತ್ತು ಸಾರ್ವಜನಿಕ ಸ್ಥಳಗಳು ಬಂದ್ ಆಗಲಿವೆ ಎಂದು ಬಂದ್ ಗೆ ಕರೆ ಕೊಟ್ಟಿರುವ ನಾಯಕರು ತಿಳಿಸಿದ್ದಾರೆ. ಅಲ್ಲದೇ ಅನ್ನದಾತರಿಗೆ ಗೌರವ ಸೂಚಿಸಲು ಭಾರತ್ ಬಂದ್ನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಲಾಗಿದೆ. ಇನ್ನು ಬೆಂಗಳೂರಲ್ಲಿ ಕೇಂದ್ರ ಸರ್ಕಾರದ ವಿರುದ್ದ ಕಾಯ್ದೆಗಳ ಶವಯಾತ್ರೆ ನಡೆಸಲಾಗುತ್ತೆ ಎಂದು ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.
ಇಂದು ಕರೆ ಕೊಟ್ಟಿರುವ ಬಂದ್ ಗೆ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ಸಂಘಟನೆ ಹಿಂದೆ ಸರಿದಿದೆ. ಯಾವುದೇ ತಯಾರಿ ಇಲ್ಲದೆ ಬಂದ್ ಮಾಡಲು ಸಾಧ್ಯವಿಲ್ಲ. ಇನ್ನು ಒಂದೇ ದಿನ ಬಾಕಿ ಇರುವುದು. ಬಂದ್ ಮಾಡಿದರೆ ಯಶಸ್ವಿಯಾಗಲ್ಲ. ಮೊನ್ನೆ ದಿನ ಫ್ರೀಡಂಪಾರ್ಕ್ ನಲ್ಲಿ ಯಾರೋ ಒಬ್ಬರು 26 ರಂದು ಬಂದ್ ಮಾಡುತ್ತೇವೆ ಅಂತ ಫ್ಲೆಕ್ಸ್ ಹಿಡಿದುಕೊಂಡಿದ್ದರು. ನನ್ನ ಗಮನಕ್ಕೂ ಅದರಲ್ಲಿ ಏನಿದೆ ಅಂತ ಗೊತ್ತಾಗಲಿಲ್ಲ. ಇದೀಗ 26 ರಂದು ಭಾರತ್ ಬಂದ್ಗೆ ನಾವು ತಟಸ್ಥವಾಗಿರುತ್ತೇವೆ. ಬಂದ್ ಮಾಡಿಕೊಳ್ಳುವವರು ಮಾಡಿಕೊಳ್ಳಲಿ ಎಂದು ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.
ಭಾರತ ಬಂದ್ ನಿಂದ ರಾಜ್ಯದಲ್ಲಿ ಏನಿರುತ್ತೆ.?
ಶುಕ್ರವಾರ ಏನಿರುತ್ತೆ?
• ಎಂದಿನಂತೆ ಇರಲಿದೆ ಬಿಎಂಟಿಸಿ ಮತ್ತು ಕೆಎಸ್ಆರ್ಟಿಸಿ ಬಸ್ ಸಂಚಾರ
• ಮೆಟ್ರೋ ಸಂಚಾರ ಕೂಡ ಎಂದಿನಂತೆ ಇರಲಿದೆ
• ಆಟೋ, ಓಲಾ-ಊಬರ್ ಸಂಚಾರದಲ್ಲಿ ವ್ಯತ್ಯಯ ಇಲ್ಲ• ಖಾಸಗೀ ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ
• ರೈಲ್ವೇ ಸಂಚಾರವೂ ಎಂದಿನಂತೆ ಇರಲಿದೆ
• ಮಾರುಕಟ್ಟೆ ವ್ಯಾಪಾರ ವಹಿವಾಟಿನಲ್ಲಿ ವ್ಯತ್ಯಯ ಇಲ್ಲ
• ಮೆಡಿಕಲ್ ಶಾಪ್ ಮತ್ತು ಹಾಲಿನ ಮಳಿಗೆಗಳು ಎಂದಿಂತೆ ತೆರಿದಿರುತ್ತವೆ
• ಲಾರಿ ಮಾಲೀಕರಿಂದ ಬೆಂಬಲ ಇಲ್ಲ ಹೀಗಾಗಿ ಎಂದಿನಂತೆ ಸಂಚರಿಸಲಿವೆ ಲಾರಿಗಳು
ಏನಿರಲ್ಲ?
• ರಾಷ್ಟ್ರೀಯ ಚಾಲಕರ ವೇದಿಕೆ ಮತ್ತು ನಮ್ಮ ಚಾಲಕರ ಟ್ರೇಡ್ ಯೂನಿಯನ್ (ಟ್ಯಾಕ್ಸಿ) ಬಂದ್ ಗೆ ಬೆಂಬಲ
• ಇಂದು ಏರ್ಪೋರ್ಟ್ ಟ್ಯಾಕ್ಸಿ ಗಳು ಮತ್ತು ಬೇರೆ ಬೇರೆ ಜಿಲ್ಲೆಗಳಿಗೆ ಹೋಗಲು ವಾಹನ ಸಿಗುವುದು ಅನುಮಾನ
ಭಾರತ್ ಬಂದ್ ಗೆ ಬೆಂಬಲ ಸೂಚಿಸಿದ ರೈತ ಮುಖಂಡ ಕುರುಬೂರು ಶಾಂತಕುಮಾರ್, ಬಂದ್ ಮಾಡದಂತೆ ತೀರ್ಮಾನ ಮಾಡಲಾಗಿದೆ. ಬಂದ್ ಬದಲು ಪ್ರತಿಭಟನೆ ನಡೆಸಲು ನಿರ್ಧಾರ ಮಾಡಲಾಗಿದೆ. ಸರ್ಕಾರದ ರೈತ ವಿರೋಧಿ ಕೃಷಿ ಕಾಯ್ದೆ ವಿರೋಧಿಸಿ ರೈತರಿಂದ ಇಂದು ಶವಯಾತ್ರೆ ಮಾಡಲಾಗುವುದು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸಂಯುಕ್ತ ಕಿಸನ್ ಮೊರ್ಚಾ ಪ್ರತಿಭಟನೆಗೆ ಬೆಂಬಲವಿದೆ. ಹಲವಾರು ತಿಂಗಳಿಂದ ರಾಜ್ಯದಲ್ಲಿ ಮೂರು- ನಾಲ್ಕು ಬಂದ್ ಆಚರಣೆ ಮಾಡಲಾಗಿದೆ ಬಂದ್ ಬಗ್ಗೆ ಮುಂಜಾಗ್ರತಾ ಕ್ರಮವಾಗಿ ನಮ್ಮ ಎಲ್ಲ ರೈತ ಸಂಘಟನೆಗಳು ಯೋಜನೆಯನ್ನ ತಯಾರಿಸಿಲ್ಲ. ಈ ಹಿನ್ನೆಲೆಯಲ್ಲಿ ಬಂದ್ ಬದಲಿಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ರಾಜ್ಯದಲ್ಲಿ ಎಲ್ಲರೂ ಕೂಡ ಬೆಂಬಲ ಸೂಚಿಸಬೇಕೆಂದು ಮನವಿ ಮಾಡಿದರು.