Darshan: ‘ಡಿ ಬಾಸ್’ ದರ್ಶನ್‌ಗೆ ಧನ್ಯವಾದ ತಿಳಿಸಿದ ಅರಣ್ಯ ಸಚಿವ ಅರವಿಂದ ಲಿಂಬಾವಳಿ

ಹೈಲೈಟ್ಸ್‌:

  • ರಾಜ್ಯದ ಮೃಗಾಲಯಗಳಿಗೆ ಲಾಕ್‌ಡೌನ್‌ನಿಂದಾಗಿ ಆರ್ಥಿಕ ಸಂಕಷ್ಟ ಎದುರಾಗಿತ್ತು
  • ಆ ಹಿನ್ನೆಲೆಯಲ್ಲಿ ಪ್ರಾಣಿ-ಪಕ್ಷಿಗಳನ್ನು ದತ್ತು ಪಡೆಯುವಂತೆ ಡಿ ಬಾಸ್ ಮನವಿ
  • ಡಿ ಬಾಸ್ ಮನವಿಗೆ ಸಖತ್‌ ರೆಸ್ಪಾನ್ಸ್; ಮೂರೇ ದಿನಕ್ಕೆ 40 ಲಕ್ಷ ರೂ. ಸಂಗ್ರಹ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮೃಗಾಯದ ಪ್ರಾಣಿಗಳನ್ನು ದತ್ತು ಪಡೆಯುವಂತೆ ಮನವಿ ಮಾಡಿದ್ದರು. ಶನಿವಾರ (ಜೂ.5) ಅವರು ಮನವಿ ಮಾಡಿದ್ದ ವಿಡಿಯೋ ಸಖತ್ ವೈರಲ್ ಆಗಿತ್ತು. ಡಿ ಬಾಸ್ ಮನವಿ ಮಾಡುತ್ತಿದ್ದಂತೆಯೇ, ರಾಜ್ಯದ 9 ಮೃಗಾಲಯಗಳಿಗೆ ಎರಡೇ ದಿನದಲ್ಲಿ ಒಟ್ಟು 24.75 ಲಕ್ಷ ರೂ. ಹಣ ಹರಿದುಬಂದಿತ್ತು. 50 ರೂ.ನಿಂದ 1 ಲಕ್ಷ ರೂ.ವರೆಗೂ ದೇಣಿಗೆ ನೀಡಿದ್ದರು. ಹೆಚ್ಚು ಮಂದಿ ಒಂದೇ ದಿನ ಲಾಗ್‌ಇನ್‌ ಆದ ಪರಿಣಾಮ ಸಾಫ್ಟ್‌ವೇರ್‌ ಕ್ರ್ಯಾಶ್‌ ಆಗಿ ಓಟಿಪಿ ಸಮಸ್ಯೆ ಕೂಡ ಉಂಟಾಗಿತ್ತು. ಇದೀಗ ಮೂರು ದಿನಗಳಿಗೆ ಸುಮಾರು 40 ಲಕ್ಷ ರೂ.ಗಳಷ್ಟು ಹಣ ಸಂದಾಯವಾಗಿದೆ. ದರ್ಶನ್ ಮಾತಿಗೆ ಮನ್ನಣೆ ನೀಡಿದ ಫ್ಯಾನ್ಸ್ ದೊಡ್ಡಮಟ್ಟದಲ್ಲಿ ಸಹಾಯಕ್ಕೆ ಮುಂದಾಗಿದ್ದಾರೆ. ಆ ಹಿನ್ನೆಲೆಯಲ್ಲಿ ಅರಣ್ಯ ಸಚಿವ

ಅರವಿಂದ ಲಿಂಬಾವಳಿ ಅವರು ದರ್ಶನ್‌ ಅವರಿಗೆ ಧನ್ಯವಾದ ಹೇಳಿದ್ದಾರೆ.

