ಸೋನು ಸೂದ್​ ಮಾಡಿರುವ ಆ ಒಂದು ಟ್ವೀಟ್​ಗೆ ವೈದ್ಯರಿಂದ ವ್ಯಾಪಕ ಆಕ್ರೋಶ..! ಸೋನು ಸೂದ್ ಮಾಡಿರುವ ಟ್ವೀಟ್ ಏನು..?

ದೇಶದಾದ್ಯಂತ ಕೊರೊನಾ ಸಮಯದಲ್ಲಿ ಬಡವರ ಪಾಲಿನ ಆಪತ್ಬಾಂಧವನೆಂದೇ ಖ್ಯಾತರಾಗಿರುವ ಸೋನು ಸೂದ್​ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಕೊರೊನಾ ಮೊದಲನೇ ಅಲೆಯ ಸಂದರ್ಭದಲ್ಲಿ ತಮ್ಮ ತಮ್ಮ ಮನೆಗಳಿಗೆ ತೆರಳಲಾಗದೇ ಇತ್ತ ದಿನನಿತ್ಯದ ಅಗತ್ಯತೆಗಳಿಗೂ ಹಣವಿಲ್ಲದೇ ಪರದಾಡುತ್ತಿದ್ದಂತಹಾ ವಲಸೆ ಕಾರ್ಮಿಕರಿಗೆ ನೆರವಾಗಿ ರಿಯಲ್​ ಹೀರೊ ಎನಿಸಿಕೊಂಡಂತಹಾ ನಟ ಸೋನು ಸೂದ್​​ ಇದೀಗ ವೈದ್ಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸೋನು ಸೂದ್​ ಮಾಡಿರುವ ಆ ಒಂದು ಟ್ವೀಟ್​​​ ಇದೀಗ ಅನೇಕ ವೈದ್ಯರನ್ನು ಕೆರಳಿಸಿದೆ. ಹಾಗಾದ್ರೆ ಸೋನು ಸೂದ್​ ಮಾಡಿರುವ ಟ್ವೀಟ್​ನಲ್ಲಿ ಏನಿದೆ..? ಈ ಸ್ಟೋರಿ ನೋಡಿ

ಭಾರತದಲ್ಲಿ ಕೆಲವು ಔಷಧಗಳ ಅಲಭ್ಯತೆಯಿದೆ. ಈ ಕ್ಲಿಷ್ಟಕರ ಸಂದರ್ಭದಲ್ಲಿ ಕೆಲವು ಔಷಧಿಗಳು ಲಭ್ಯವಾಗುತ್ತಿಲ್ಲ. ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ತಮ್ಮ ಟ್ರಸ್ಟ್​ ಮೂಲಕ ಜನಸಾಮಾನ್ಯರಿಗೆ ನೆರವಾಗುತ್ತಿರುವ ಸೋನು ಸೂದ್​​ ಈಗ ಔಷಧದ ಅಲಭ್ಯತೆಯ ಬಗ್ಗೆ ದನಿಯೆತ್ತಿದ್ದಾರೆ. ಈ ಕುರಿತು ಟ್ವೀಟ್​ ಮಾಡಿರುವ ಸೋನು ಸೂದ್​​ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ‘ಒಂದು ಸರಳ ಪ್ರಶ್ನೆ: ಎಲ್ಲರಿಗೂ ನಿರ್ದಿಷ್ಟವಾದ ಇಂಜೆಕ್ಷನ್ ಎಲ್ಲಿಯೂ ಲಭ್ಯವಿಲ್ಲ ಎಂದು ತಿಳಿದಾಗ, ಪ್ರತಿಯೊಬ್ಬ ವೈದ್ಯರು ಆ ಚುಚ್ಚುಮದ್ದನ್ನು ಮಾತ್ರ ಏಕೆ ಶಿಫಾರಸು ಮಾಡುತ್ತಾರೆ? ಆಸ್ಪತ್ರೆಗಳು ಆ ಔಷಧಿಯನ್ನು ಪಡೆಯಲು ಸಾಧ್ಯವಾಗದಿದ್ದಾಗ ಸಾಮಾನ್ಯ ಮನುಷ್ಯನಿಗೆ ಹೇಗೆ ಸಿಗುತ್ತದೆ? ಆ ಔಷಧಿಯ ಬದಲಿಯನ್ನು ಏಕೆ ಬಳಸಬಾರದು ಮತ್ತು ಜೀವವನ್ನು ಉಳಿಸಲು ಸಾಧ್ಯವಿಲ್ಲವೇ? ಎಂದು ಸೋನು ಸೂದ್ ಟ್ವೀಟ್​ ಮಾಡಿದ್ದಾರೆ.

