ಮೈಸೂರು-ಮಂಡ್ಯದಲ್ಲಿ ಮತ್ತೊಮ್ಮೆ ದಂಪತಿ ಜಿಲ್ಲಾಧಿಕಾರಿಗಳು: ಅಕ್ಕ ಪಕ್ಕ ಜಿಲ್ಲೆಯಲ್ಲಿ ಪತಿ- ಪತ್ನಿ ಡಿಸಿಯಾಗಿ ಅಧಿಕಾರ!

ಹೈಲೈಟ್ಸ್‌:

  • ಅಕ್ಕ-ಪಕ್ಕ ಜಿಲ್ಲೆಯಲ್ಲಿ ಡಿಸಿಗಳಾಗಿ ಪತಿ ಪತ್ನಿ ಆಡಳಿತ
  • ಮೈಸೂರಿನಲ್ಲಿ ಗೌತಮ್‌, ಮಂಡ್ಯದಲ್ಲಿ ಅಶ್ವತಿ ಡಿಸಿ
  • ಕೆಲ ವರ್ಷಗಳ ಹಿಂದೆ ಪ್ರೇಮ ವಿವಾಹವಾಗಿದ್ದ ಜೋಡಿಗಳು

ನಾಗರಾಜ್‌ ನವೀಮನೆ ಮೈಸೂರು
ಮೈಸೂರಿನ ಇಬ್ಬರು ಮಹಿಳಾ ಐಎಎಸ್‌ ಅಧಿಕಾರಿಗಳ ಬಹಿರಂಗ ತಿಕ್ಕಾಟಕ್ಕೆ ಸರಕಾರ ತೆರೆ ಎಳೆದಿದ್ದು, ಇಬ್ಬರನ್ನೂ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಆದರೀಗ ಈ ಹೊಸ ಬೆಳವಣಿಗೆಯಿಂದ ಮತ್ತೊಮ್ಮೆ ಮೈಸೂರು- ಮಂಡ್ಯ ಅಕ್ಕ ಪಕ್ಕದ ಜಿಲ್ಲೆಗಳಿಗೆ ಪತಿ-ಪತ್ನಿ ಡಿಸಿಯಾಗಿ ನೇಮಕ ಗೊಂಡಂತಾಗಿದೆ.

ಹೌದು! ಮೈಸೂರು ಜಿಲ್ಲಾಧಿಕಾರಿ ಯಾಗಿದ್ದ ರೋಹಿಣಿ ಸಿಂಧೂರಿ ಅವರನ್ನು ಹಿಂದೂ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರನ್ನಾಗಿ ಸರಕಾರ ನೇಮಕ ಮಾಡಿದೆ. ಈ ಮೂಲಕ ತೆರವಾದ ಮೈಸೂರು ಡಿಸಿ ಹುದ್ದೆಗೆ ವಾಣಿಜ್ಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಡಾ.ಬಗಾದಿ ಗೌತಮ್‌ ಅವರನ್ನು ನೇಮಕ ಮಾಡಿದೆ.

ವಿಶೇಷವೆಂದರೆ ಮೈಸೂರಿಗೆ ಡಿಸಿ ಆಗಿ ವರ್ಗಾವಣೆಗೊಂಡು ಬಂದಿರುವ ಡಾ. ಗೌತಮ್‌ ಬಗಾದಿ ಅವರು ಮಂಡ್ಯದ ಹಾಲಿ ಜಿಲ್ಲಾಧಿಕಾರಿ ಎಸ್‌.ಅಶ್ವತಿ ಅವರ ಪತಿ. ಮೈಸೂರು ಮತ್ತು ಮಂಡ್ಯ ಜಿಲ್ಲೆಗೆ ಪತಿ ಹಾಗೂ ಪತ್ನಿ ಜಿಲ್ಲಾಧಿಕಾರಿಯಾಗಿ ಒಟ್ಟಿಗೆ ಕೆಲಸ ನಿರ್ವಹಿಸಿದ್ದು, ಇದು ಮೊದಲೇನಲ್ಲ. ನಾಲ್ಕು ವರ್ಷದ ಹಿಂದೆ ಸಿ.ಶಿಖಾ ಅವರು ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗ ಅವರ ಪತಿ ಡಾ. ಅಜಯ್‌ ನಾಗಭೂಷಣ್‌ ಮಂಡ್ಯ ಜಿಲ್ಲಾಧಿಕಾರಿಯಾಗಿದ್ದರು.

