ಕರ್ನಾಟಕ ವಾಣಿಜ್ಯ ಮಂಡಳಿಯಿಂದ ಸಂಚಾರಿ ವಿಜಯ್ಗೆ ಅಗೌರವ; ಬಿ ಎಸ್ ಲಿಂಗದೇವರು ಆರೋಪ
ಹೈಲೈಟ್ಸ್:
- ಕರ್ನಾಟಕ ವಾಣಿಜ್ಯ ಮಂಡಳಿಯಿಂದ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ
- ಸಂಚಾರಿ ವಿಜಯ್ಗೆ ಅಗೌರವ ತೋರಿತಾ ಕರ್ನಾಟಕ ವಾಣಿಜ್ಯ ಮಂಡಳಿ ?
- ಕರ್ನಾಟಕ ವಾಣಿಜ್ಯ ಮಂಡಳಿಯ ನಡೆ ಬಗ್ಗೆ ಲಿಂಗದೇವರು ಬೇಸರ
- ಲಿಂಗದೇವರು ಮಾಡಿದ ಆರೋಪವೇನು?
ಇತ್ತೀಚೆಗೆ ನಿಧನರಾದ ಕನ್ನಡ ಚಿತ್ರರಂಗದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯವನ್ನು ಕರ್ನಾಟಕ ವಾಣಿಜ್ಯ ಮಂಡಳಿ ಹಮ್ಮಿಕೊಂಡಿತ್ತು. ಆ ವೇಳೆ ಸಂಚಾರಿ ವಿಜಯ್ ಅವರಿಗೆ ಅಗೌರವ ಸೂಚಿಸಲಾಗಿದೆ ಎಂದು ನಿರ್ದೇಶಕ ಬಿಎಸ್ ಲಿಂಗದೇವರು ಆರೋಪ ಮಾಡಿದ್ದಾರೆ.
ಲಿಂಗದೇವರು ಹೇಳಿದ್ದೇನು?
ಕೋವಿಡ್ 19 ವೇಳೆ ಕನ್ನಡ ಚಿತ್ರೋದ್ಯಮದ ಹಲವಾರು ಮಂದಿ ನಿಧನರಾದರು. ಕೆಲವರು ಕೋವಿಡ್ಗೆ ಬಲಿಯಾದರೆ, ಇನ್ನು ಕೆಲವರು ಕೋವಿಡೇತರ ಅನಾರೋಗ್ಯಕ್ಕೆ ತುತ್ತಾಗಿ ನಮ್ಮನ್ನು ಅಗಲಿದರು. ಮೊನ್ನೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ದಕ್ಷಿಣ ಭಾರತ ಚಲನಚಿತ್ರ ಮಂಡಳಿಯ ಮಾಜಿ ಅಧ್ಯಕ್ಷರಾಗಿದ್ದ ಕನ್ನಡ ಚಿತ್ರರಂಗದ ಆಧಾರ ಸ್ತಂಭಗಳಲ್ಲಿ ಒಬ್ಬರಾದ ಕೆಸಿಎನ್. ಚಂದ್ರಶೇಖರ್ ಅವರು ನಿಧನರಾಗಿದ್ದು ನಮಗೆಲ್ಲ ತುಂಬಲಾರದ ನಷ್ಟ ಮತ್ತು ದುಃಖದ ಸಂಗತಿಯಾಗಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಗಲಿದ ಎಲ್ಲ ಚಿತ್ರರಂಗದ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಭೆಯೊಂದನ್ನು ಇಂದು ಕರೆದಿತ್ತು. ಪುಷ್ಪನಮನ ಸಲ್ಲಿಸುವ ಸಲುವಾಗಿ ವೇದಿಕೆಯಲ್ಲಿ ಕೆ.ಸಿ.ಎನ್.ಚಂದ್ರಶೇಖರ್, ರಾಮು ಮತ್ತು ಅಣ್ಣಯ್ಯ ಚಂದ್ರಶೇಖರ್ ಅವರ ಭಾವಚಿತ್ರಗಳನ್ನು ಇಡಲಾಗಿತ್ತು. ಅಗಲಿದ ಉಳಿದ ನಿರ್ಮಾಪಕರು, ನಿದೇಶಕರು, ತಂತ್ರಜ್ಞರು, ಕಲಾವಿದರು, ಕಾರ್ಮಿಕರು ಮುಂತಾದವರ ಭಾವಚಿತ್ರಗಳನ್ನು ಒಂದರ ಹಿಂದೊಂದು ಬರುವಂತೆ ಟಿವಿಯಲ್ಲಿ ಅಳವಡಿಸಲಾಗಿತ್ತು. ಗತಿಸಿದ ಎಲ್ಲರ ಭಾವಚಿತ್ರಗಳನ್ನು ವೇದಿಕೆಯ ಮೇಲೆ ಜೋಡಿಸಿ ಇಡುವುದು ಅಸಾಧ್ಯ ಕೂಡ !
