ರಂಗೇರಿದ ಬೆಳಗಾವಿ ಲೋಕಸಭೆ ಉಪಚುನಾವಣೆ ಕಣ: ಸತೀಶ್ ಜಾರಕಿಹೊಳಿ-ಲಕ್ಷ್ಮೀ ಹೆಬ್ಬಾಳ್ಕರ್ ಬಿರುಸಿನ ಪ್ರಚಾರ
ಬೆಳಗಾವಿ(ಏ.1)- ಬೆಳಗಾವಿ ಲೋಕಸಭೆ ಉಪಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಇಂದು ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗ್ರಾಮೀಣ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಕಾರ್ಯ ನಡೆಸಿದ್ದಾರೆ. ಮತ್ತೊಂದು ಕಡೆ ಬಿಜೆಪಿ ಸಹ ಚುನಾವಣೆ ಗೆಲ್ಲಲ್ಲು ಹಿಂದೆ ಬಿದ್ದಿಲ್ಲ. ಇಂದು ಪ್ರಚಾರ ಕಚೇರಿಯನ್ನು ಮಹಾಲಕ್ಷ್ಮೀ ಪೂಜೆ ಮೂಲಕ ಉದ್ಘಾಟನೆ ಮಾಡಲಾಗಿದೆ. ಈ ವೇಳೆಯಲ್ಲಿ ಡಿಸಿಎಂ ಗೋವಿಂದ ಕಾರಜೋಳ, ಜಗದೀಶ ಶೆಟ್ಟರ್ ಹಾಗೂ ಉಮೇಶ ಕತ್ತಿ ಸೇರಿ ಅನೇಕ ನಾಯಕರು ಪಾಲ್ಗೊಂಡಿದ್ದರು. ಬೆಳಗಾವಿ ಲೋಕಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ನಾಯಕರು ಭರ್ಜರಿ ಪ್ರಚಾರ ಕಾರ್ಯವನ್ನು ಆರಂಭಿಸಿದ್ದಾರೆ. ಇಂದು ಬೆಳ್ಳಂ ಬೆಳಗ್ಗೆ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ನಿವಾಸಕ್ಕೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ ನೀಡಿದ್ದರು. ಕೆಲ ಕಾಲ ಕಚೇರಿಯಲ್ಲಿ ಮಾತುಕತೆ ನಡೆಸಿದ ನಾಯಕರು ನಂತರ ಜಂಟಿ ಸುದ್ದಿಗೋಷ್ಠಿಯನ್ನು ನಡೆಸಿದರು. ನಂತರ ಒಂದೇ ಕಾರಿನಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರ ಉಚ್ಚಗಾವಿ ಸೇರಿ ವಿವಿಧ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆಸಿದ್ರು. ಈ ವೇಳೆಯಲ್ಲಿ ದೇವಸ್ಥಾನಗಳಿಗೆ ಭೇಟಿ, ಗ್ರಾಮದಲ್ಲಿ ಪಾದಯಾತ್ರೆಯ ಮೂಲಕ ಬಿರುಸಿನ ಪ್ರಚಾರ ಕಾರ್ಯವನ್ನು ನಡೆಸಿದರು.
ರಾಜ್ಯ ಮತ್ತು ದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿ ಇದೆ. ಬೆಲೆ ಏರಿಕೆಗೆ ಸರ್ಕಾರಗಳೇ ನೇರ ಹೊಣೆಯಾಗಿದೆ. ಕಳೆದ 7 ವರ್ಷಗಳಿಂದ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ಕಾರ ಎಲ್ಲಾ ರಂಗದಲ್ಲಿ ವಿಫಲವಾಗಿದೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು. ವಿವಿಧ ಸಮುದಾಯದ ನಾಯಕರ ಜೊತೆ ಸಿಎಂ ಸಭೆ ಬಗ್ಗೆ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಇದೆಲ್ಲ ಸಾಮಾನ್ಯ. ಎಷ್ಟು ಮತಗಳ ಅಂತರದಿಂದ ಗೆಲ್ಲಬೇಕು ಎನ್ನುವುದು ಮತದಾರ ನಿರ್ಣಯ ಮಾಡುತ್ತಾರೆ ಎಂದು ಹೇಳಿದ್ದಾರೆ.
ಈ ವೇಳೆಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಅಭ್ಯರ್ಥಿಯ ಮೇಲೆ ಚುನಾವಣೆ ವಿಷಯ ಬದಲಾವಣೆ ಆಗಲಿದೆ. ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಎಲ್ಲರೂ ಒಪ್ಪುವಂತಹ ಅಭ್ಯರ್ಥಿಯಾಗಿದ್ದಾರೆ. ಜಾರಕಿಹೊಳಿ ಇಡೀ ಕ್ಷೇತ್ರದಲ್ಲಿ ತಮ್ಮದೇ ಆಗಿರೋ ಮತ ಬ್ಯಾಂಕ್ ಹೊಂದಿದ್ದಾರೆ. ಅವರಿಗೆ ಕ್ಷೇತ್ರದಲ್ಲಿ ವೈಯಕ್ತಿಕ ಸಂಪರ್ಕವೇ ಹೆಚ್ಚಿದೆ. ಇದು ಚುನಾವಣೆಯಲ್ಲಿ ಅನಕೂಲವಾಗಲಿದೆ. ಚುನಾವಣೆಯಲ್ಲಿ ಉಸ್ತುವಾರಿ ಅಗತ್ಯ ಇಲ್ಲ, ಎಲ್ಲವೂ ಸತೀಶ್ ಜಾರಕಿಹೊಳಿ ಅವರೇ ಆಗಿದ್ದಾರೆ ಎಂದರು.
ಬಿಜೆಪಿಯಿಂದ ಇಂದು ಮಂಗಲಾ ಸುರೇಶ ಅಂಗಡಿ ಪರ ಪ್ರಚಾರ ಕಾರ್ಯ ನಡೆಸಲು ಚುನಾವಣಾ ಕಾರ್ಯಾಲಯ ಉದ್ಘಾಟನೆ ಮಾಡಲಾಯಿತು. ಲಕ್ಷ್ಮೀ ಕಾಂಪ್ಲೆಕ್ಸ್ ನಲ್ಲಿ ಕಚೇರಿಯನ್ನು ಮಹಾಲಕ್ಷ್ಮೀ ಪೂಜೆ ಸಲ್ಲಿಸುವ ಮೂಲಕ ಉದ್ಘಾಟನೆ ಮಾಡಲಾಯಿತು. ಈ ವೇಳೆಯಲ್ಲಿ ಡಿಸಿಎಂ ಗೋವಿಂದ ಕಾರಜೋಳ, ಸಚಿವರಾದ ಉಮೇಶ ಕತ್ತಿ, ಜಗದೀಶ ಶೆಟ್ಟರ್ ಸೇರಿ ಜಿಲ್ಲೆಯ ನಾಯಕರು ಪಾಲ್ಗೊಂಡಿದ್ದರು. ನಂತರ ಮಾತನಾಡಿ ಜಗದೀಶ ಶೆಟ್ಟರ ಎಲ್ಲಾ ಕಾಲದಲ್ಲಿಯೂ ಬೆಲೆ ಏರಿಕೆ ನಡೆದಿದೆ. ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ನಿಶ್ಚಿತ ಎನ್ನುವ ವಿಶ್ವಾಸ ವ್ಯಕ್ತ ಪಡಿಸಿದರು.