Mission 2024| ಮೋದಿ ವಿರುದ್ಧ ತೃತೀಯ ರಂಗದೊಂದಿಗೆ ಅಖಾಡಕ್ಕಿಳಿದ ಶರದ್ ಪವಾರ್; ಇಲ್ಲಿದೆ ತೃತೀಯ ರಂಗದ ಕಂಪ್ಲೀಟ್ ಚಿತ್ರಣ!
ಭಾರತೀಯ ರಾಜಕಾರಣ ಮಟ್ಟಿಗೆ ಎರಡು ದಶಕಕ್ಕೆ ಒಂದು ಮುಖ ಅಥವಾ ನಾಯಕತ್ವ ಯಶಸ್ಸಿನ ಉತ್ತುಂಗಕ್ಕೆ ಏರಿ ನಂತರ ಎಡವಿರುವುದು, ರಾಜಕೀಯ ಪ್ರಪಾತಕ್ಕೆ ಕುಸಿದಿರುವುದು ಹೊಸತೇನಲ್ಲ. ಸ್ವಾತಂತ್ರ್ಯ ನಂತರದ ಚುನಾವಣೆ ವ್ಯವಸ್ಥೆಯಲ್ಲಿ ಜವಹರ್ ಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು ಅಟಲ್ ಬಿಹಾರಿ ವಾಜಪೇಯಿ ಹೀಗೆ ಉತ್ತುಂಗಕ್ಕೆ ಏರಿ ಕುಸಿದದ್ದರು. ಒಂದು ಕಾಲದಲ್ಲಿ ಕಾಂಗ್ರೆಸ್ ಹೆಸರಿನಲ್ಲಿ ಚುನಾವಣೆಗೆ ಕತ್ತೆ ನಿಂತರೂ ಗೆಲ್ಲುತ್ತದೆ ಎಂದ ನಾಡ್ನುಡಿ ಬದಲಾಗಿತ್ತು. ಮತದಾರರು ಈ ಮೂವರ ನಾಯಕತ್ವವನ್ನೂ ಮತ ಚಲಾವಣೆ ಮೂಲಕ ಸೋಲಿಸಿದ್ದ. ತುರ್ತು ಪರಿಸ್ಥಿತಿಯ ನಂತರ ತೃತೀಯ ರಂಗ ಮುನ್ನೆಲೆಗೆ ಬಂದದ್ದು ಇತಿಹಾಸ. ರಾಜೀವ್ ಗಾಂಧಿ-ಅಟಲ್ ಬಿಹಾರಿ ವಾಜಪೇಯಿ ಅವಧಿಯಿಂದ ಸರಿಯಾಗಿ ಮೂರು ದಶಕಗಳ ನಂತರ ಇಂದು ಸಹ ಭಾರತದ ರಾಷ್ಟ್ರ ರಾಜಕಾರಣದಲ್ಲಿ ಅಂತಹದ್ದೇ ಪರಿಸ್ಥಿತಿ ನಿರ್ಮಾಣವಾಗಿದೆ.
2014ರ ಲೋಕಸಭಾ ಚುನಾವಣೆಯಲ್ಲಿ ಹೊಸ ಅಲೆಯನ್ನು ಸೃಷ್ಟಿಸುವ ಮೂಲಕ ಯಶಸ್ಸಿನ ಉತ್ತುಂಗಕ್ಕೆ ಏರಿದ್ದ ಪ್ರಧಾನಿ ನರೇಮದ್ರ ಮೋದಿ ಹವಾ ದಿನಿದಿಂದ ದಿನಕ್ಕೆ ಇಳಿಯುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ದಕ್ಷಿಣ ಭಾರದಲ್ಲಿ ಕರ್ನಾಟಕದ ಹೊರತು ಬಿಜೆಪಿ ಪಕ್ಷಕ್ಕೆ ಬೇರೆ ಎಲ್ಲೂ ಗಟ್ಟಿ ನೆಲೆ ಯಾವ ಕಾಲದಲ್ಲೂ ಇರಲಿಲ್ಲ. ಉತ್ತರ ಭಾರತದ ಪಕ್ಷ ಎಂದು ಕರೆದುಕೊಳ್ಳುವ ಬಿಜೆಪಿ ಉತ್ತರದಲ್ಲೂ ದಿನದಿಂದ ದಿನಕ್ಕೆ ದುರ್ಬಲವಾಗುತ್ತಿದೆ. ಸಾಲು ಸಾಲು ರಾಜ್ಯಗಳ ಚುನಾವಣಾ ಫಲಿತಾಂಶ ಇದಕ್ಕೆ ಸಾಕ್ಷಿಯಾಗಿದೆ. ಇದಲ್ಲದೆ, ಭ್ರಷ್ಟಾಚಾರ, ಪೆಟ್ರೋಲ್-ದಿನೋಪಯೋಗಿ ವಸ್ತುಗಳ ಬೆಲೆ ಏರಿಕೆ, ನಿರುದ್ಯೋಗ ಮೋದಿ ನಾಯಕತ್ವವನ್ನು ಪ್ರಶ್ನೆ ಮಾಡುತ್ತಿದೆ.
