ಕಡಿಮೆ ಮಾತನಾಡಿ ಕೆಲಸ ಹೆಚ್ಚು ಮಾಡಿ – ಬಿಜೆಪಿ ನಾಯಕರಿಗೆ ಮೋದಿ ಸೂಚನೆ

ಹೈಲೈಟ್ಸ್‌:

  • ಬಿಜೆಪಿಯ ಹಿರಿಯ ನಾಯಕರಿಗೆ ‘ಕಡಿಮೆ ಮಾತನಾಡಿ, ಹೆಚ್ಚು ಕೆಲಸ ಮಾಡಿ’ ಎಂಬ ಸಂದೇಶ ರವಾನಿಸಿದ ಪ್ರಧಾನಿ ನರೇಂದ್ರ ಮೋದಿ
  • ಬಿಜೆಪಿಯ ಪ್ರಧಾನ ಕಾರ್ಯದರ್ಶಿಗಳು ಮತ್ತು ವಿವಿಧ ಮೋರ್ಚಾಗಳ ಮುಖ್ಯಸ್ಥರೊಂದಿಗೆ ಸೋಮವಾರ ಸುದೀರ್ಘ 5 ಗಂಟೆಗಳ ಸಭೆ
  • ಕೊರೊನಾದಿಂದ ಪಕ್ಷ ಹಾಗೂ ಸರಕಾರಕ್ಕೆ ಉಂಟಾಗಿರುವ ಹಾನಿಯನ್ನು ತಪ್ಪಿಸಲು ಜನರ ಹೃದಯದಲ್ಲಿ ಜಾಗ ಮಾಡಿಕೊಳ್ಳುವಂತೆ ಸಲಹೆ
  • ಜನರೊಂದಿಗೆ ನೇರ ಸಂಪರ್ಕ ಇಟ್ಟುಕೊಳ್ಳಿ ಎಂದು ಪಕ್ಷದ ಪದಾಧಿಕಾರಿಗಳಿಗೆ ಸೂಚನೆ

ಹೊಸದಿಲ್ಲಿ: ‘ಕಡಿಮೆ ಮಾತನಾಡಿ, ಹೆಚ್ಚು ಕೆಲಸ ಮಾಡಿ’ ಎಂಬ ಸಂದೇಶವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿಯ ಹಿರಿಯ ನಾಯಕರಿಗೆ ರವಾನಿಸಿದ್ದಾರೆ.

ಬಿಜೆಪಿಯ ಪ್ರಧಾನ ಕಾರ್ಯದರ್ಶಿಗಳು ಮತ್ತು ವಿವಿಧ ಮೋರ್ಚಾಗಳ ಮುಖ್ಯಸ್ಥರೊಂದಿಗೆ ಸೋಮವಾರ ಸುದೀರ್ಘ ಐದು ಗಂಟೆಗಳ ಸಭೆ ನಡೆಸಿದರು. ”ಕೋವಿಡ್‌- -19 ಅಲೆಯಲ್ಲಿ ಪಕ್ಷ ಹಾಗೂ ಸರಕಾರಕ್ಕೆ ಉಂಟಾಗಿರುವ ಹಾನಿಯನ್ನು ತಪ್ಪಿಸಲು ಜನರ ಹೃದಯದಲ್ಲಿ ಜಾಗ ಮಾಡಿಕೊಳ್ಳಬೇಕು. ಜನರೊಂದಿಗೆ ನೇರ ಸಂಪರ್ಕ ಇಟ್ಟುಕೊಳ್ಳಿ,” ಎಂದು ಒತ್ತಿ ಹೇಳಿದ್ದಾರೆ.

ಪಕ್ಷದ ಕೆಲವರು ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿಯವರು, ”ಸೋಂಕಿನ 2ನೇ ಅಲೆಯಲ್ಲಿ ಬಿಜೆಪಿ ಆಡಳಿತವಿರುವ ರಾಜ್ಯಗಳು ಹಾಗೂ ಕೇಂದ್ರ ಸರಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ಬರೀ ಮಾತಿನಿಂದ ಏನೂ ಸಾಧನೆಯಾಗುವುದಿಲ್ಲ. ಹೆಚ್ಚು ದಕ್ಷತೆಯಿಂದ ಕೆಲಸ ಮಾಡಿ,” ಎಂದು ಎಚ್ಚರಿಕೆ ನೀಡಿದ್ದಾರೆ.

ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಹಾಗೂ ವಿವಿಧ ಮೋರ್ಚಾಗಳ ಅಧ್ಯಕ್ಷರ ಜೊತೆಗೆ 2 ದಿನ ಸಭೆ ನಡೆಸಿದ್ದರು. ನಾಯಕರಿಗೆ ತಿಳಿವಳಿಕೆ ನೀಡುವ ಕಾರ್ಯಕ್ರಮದ ಭಾಗವಾಗಿಯೇ ಪ್ರಧಾನಿ ಮೋದಿ ಅವರು ಸಂವಾದ ನಡೆಸಿದರು. ಈ ಸಭೆಯಲ್ಲಿ ನಡ್ಡಾ ಅವರು, ಪಕ್ಷದ ಮುಖಂಡರಿಗೆ ಹೊಣೆಗಳ ನೆನಪು ಮಾಡಿದರು. ಮುಂದಿನ ವರ್ಷ ಉತ್ತರ ಪ್ರದೇಶ ಸೇರಿದಂತೆ 5 ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯಲಿದ್ದು, ಸಿದ್ಧತೆ ಕೈಗೊಳ್ಳುವಂತೆ ಸೂಚಿಸಿದರು

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *