‘ರಾಷ್ಟ್ರೀಯ ಶಿಕ್ಷಣ ನೀತಿ-2020’ ಕುರಿತ ಕೇಂದ್ರದ ಸಭೆಯನ್ನು ಬಹಿಷ್ಕರಿಸಿದ ತಮಿಳುನಾಡು
ಹೈಲೈಟ್ಸ್:
- ‘ರಾಷ್ಟ್ರೀಯ ಶಿಕ್ಷಣ ನೀತಿ-2020’ ಕುರಿತ ಸಭೆ ಬಹಿಷ್ಕರಿಸಿದ ತಮಿಳುನಾಡು
- ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಸಭೆ ಆಯೋಜಿಸಿದ್ದರು
- ಶಿಕ್ಷಣ ಕಾರ್ಯದರ್ಶಿಗಳ ಬದಲು ಶಿಕ್ಷಣ ಸಚಿವರ ಜತೆ ಸಭೆ ನಡೆಸಬೇಕೆಂದು ಸಲಹೆ
- ತಮಿಳುನಾಡು ಸಲಹೆಯನ್ನು ತಿರಸ್ಕರಿಸಿದ ಕೇಂದ್ರ ಸರಕಾರ
- ಈ ಹಿನ್ನೆಲೆ ಸಭೆಯನ್ನು ಬಹಿಷ್ಕರಿಸಲು ನಿರ್ಧರಿಸಿದ ತಿಮಿಳುನಾಡು
ಚೆನ್ನೈ: ‘ರಾಷ್ಟ್ರೀಯ ಶಿಕ್ಷಣ ನೀತಿ 2020’ ಕುರಿತು ಚರ್ಚಿಸಲು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಸೋಮವಾರ ನಡೆಸಿದ ಸಭೆಯನ್ನು ತಮಿಳುನಾಡು ಬಹಿಷ್ಕರಿಸಿದೆ.
ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್, ಎಲ್ಲ ರಾಜ್ಯಗಳ ಶಿಕ್ಷಣ ಇಲಾಖೆ ಕಾರ್ಯದರ್ಶಿಗಳ ಜತೆ ವರ್ಚುವಲ್ ಸಭೆ ನಡೆಸಿದರು. ತಮಿಳುನಾಡು ಸರಕಾರವು ಶಿಕ್ಷಣ ಕಾರ್ಯದರ್ಶಿಗಳ ಬದಲಾಗಿ ಶಿಕ್ಷಣ ಸಚಿವರ ಜತೆ ಸಭೆ ನಡೆಸಬೇಕೆಂದು ಸಲಹೆ ಮಾಡಿತ್ತು. ಕೇಂದ್ರ ಸರಕಾರದಿಂದ ಅದಕ್ಕೆ ಸ್ಪಂದನೆ ವ್ಯಕ್ತವಾಗದ ಹಿನ್ನೆಲೆಯಲ್ಲಿ ಸಭೆ ಬಹಿಷ್ಕರಿಸುವ ನಿರ್ಧಾರ ಕೈಗೊಂಡಿದೆ.
ಈ ಕುರಿತು ಮಾಹಿತಿ ನೀಡಿದ ರಾಜ್ಯದ ಪ್ರಾಥಮಿಕ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಅವರು, ‘ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಈಗಿರುವ ಸ್ವರೂಪದಲ್ಲಿ ಅನುಷ್ಠಾನಗೊಳಿಸಲು ಎದುರಾಗುವ ಸಮಸ್ಯೆಗಳ ಬಗ್ಗೆ ರಚನಾತ್ಮಕ ಸಲಹೆಗಳನ್ನು ನೀಡಲು ನಾವು ಸಿದ್ಧರಿದ್ದೆವು. ಕೆಲವು ತಿದ್ದುಪಡಿಗಳಿಗೂ ಸಲಹೆ ಮಾಡುತ್ತಿದ್ದೆವು. ಅದಕ್ಕಾಗಿಯೇ ಶಿಕ್ಷಣ ಸಚಿವರ ಸಭೆ ಕರೆಯಲು ಮನವಿ ಮಾಡಿದ್ದೆವು. ಆದರೆ ಕೇಂದ್ರ ಸರಕಾರ ಸ್ಪಂದಿಸಲೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.