ಸದ್ಯ ಮತ್ತೊಮ್ಮೆ ಮೈಸೂರು ಹಾಗೂ ಮಂಡ್ಯ ಜಿಲ್ಲೆಗೆ ದಂಪತಿ ಡಿಸಿಯಾಗಿರುವುದು ವಿಶೇಷ. ಸಿ.ಶಿಖಾ ಅವರು ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಅಂದರೆ 2013ರಿಂದ 2016ರವರೆಗೆ ಮೈಸೂರು ಡಿಸಿ ಆಗಿ ದಕ್ಷತೆಯಿಂದ ಕಾರ‍್ಯ ನಿರ್ವಹಿಸಿದ್ದರು. ಮೈಸೂರು ಜಿಪಂನ ಸಿಇಒ ಆಗಿಯೂ ಡಾ.ಅಜಯ್‌ ನಾಗಭೂಷಣ್‌ ಕಾರ‍್ಯ ನಿರ್ವಹಿಸಿದ್ದರು. ಇದರಲ್ಲಿ ಶಿಖಾ ಅವರ ಪತಿ ಡಾ.ಅಜಯ್‌ ನಾಗಭೂಷಣ್‌ ಹಾಗೂ ಅಶ್ವತಿ ಪತಿ ಡಾ.ಬಗಾದಿ ಗೌತಮ್‌ ಇಬ್ಬರೂ ವೈದ್ಯ ಶಿಕ್ಷಣ ಪಡೆದಿರುವುದು ವಿಶೇಷ.

ಪ್ರೇಮಿಗಳ ದಿನ ವಿವಾಹ!
ಇನ್ನು ಮೈಸೂರಿನ ನೂತನ ಡಿಸಿ ಡಾ.ಬಗಾದಿ ಗೌತಮ್‌ ಹಾಗೂ ಮಂಡ್ಯದ ಹಾಲಿ ಜಿಲ್ಲಾಧಿಕಾರಿ ಎಸ್‌.ಅಶ್ವತಿ ಅವರದು ಪ್ರೇಮ ವಿವಾಹ. 2009ರ ಚ್ಯಾಚ್‌ನಲ್ಲಿ ಡಾ.ಬಗಾದಿ ಗೌತಮ್‌ ಐಎಎಸ್‌ ಪರೀಕ್ಷೆ ಪಾಸು ಮಾಡಿದರೆ, ಅಶ್ವತಿ ಅವರು 2013ರಲ್ಲಿ ಐಎಎಸ್‌ ಪರೀಕ್ಷೆ ತೇರ್ಗಡೆಯಾಗಿದ್ದಾರೆ.

ಆಂಧ್ರ ಮೂಲದ ಡಾ.ಬಗಾದಿ ಗೌತಮ್‌ ಅವರು ಕೇರಳ ಮೂಲದ ಅಶ್ವತಿ ಅವರನ್ನು 2019ರ ಫೆಬ್ರವರಿ 14ರಂದು ವಿವಾಹವಾಗಿದ್ದರು. ನಾಲ್ಕು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ ಪ್ರೇಮಿಗಳ ದಿನದಂದೇ ಮದುವೆಯಾಗಿ ಸದ್ದು ಮಾಡಿತ್ತು. ನೆರೆ ರಾಜ್ಯಗಳ ಈ ಇಬ್ಬರು ಅಧಿಕಾರಿಗಳ ನಡುವೆ ಪ್ರೀತಿ ಮೊಳಕೆಯೊಡೆದಿದ್ದು ಮಾತ್ರ ಕರ್ನಾಟಕದಲ್ಲಿ. ಇನ್ನು ಎಸ್‌.ಅಶ್ವತಿ ಅವರು ರಾಜ್ಯದಲ್ಲಿ ಶೌಚಾಲಯ ನಿರ್ಮಾಣದ ಮೂಲಕ ಕ್ರಾಂತಿಯನ್ನೇ ಮಾಡಿ ಹೆಸರುವಾಸಿಯಾಗಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *