ಬೆಡ್ ಬ್ಲಾಕಿಂಗ್ ದಂಧೆ ಬಯಲಿಗೆಳೆದ ತೇಜಸ್ವಿ ಸೂರ್ಯಗೆ ರಾಮಲಿಂಗಾ ರೆಡ್ಡಿ ಇರಿಸಿದ 11 ಪ್ರಶ್ನೆಗಳು
ಹೈಲೈಟ್ಸ್:
- ಬೆಡ್ ಬ್ಲಾಕಿಂಗ್ ಹಗರಣ ಬಯಲಿಗೆಳೆದ ತೇಜಸ್ವಿ ಸೂರ್ಯ
- ತೇಜಸ್ವಿ ಸೂರ್ಯಗೆ ರಾಮಲಿಂಗಾ ರೆಡ್ಡಿ ಪ್ರಶ್ನೆ
- ವೆಂಟಿಲೇಟರ್, ಆಕ್ಸಿಜನ್, ಔಷಧಗಳ ಬಗ್ಗೆಯೂ ಮಾತನಾಡಿ
- ನೀವು ತರಾಟೆಗೆ ತೆಗೆದುಕೊಳ್ಳಬೇಕಿರುವುದು ನಿಮ್ಮದೇ ಪಕ್ಷದವರನ್ನು
ಬೆಂಗಳೂರು: ನಗರದ ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ಕರಾಳ ಬೆಡ್ ಬ್ಲಾಕಿಂಗ್ ಅಕ್ರಮಗಳನ್ನು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮಂಗಳವಾರ ತೆರೆದಿಟ್ಟಿದ್ದರು. ಇದು ಹಲವು ಆಯಾಮಗಳಲ್ಲಿ ಚರ್ಚೆಗೆ ಒಳಗಾಗಿದೆ. ತೇಜಸ್ವಿ ಸೂರ್ಯ ಅವರ ಕಾರ್ಯವನ್ನು ಅನೇಕರು ಮೆಚ್ಚಿಕೊಂಡಿದ್ದರೆ, ಇನ್ನು ಅನೇಕರು ಇದರ ಹಿಂದೆ ಬೇರೆಯದೇ ತಂತ್ರಗಳಿವೆ ಎಂಬ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ.
ತೇಜಸ್ವಿ ಸೂರ್ಯ ಅವರ ಕಾರ್ಯವನ್ನು ಶ್ಲಾಘಿಸಿರುವ ಕಾಂಗ್ರೆಸ್ ಹಿರಿಯ ನಾಯಕ, ಶಾಸಕ ರಾಮಲಿಂಗಾ ರೆಡ್ಡಿ ಅವರಿಗೆ ಹಲವು ಪ್ರಶ್ನೆಗಳನ್ನೂ ಇರಿಸಿದ್ದಾರೆ. ಜತೆಗೆ ನೀವು ರಾಜ್ಯ ಸರ್ಕಾರವನ್ನು ಕೇಳಬೇಕಿರುವ ಪ್ರಶ್ನೆಗಳೂ ಸಾಕಷ್ಟಿವೆ, ಅವುಗಳನ್ನು ಮೊದಲು ಕೇಳಿ ಎಂದು ಸಲಹೆ ನೀಡಿದ್ದಾರೆ.
ರಾಮಲಿಂಗಾ ರೆಡ್ಡಿ ಅವರು ತಮ್ಮ ಫೇಸ್ಬುಕ್ ಪುಟದಲ್ಲಿ ಬರೆದಿರುವ ಸುದೀರ್ಘ ಪೋಸ್ಟ್ನಲ್ಲಿ ತೇಜಸ್ವಿ ಸೂರ್ಯ ಎದುರು ಬೆಡ್ ಹಗರಣ ಹಾಗೂ ಕೋವಿಡ್ ನಿರ್ವಹಣೆಯಲ್ಲಿನ ಲೋಪಗಳ ಕುರಿತು ಹಲವು ಸವಾಲುಗಳನ್ನು ಇರಿಸಿದ್ದಾರೆ.
ಸಂಸದರಾದ ತೇಜಸ್ವಿ ಸೂರ್ಯ ಅವರೇ,
ಬೆಡ್ ಬ್ಲಾಕಿಂಗ್ ದಂಧೆ ಮತ್ತು ಬಿಬಿಎಂಪಿ ವೈಫಲ್ಯದ ಬಗ್ಗೆ ತುಂಬ ಚೆನ್ನಾಗಿ ಬಿಚ್ಚಿಟ್ಟಿದ್ದೀರಿ. ಆದರೆ ತಾವು ಕೇವಲ ಬೆಡ್ ಬ್ಲಾಕಿಂಗ್ ಬಗ್ಗೆ ಮಾತನಾಡಿದ್ದೀರ.
ಇದರ ಜೊತೆಗೆ ವೆಂಟಿಲೇಟರ್, ಆಕ್ಸಿಜನ್ ಸಿಲೆಂಡರ್, ರೆಮಿಡಿಸಿವಿರ್ ಮತ್ತು ಕೋವಿಡ್ ಲಸಿಕೆ ಬಗ್ಗೆ ತಾವು ಅಗತ್ಯವಾಗಿ ಮಾತನಾಡಬೇಕಿತ್ತು ಮತ್ತು ಈ ಕೆಳಗಿನ ಪ್ರಶ್ನೆಗಳನ್ನು ಕೇಳಬೇಕಿತ್ತು.
ನೀವು ಅಧಿಕಾರಿಗಳ ಮೇಲೆ, ಏಜೆನ್ಸಿ ಬಗ್ಗೆ ಮಾತಡಿದ್ದೀರಿ. ಆದರೆ ಇದೆಲ್ಲಾ ಹೋಗಿ ಸೇರುವುದು ನಿಮ್ಮ ಬುಡಕ್ಕೆ. ಅಂದರೆ ಬಿಜೆಪಿಯ ಬುಡಕ್ಕೆ. ಅದರ ಶಾಸಕರ, ಸಂಸದರ ಬುಡಕ್ಕೆ.
ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರದಲ್ಲಿರುವಾಗ ನಿಮ್ಮ ಪ್ರಶ್ನೆಗಳೆಲ್ಲಾ ಯಾರಿಗೆ ?
ಅಧಿಕಾರಿಗಳ ಮೇಲೆ ಎಲ್ಲಾ ಆಪಾದನೆ ಹೊರಿಸಿ ಕೈ ತೊಳೆದುಕೊಳ್ಳಲು ಅವರು ನಿಮ್ಮ ಗುಲಾಮರಲ್ಲ.