ಆದರೆ ಇಂತಹ ಸಂದರ್ಭಗಳಲ್ಲಿ ಕೆಲವೊಂದು ಶಿಷ್ಟಾಚಾರ ಇರುತ್ತದೆ ಎನ್ನುವ ಪ್ರಾಥಮಿಕ ತಿಳುವಳಿಕೆಯೂ ಸಂಬಂಧಪಟ್ಟವರಿಗೆ ಇಲ್ಲದೆ ಹೋದರೆ ಹೇಗೆ? ಗತಿಸಿದವರಲ್ಲಿ ತಮ್ಮ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿ ಪಡೆದು ನಾಡಿಗೆ ಹೆಮ್ಮೆ ತಂದ ಸಂಚಾರಿ ವಿಜಯ್ ಅವರು ಅನೇಕ ಸಮಾಜಮುಖಿ ಕೆಲಸ ಮಾಡಿ ಕನ್ನಡಿಗರ ಮನ, ಮನೆ ಮಾತಾಗಿದ್ದಾರೆ.
ವಿಜಯ್ ಮಿದುಳು ನಿಷ್ಕ್ರಿಯವಾದ ನಂತರ, ಆರು ಮಂದಿಗೆ ಹೊಸ ಬದುಕು ನೀಡುವ ಉದ್ದೇಶದಿಂದ, ಅವರ ಅಂಗಾಂಗ ದಾನ ಮಾಡುವ ಉದಾತ್ತ ನಿರ್ಧಾರ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ ವಿಜಯ್ ಕುಟುಂಬದವರು. ಈ ಎಲ್ಲಾ ಹಿನ್ನೆಲೆಯಲ್ಲಿಯೇ ವಿಜಯ್ ಅಂತಿಮ ಸಂಸ್ಕಾರದ ವೇಳೆ ಸರ್ಕಾರದ ಗೌರವ ಸಂದಿತ್ತು. ಅದು ನಾಡಿಗೆ ಗೌರವ ತಂದು ಕೊಟ್ಟವರಿಗೆ ವಿದಾಯದ ವೇಳೆ ಸಂದ ಗೌರವ.
ಕನ್ನಡ ಚಿತ್ರರಂಗದ ಪ್ರಾತಿನಿಧಿಕ ಸಂಸ್ಥೆ ಎಂದು ತನ್ನನ್ನು ಕರೆದುಕೊಳ್ಳುವ, ಪ್ರತಿ ಸಂದರ್ಭದಲ್ಲೂ ವರನಟ ಡಾ. ರಾಜಕುಮಾರ್ ಅವರನ್ನು ಸ್ಮರಿಸುವ ವಾಣಿಜ್ಯ ಮಂಡಳಿ, ಪ್ರಶಸ್ತಿ ವಿಜೇತ, ಸಮಾಜ ಮುಖಿ ಕಲಾವಿದನಿಗೆ ಶ್ರದ್ಧಾಂಜಲಿ ವೇಳೆ ಸೂಕ್ತ ಗೌರವ ನೀಡದೇ ಇರುವುದು ನಿಜಕ್ಕೂ ಖಂಡನಾರ್ಹ ಮತ್ತು ವಿಜಯ್ ಕುಟುಂಬಕ್ಕೆ ತೋರಿದ ಅಗೌರವ. ಒಂದು ವೇಳೆ, ವಾಣಿಜ್ಯ ಮಂಡಳಿಯು ನಿರ್ಮಾಪಕರು, ವಿತರಕರು ಮತ್ತು ಪ್ರದರ್ಶಕರು ಮಾತ್ರ ಸದಸ್ಯರಾಗಿರುವ ಸಂಸ್ಥೆ ಎಂದು ಹೇಳುವುದಿದ್ದರೆ, ಉಳಿದವರ ಭಾವಚಿತ್ರಗಳನ್ನು ಅಲ್ಲಿ ಹಾಕಬೇಕಾದ ಅಗತ್ಯ ಇರಲಿಲ್ಲ.