ಹುಲಿ ಚರ್ಮ ಸಾಗಿಸುತ್ತಿದ್ದವರ ಬಂಧನ
ಅಂತರಾಷ್ಟ್ರೀಯ ಹುಲಿ ದಿನಾಚರಣೆಯಾಗಿ ಎರಡು ದಿನದಲ್ಲೇ ಇಂತಹ ಘಟನೆ ನಡೆದಿರುವುದು ವನ್ಯಜೀವಿ ಪ್ರೇಮಿಗಳಲ್ಲಿ ಬೇಸರ ಮೂಡಿಸಿದೆ.
ಮೈಸೂರು : ಹುಲಿ ಚರ್ಮ ಸಾಗಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ಬಂಧಿಸಿದ್ದಾರೆ. ಡಿಸಿಎಫ್ ಎ.ಟಿ. ಪೂವಯ್ಯ ಹಾಗೂ ಅಧಿಕಾರಿಗಳಾದ ಲಕ್ಷ್ಮೀಶ್, ಮೋಹನ್, ಸುಂದರ್, ಪ್ರಮೋದ್ ನೇತೃತ್ವದ ತಂಡ ನಡೆಸಿದ ಕಾರ್ಯಚರಣೆಯಲ್ಲಿ ಇವರು ಸಿಕ್ಕಿ ಬಿದ್ದಿದ್ದಾರೆ. ಬಂಧಿತರನ್ನು ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ (KRS) ಬಳಿಯ ಸಂತೆಮಾಳದ ನಿವಾಸಿಗಳಾದ ಆಕಾಶ್ ರಾವ್, ವಿಷ್ಣು ಎಂದು ಗುರುತಿಸಲಾಗಿದೆ.
ಹುಲಿ (Tiger) ಚರ್ಮ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಶುಕ್ರವಾರ ಮಧ್ಯಾಹ್ನ ಕೆಆರ್ಎಸ್ ಕಡೆಯಿಂದ ಮೈಸೂರಿಗೆ (Mysore) ಬರುತ್ತಿದ್ದ ಕಾರ್ವೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ತಡೆದು ಪರಿಶೀಲಿಸಿದಾಗ ಅವರ ಬಳಿ 8 ರಿಂದ 10 ವರ್ಷದ ಹುಲಿಯೊಂದರ ಚರ್ಮ ಇರುವುದನ್ನು ಕಂಡು ಬಂದಿದೆ.
ನಂತರ ಹುಲಿ ಚರ್ಮ ಹಾಗೂ ಅದನ್ನು ಸಾಗಿಸಲು ಬಳಕೆ ಮಾಡಿದ ಕಾರು ಎರಡನ್ನೂ ವಶಕ್ಕೆ ಪಡೆಯಲಾಗಿದೆ. ಅಂತರಾಷ್ಟ್ರೀಯ ಹುಲಿ ದಿನಾಚರಣೆಯಾಗಿ ಎರಡು ದಿನದಲ್ಲೇ ಇಂತಹ ಘಟನೆ ನಡೆದಿರುವುದು ವನ್ಯಜೀವಿ ಪ್ರೇಮಿಗಳಲ್ಲಿ ಬೇಸರ ಉಂಟುಮಾಡಿದೆ.