Anekal: ಕೊರೋನಾ ನಡುವೆಯೂ ಬಡವರಿಗೆ ಅರಣ್ಯಾಧಿಕಾರಿಗಳಿಂದ ಕಿರುಕುಳ
ಆನೇಕಲ್(ಮೇ 23): ಕೊರೋನಾ ಎಲ್ಲೆಡೆ ಕಾಡುತ್ತಿದೆ ಎಂದು ಅವರು ಸ್ವಗ್ರಾಮಕ್ಕೆ ಮರಳಿದ್ದರು. ನಿಲ್ಲಲು ನೆಲೆ ಇಲ್ಲದೆ ಇದ್ದುದ್ದರಿಂದ ಗ್ರಾಮ ಪಂಚಾಯತಿ ಅನುದಾನದಡಿಯಲ್ಲಿ ಮನೆ ನಿರ್ಮಿಸಿಕೊಳ್ಳಲು ಮುಂದಾಗಿದ್ದರು. ಆದ್ರೆ ಇದೀಗ ಅರಣ್ಯ ಇಲಾಖೆ ಅಧಿಕಾರಿಗಳು(Forest Officers) ಮನೆ ನಿರ್ಮಾಣಕ್ಕೆ ಅಡ್ಡಿಪಡಿಸುತ್ತಿದ್ದು, ಪದೇ ಪದೇ ಅವರಿಗೆ ಬೆದರಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹೌದು, ಹೀಗೆ ಬಡಪಾಯಿ ಕುಟುಂಬವೊಂದು ನಿರ್ಮಿಸುತ್ತಿರುವ ಮನೆ ನಿರ್ಮಾಣಕ್ಕೆ ಅರಣ್ಯ ಅಧಿಕಾರಿಗಳು ಅಡ್ಡಿಪಡಿಸುತ್ತಿರುವ ದೃಶ್ಯಗಳು ಕಂಡು ಬಂದದ್ದು ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ(Anekal Taluk) ಬ್ಯಾಲದಮರ ದೊಡ್ಡಿ ಗ್ರಾಮದಲ್ಲಿ.
ಕಳೆದ ಎಪ್ಪತ್ತು ವರ್ಷಗಳಿಂದ ಇಲ್ಲಿ ನೆಲೆಸಿರುವ ಮಂಜುನಾಥ್ ಕುಟುಂಬ ಇದೀಗ ಅರಣ್ಯ ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಹೋಗಿದೆ. ಶ್ರಮಿಕ ವರ್ಗವಾದ ಮಂಜುನಾಥ್ ಕುಟುಂಬದಲ್ಲಿ ತನ್ನ ತಾಯಿ ಹೊರತುಪಡಿಸಿ ಉಳಿದವರೆಲ್ಲ ತುತ್ತು ಅನ್ನಕ್ಕಾಗಿ ಕೂಲಿ ಹರಸಿ ಬೇರೆ ಬೇರೆ ಕಡೆ ವಲಸೆ ಹೋಗುವವರೇ. ಆದ್ರೆ ಈಗ ಕೊರೋನಾ ಮಾಹಾಮಾರಿ ರಣಕೇಕೆ ಹಾಕುತ್ತಿದೆ. ಲಾಕ್ಡೌನ್ನಿಂದಾಗಿ ಕೈಯಲ್ಲಿ ಕೆಲಸ ಸಹ ಇಲ್ಲವಾಗಿದೆ. ಹಾಗಾಗಿ ಮರಳಿ ಸ್ವಗ್ರಾಮಕ್ಕೆ ಮರಳಿದರೆ ನಿಲ್ಲಲು ನೆಲೆ ಬೇರೆ ಇಲ್ಲ. ಪುಟ್ಟ ಗುಡಿಸಿಲಿನಲ್ಲಿ ಇಡೀ ಕುಟುಂಬ ವಾಸಿಸಲು ಅಸಾಧ್ಯ. ಹಾಗಾಗಿ ಗ್ರಾಮ ಪಂಚಾಯಿತಿ ಅನುದಾನದಲ್ಲಿ ಮನೆ ನಿರ್ಮಿಸಿಕೊಳ್ಳಲು ಮಂಜುನಾಥ್ ಕುಟುಂಬ ಮುಂದಾಗಿತ್ತು. ತಳಪಾಯ ಹಾಕಿ ಐದಾರು ಅಡಿ ಗೋಡೆ ಸಹ ನಿರ್ಮಿಸಿತ್ತು.