ಆದರೆ ಸೋನು ಸೂದ್​ ಮಾಡಿರುವ ಈ ಒಂದು ಟ್ವೀಟ್​ ವೈದ್ಯರನ್ನು ಕೆರಳಿಸಿದೆ. ವೈದ್ಯಕೀಯ ಕ್ಷೇತ್ರದ ಬಗ್ಗೆ ಸರಿಯಾದ ಜ್ಞಾನವಿಲ್ಲದ ಸೋನು ಸೂದ್​ ಈ ರೀತಿಯಾಗಿ ಟ್ವೀಟ್ ಮಾಡುವುದು ಎಷ್ಟು ಸರಿ..? ಜನಸಾಮಾನ್ಯರಲ್ಲಿ ಗೊಂದಲ ಸೃಷ್ಟಿಮಾಡುವ ಇಂತಹಾ ಹೇಳಿಕೆಗಳಿಂದ ಸೋನು ಸೂದ್ ದೂರವಿರುವುದು ಒಳ್ಳೆಯದು ಎಂದು ಹಲವು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಡಾ ಸುಷ್ಮಾ ಶಲ್ಲಾಕೌಲ್​ ಎಂಬುವವರು ಈ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿದ್ದು, ನಿಮ್ಮಂತಹಾ ಬುದ್ಧಿವಂತ ಜನರು ಇದಕ್ಕಾಗಿಯೆ ಡಾಕ್ಟರ್​ ಆಗಿಲ್ಲ ನೋಡಿ.. ಕೆಲವೊಂದು ಔಷಧಗಳಿಗೆ ಬದಲಿ ಔಷಧಗಳಿರುವುದಿಲ್ಲ. ನಿಮ್ಮ ಮೆದುಳಲ್ಲಿ ಸ್ವಲ್ಪ ಬುದ್ದಿ ತುಂಬಿಕೊಳ್ಳಿ ಎಂದು ವ್ಯಂಗ್ಯವಾಡಿದ್ದಾರೆ.

ಇನ್ನು ಅರುಣ್​ ರಾಜ ಎನ್ನುವವವರೂ ಈ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿದ್ದು, ಕೆಲವೊಂದು ಔಷಧಗಳಿಗೆ ಬದಲಿ ಔಷಧಗಳಿರುವುದಿಲ್ಲ. ಆದರೂ ಎಲ್ಲೂ ದೊರಕದ ಮೆಡಿಸಿನ್​ಗಳನ್ನು ನೀವು ಹೇಗೆ ತರಿಸುತ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ.

ಒಟ್ಟಿನಲ್ಲಿ ಸೋನು ಸೂದ್ ಮಾಡಿರುವ ಆ ಒಂದು ಟ್ವೀಟ್​​​​​ ವೈದ್ಯಕೀಯ ವಲಯದಲ್ಲಿ ತೀವ್ರ ಚರ್ಚೆಯನ್ನು ಹುಟ್ಟುಹಾಕಿರುವುದಂತೂ ಸುಳ್ಳಲ್ಲ. ಇನ್ನು ಸೋನು ಸೂದ್​ ವಿರುದ್ದ ವೈದ್ಯರು ಆಕ್ರೋಶ ಹೊರಹಾಕಿದ್ದು, ಈ ವಿಚಾರ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಎಡೆಮಾಡಿಕೊಟ್ಟಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *