ಬ್ರಾಹ್ಮಣರ ಅವಹೇಳನ ನಟ ಚೇತನ್ ಗೆ ನೊಟೀಸ್
ಬೆಂಗಳೂರು,ಜೂ.16- ಬ್ರಾಹ್ಮಣರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪದಡಿ ದಾಖಲಾಗಿರುವ ಪ್ರಕರಣದಲ್ಲಿ ನಟ ಚೇತನ್ ಅವರಿಗೆ ಬಸವನಗುಡಿ ಠಾಣೆ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ.
ವಿಪ್ರ ಯುವ ವೇದಿಕೆ ಅಧ್ಯಕ್ಷ ಪವನ್ ಕುಮಾರ್ ಶರ್ಮಾ ಅವರು ಬ್ರಾಹ್ಮಣ್ಯ ಬ್ರಾಹ್ಮಣರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ನಟ ಚೇತನ್ ವಿರುದ್ಧ ದೂರು ನೀಡಿದ್ದರು.
ಅದನ್ನು ಆಧರಿಸಿ ಧಾರ್ಮಿಕ ಭಾವನೆ ಕೆರಳಿಸುವುದು (ಐಪಿಸಿ 129(ಎ) ಹಾಗೂ ದ್ವೇಷ ಭಾವನೆ ಹೆಚ್ಚಿಸುವ (ಐಪಿಸಿ 153 (ಬಿ) ಆರೋಪದಡಿ ಎಫ್ಐಆರ್ ದಾಖಲಾಗಿದೆ’ ಎಂದು ನೋಟಿಸ್ನಲ್ಲಿ ಹೇಳಲಾಗಿದೆ.
‘ಪ್ರಕರಣಕ್ಕೆ ಸಂಬಂಧಪಟ್ಟ ವಿಡಿಯೊಗಳನ್ನು ಯೂಟ್ಯೂಬ್ ಹಾಗೂ ಫೇಸ್ಬುಕ್ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಲಾಗಿದೆ. ಈ ವಿಡಿಯೊಗಳನ್ನು ಯಾವ ಐ.ಡಿ.ಗಳಿಂದ ಅಪ್ಲೋಡ್ ಮಾಡಲಾಗಿದೆ. ಈ ಬಗ್ಗೆ ಮಾಹಿತಿ ನೀಡಿ ತನಿಖೆಗೆ ಸಹಕರಿಸಬೇಕು’ ಎಂದು ನೋಟಿಸ್ನಲ್ಲಿ ಪೊಲೀಸರು ತಿಳಿಸಿದ್ದಾರೆ.
ನೋಟಿಸ್ ಪ್ರತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ನಟ ಚೇತನ್, ‘ಬ್ರಾಹ್ಮಣ್ಯದ ವಿರುದ್ಧ ನನ್ನ ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ ಪೋಸ್ಟ್ಗಳ ಬಗ್ಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದಾರೆ. ಬುಧವಾರ ಬೆಳಿಗ್ಗೆ ಬಸವನಗುಡಿ ಠಾಣೆಗೆ ಹೋಗುತ್ತಿದ್ದೇನೆ’ ಎಂದಿದ್ದಾರೆ.