ಆದ್ರೆ ಇದೀಗ ಅರಣ್ಯ ಅಧಿಕಾರಿಗಳು ಮನೆ ನಿರ್ಮಿಸಬಾರದು. ಇದು ಅರಣ್ಯ ಇಲಾಖೆಗೆ ಸೇರಿದ ಜಾಗ ಎಂದು ನಿರ್ಮಾಣ ಹಂತದ ಮನೆಯನ್ನು ನೆಲಸಮ ಮಾಡುವುದಾಗಿ ಬೆದರಿಸುತ್ತಿದ್ದಾರೆ ಎಂದು ನೊಂದ ಮನೆ ಮಾಲೀಕ ಮಂಜುನಾಥ್ ತನ್ನ ಅಳಲನ್ನು ತೋಡಿಕೊಂಡಿದ್ದಾರೆ.
ಇನ್ನು, ಅರಣ್ಯದಂಚಿನ ಗ್ರಾಮ ವಾಸಿಗಳಿಗೆ ಅರಣ್ಯ ಇಲಾಖೆ ಅಧಿಕಾರಿಗಳು ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನ ಬದ್ಧವಾಗಿ ನೀಡಿರುವ ಬದುಕುವ ಹಕ್ಕನ್ನು ಕಸಿದುಕೊಳ್ಳುವ ಕೆಲಸವನ್ನು ಅರಣ್ಯ ಅಧಿಕಾರಿಗಳು ಮಾಡುತ್ತಿದ್ದಾರೆ. ಗ್ರಾಮ ಪಂಚಾಯತಿ ವತಿಯಿಂದ ಇಲ್ಲಿನ ವಾಸಿಗಳಿಗೆ ಹಕ್ಕುಪತ್ರ ನೀಡಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.
ಬೆಸ್ಕಾಂ ನಿಂದ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಇಷ್ಟಾದರೂ ಅರಣ್ಯ ಅಧಿಕಾರಿಗಳು ಮಾತ್ರ ಅನಗತ್ಯವಾಗಿ ಗ್ರಾಮ ವಾಸಿಗಳಿಗೆ ಕಿರುಕುಳ ನೀಡುತ್ತಿದ್ದಾರೆ. ಈ ಬಗ್ಗೆ ಹಲವು ಬಾರಿ ಈ ಭಾಗದ ಶಾಸಕರು ಮತ್ತು ಸಂಸದರಿಗೆ ಗಮನಕ್ಕೆ ತಂದಿದ್ದು, ಅವರು ಬಡವರಿಗೆ ತೊಂದರೆ ಕೊಡಬೇಡಿ ಎಂದು ಅರಣ್ಯ ಅಧಿಕಾರಿಗಳಿಗೆ ಸೂಚಿಸಿದಾಗ ಆಯ್ತು ಎಂದಿದ್ದರು.
ಬಳಿಕ ಅದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಬಡಪಾಯಿ ಗ್ರಾಮ ವಾಸಿಗಳಿಗೆ ಇನ್ನಿಲ್ಲದಂತೆ ತೊಂದರೆ ಕೊಡುತ್ತಿದ್ದಾರೆ ಎಂದು ಸ್ಥಳೀಯ ವಾಸಿ ರವಿ ಬೇಸರ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಸರ್ವ ವ್ಯಾಪಿ ಕೊರೋನಾ ಜನರನ್ನು ಬಿಟ್ಟು ಬಿಡದಂತೆ ಕಾಡುತ್ತಿದೆ. ಇಂತಹ ಸನ್ನಿವೇಶದಲ್ಲಿ ಸ್ವಗ್ರಾಮದಲ್ಲಿ ನೆಲೆಸಲು ಬಂದಂತಹ ಕುಟುಂಬಕ್ಕೆ ನಿಲ್ಲಲು ನೆಲೆಗೆ ಅವಕಾಶ ನೀಡದೇ ಕಿರುಕುಳ ನೀಡುವುದು ಅರಣ್ಯ ಅಧಿಕಾರಿಗಳಿಗೆ ಶೋಭೆ ತರುವಂತಹದಲ್ಲ. ಇನ್ನಾದರೂ ಅರಣ್ಯ ಅಧಿಕಾರಿಗಳು ದಬ್ಬಾಳಿಕೆ ದೌರ್ಜನ್ಯ ಬಿಟ್ಟು ಮಾನವೀಯ ನೆಲೆಯಲ್ಲಿ ಬಡ ಕುಟುಂಬಗಳಿಗೆ ಅಗತ್ಯ ಸೌಕರ್ಯ ಪಡೆಯಲು ಅವಕಾಶ ನೀಡಬೇಕಿದೆ.