ವಿಡಿಯೋ ಮೂಲಕ ದರ್ಶನ್‌ಗೆ ಧನ್ಯವಾದ ತಿಳಿಸಿರುವ ಅವರು, ‘ಕನ್ನಡ ಚಿತ್ರರಂಗದಲ್ಲಿ ‘ಚಾಲೆಂಜಿಂಗ್ ಸ್ಟಾರ್’ ಎಂದೇ ಹೆಸರು ಪಡೆದಂತಹ ದರ್ಶನ್ ತೂಗುದೀಪ ಅವರು ರಾಜ್ಯದ ಮೃಗಾಲಯದ ಪ್ರಾಣಿಗಳ ಬಗ್ಗೆ ವಿಶೇಷವಾದ ಪ್ರೀತಿ ಮತ್ತು ಆಸಕ್ತಿಯನ್ನು ಹೊಂದಿದ್ದಾರೆ. ಪ್ರಾಣಿ ಪ್ರಿಯರೆಲ್ಲ ಮೃಗಾಲಯದ ಪ್ರಾಣಿಗಳನ್ನು ದತ್ತು ಪಡೆಯುವಂತೆ ಅವರು ಕರೆ ಕೊಟ್ಟಿದ್ದರು. ಆ ಹಿನ್ನೆಲೆಯಲ್ಲಿ ಈಗ ಕರ್ನಾಟಕದಲ್ಲಿ 40 ಲಕ್ಷ ರೂ.ಗಳಿಗೂ ಹೆಚ್ಚು ಹಣ ಸಂಗ್ರಹವಾಗಿದೆ’ ಎಂದಿದ್ದಾರೆ.

‘ಕೊರೊನಾದ ಈ ಕಷ್ಟಕಾಲದಲ್ಲಿ ಜನರ ರಕ್ಷಣೆಯ ಹೊಣೆಯನ್ನು ಸರ್ಕಾರ ಹೊತ್ತಿರುವಂತೆಯೇ, ದರ್ಶನ್ ಅವರು ಮೃಗಾಲಯದ ಪ್ರಾಣಿಗಳ ರಕ್ಷಣೆಗೆ ಹೆಚ್ಚಿನ ಕಾಳಜಿ ವಹಿಸಿದ್ದಾರೆ. ದರ್ಶನ್ ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಲು ಬಯಸುತ್ತೇನೆ. ಹಾಗೆಯೇ ಪ್ರಾಣಿ ದತ್ತು ಪಡೆಯಲು ದೇಣಿಗೆ ನೀಡಿದ ಎಲ್ಲ ಪ್ರಾಣಿ ಪ್ರಿಯರಿಗೂ ಧನ್ಯವಾದಗಳನ್ನು ಹೇಳುತ್ತೇನೆ. ರಾಜ್ಯದ ಎಲ್ಲಾ ಪ್ರಾಣಿ ಪ್ರಿಯರು ಮೃಗಾಲಯದ ಪ್ರಾಣಿಗಳನ್ನು ದತ್ತು ಪಡೆಯಬೇಕು, ಪ್ರಾಣಿಗಳ ನಿರ್ವಹಣೆಗೆ ಧನ ಸಹಾಯದ ಅವಶ್ಯಕತೆ ಇದೆ. ಹಾಗಾಗಿ ಸಾಕಷ್ಟು ಧನ ಸಹಾಯ ಮಾಡಬೇಕು ಎಂದು ನಾನು ವಿನಂತಿ ಮಾಡುತ್ತೇನೆ’ ಎಂದು ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ. ಜೊತೆಗೆ ಅರಣ್ಯ ಇಲಾಖೆ ಹಾಗೂ ಮೃಗಾಲಯ‍ ಪ್ರಾಧಿಕಾರದ ಪರವಾಗಿ ದರ್ಶನ್‌ಗೆ ಧನ್ಯವಾದಗಳನ್ನು ತಿಳಿಸಲಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *