ಕರ್ನಾಟಕದಲ್ಲಿ ಎಲ್ಲ ವಿಚಾರದಲ್ಲಿ ಕಮಿಷನ್ ವ್ಯವಹಾರ ಆಗುತ್ತಿದೆ. ಇದರ ಬಗ್ಗೆ ತನಿಖೆ ಆಗಬೇಕು ಎಂದು ಸಿಎಂ ಯಡಿಯೂರಪ್ಪನವರಿಗೆ ಒತ್ತಾಯ ಮಾಡುತ್ತೇನೆ. ಯಾರೇ ಹೊರಗಡೆಯಿಂದ ಬಂದರೂ ಟೆಂಡರ್ ಗೂ ಮೊದಲು ಕಮಿಷನ್ ಕೇಳ್ತಾರೆ. ಇದು ನನಗೆ ಇರುವ ಅಧಿಕೃತ ಮಾಹಿತಿ. ಈ ವಿಚಾರದಲ್ಲಿ ಉನ್ನತ ಮಟ್ಟದ ತನಿಖೆ ಆಗಬೇಕು ಅಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒತ್ತಾಯಿಸಿದ್ದಾರೆ.
ಕಳೆದ ವರ್ಷದ ಪ್ಯಾಕೇಜ್ ಯಾರಿಗೂ ತಲುಪಿಲ್ಲ. ನೇಕಾರರು, ಮಡಿವಾಳ ಸೇರಿದಂತೆ ಯಾರಿಗೂ ಸಿಕ್ತಿಲ್ಲ. ಅಂಕಿ-ಅಂಶಗಳ ಬಿಡುಗಡೆ ಮಾಡಿ ಎಂದು ಹಲವು ಬಾರಿ ಹೇಳಿದೆವು. ಆದರೆ, ಬಿಡುಗಡೆ ಮಾಡಲಿಲ್ಲ. ಇವರು ಕೊರೋನಾ ಹೆಸರಲ್ಲಿ ಕಮಿಷನ್ ಹೊಡೆಯಲು ಸರ್ಕಸ್ ಮಾಡ್ತಿದ್ದಾರೆ. ಗ್ಲೋಬಲ್ ಟೆಂಡರ್ ಕರೆದಿದ್ದಾರೆ. ಬರೀ ಟೆಂಡರ್ ಕಮಿಷನ್ ಕೆಲಸ ಅಷ್ಟೇ. ಟೆಂಡರ್ ಎಲ್ಲ ಕೇಂದ್ರ ಸರ್ಕಾರದ ಅಡಿಯಲ್ಲಿ ಬರುತ್ತದೆ. ರಾಜ್ಯದ ಬಿಜೆಪಿ ಸರ್ಕಾರದ ಮೇಲೆ ನಂಬಿಕೆ ಇಲ್ಲದೇ ಪ್ರಧಾನಿ ಮೋದಿ ಡಿಸಿಗಳ ಜತೆ ಸಭೆ ಮಾಡ್ತಿದ್ದಾರೆ. ಸರ್ಕಾರದ ಮೇಲೆ ಪ್ರಧಾನಿಗೆ ನಂಬಿಕೆಯಿಲ್ಲ. ಹೀಗಾಗಿ ಡಿಸಿಗಳ ಸಭೆ ಮಾಡುತ್ತಿದ್ದಾರೆ. ನಾನು ಜಿಲ್ಲೆಗಳಿಗೆ ಹೋಗಿ ಎಂದು ಹೇಳಿದ ಮೇಲೆ ಹೋದರು ಎಂದು ಸರ್ಕಾರದ ವಿರುದ್ಧ ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿಗಳು ತಮಗೆ ಏನು ಬರೆದುಕೊಟ್ಟರೂ ಅದನ್ನು ಓದುತ್ತಾರೆ. ಸಿಎಂಗೆ ಏನೂ ಗೊತ್ತಿಲ್ಲ. ಇವರೇ ಟೆಂಡರ್ ಎಲ್ಲ ಫೈನಲ್ ಮಾಡ್ತಾರೆ. ಇವರನ್ನು ಜತೆ ಇಟ್ಕೊಂಡು ಟೆಂಡರ್ ಕರೆಯುತ್ತಾರೆ. ಎಲ್ಲ ಗೋಲ್ಮಾಲ್ ಆಗ್ತಿದೆ. ಮುಂದೇನಾದರೂ ಆದರೆ ಸಿಎಂ ಯಡಿಯೂರಪ್ಪ ಸಿಕ್ಕಿಹಾಕಿಕೊಳ್ಳುತ್ತಾರೆ. ಸಚಿವರು ಕ್ವಾಲಿಟಿ ಕೇಳ್ತಿಲ್ಲ, ಕೇವಲ ಕಮಿಷನ್ ಕೇಳ್ತಿದ್ದಾರೆ. ಇವರ ನಡುವೆ ಹೊಂದಾಣಿಕೆ ಇಲ್ಲ. ಡಿಸಿಎಂ ಟೆಂಡರ್ ಎನ್ನುತ್ತಾರೆ. ಆದರೆ, ಆರೋಗ್ಯ ಸಚಿವರು ಟೆಂಡರ್ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಹೇಳುತ್ತಾರೆ. ಸರ್ಕಾರದಲ್ಲಿ ಗೊಂದಲ ಇರೋದು ಇದರಿಂದಲೇ ಗೊತ್ತಾಗುತ್ತದೆ. ಇವರದ್ದೆಲ್ಲ ಬರೀ ಕಮಿಷನ್ ಲೆಕ್ಕಾಚಾರ ಎಂದು ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.