ಭಾರತೀಯ ರಾಜಕಾರಣದಲ್ಲಿ ತೃತೀಯ ರಂಗ:
ರಾಜಕಾರಣದಲ್ಲಿ ಪರ್ಯಾಯದ ಹುಡುಕಾಟಗಳು ಇದ್ದೇ ಇರುತ್ತವೆ. ಆದರೆ ರಾಜಕೀಯ ರಂಗದಲ್ಲಿ ಅವು ಮೂರ್ತರೂಪಕ್ಕೆ ಬರಲು ಚುನಾವಣೆ ಎಂಬ ಅಗ್ನಿಪರೀಕ್ಷೆಯನ್ನು ಗೆಲ್ಲಬೇಕು. ಭಾರತದ ಇತಿಹಾಸ ಮತ್ತು ರಾಜಕಾರಣಕ್ಕೆ ತುರ್ತು ಪರಿಸ್ಥಿತಿ ಕೊಟ್ಟ ತಿರುವುಗಳು ಒಂದೆರಡಲ್ಲ. ಪರ್ಯಾಯದ ಹುಡುಕಾಟವೂ ಆಗೊಂದು ಸ್ಪಷ್ಟಿ ತಿರುವು ಪಡೆಯಿತು. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವೂ ಬಲ ಕಳೆದುಕೊಳ್ಳಬಹುದು, ಇಂದಿರಾ ಗಾಂಧಿಯೂ ಸೋಲಬಹುದು ಎಂಬುದನ್ನು ಅದು ತೋರಿಸಿತು.
ತುರ್ತು ಪರಿಸ್ಥಿತಿ ಹೇರಿಕೆಯಾಗುವ ಮೊದಲಿನಿಂದಲೂ ಇಂದಿರಾ ಗಾಂಧಿ ಆಡಳಿತ ವೈಖರಿಯನ್ನು ವಿರೋಧಿಸಿ ಜಯಪ್ರಕಾಶ್ ನಾರಾಯಣ್ ಬೆಳೆಸುತ್ತಿದ್ದ ನವನಿರ್ಮಾಣ ಚಳವಳಿಯ ಜೊತೆ ಹಲವು ಬಣ್ಣಗಳ ಸಂಘಟನೆಗಳು, ರಾಜಕೀಯ ಪಕ್ಷಗಳು ಗುರುತಿಸಿಕೊಂಡವು ಮತ್ತು ಆ ಮೂಲಕ ರಾಜಕೀಯ ಅಸ್ತಿತ್ವ ರೂಪಿಸಿಕೊಂಡವು ಎನ್ನುವುದು ಈಗ ಇತಿಹಾಸ.
ಈ ಜನಾಂದೋಲನದ ಜೊತೆ ಗುರುತಿಸಿಕೊಂಡ ಜನಸಂಘ, 1977ರ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗಳಿಸಿ ರಾಜಕೀಯವಾಗಿ ಹೊಸ ಬಲ ಪಡೆಯಿತು. ಆಗ ಕಾಂಗ್ರೆಸ್ ವಿರೋಧಿ ಪ್ರಾದೇಶಿಕ ಪಕ್ಷಗಳನ್ನು ಒಂದುಗೂಡಿಸಿ ಒಂದು ಚಿಹ್ನೆಯ ಮೇಲೆ ಚುನಾವಣೆ ಎದುರಿಸಲು ಜಿಪಿ ಮಾಡಿದ ಮಹಾಪ್ರಯೋಗದಲ್ಲಿ ಜನತಾ ಪಕ್ಷ ಉದಯವಾಯಿತು.ಹಲವು ಪಕ್ಷಗಳು ವಿಲೀನಗೊಳ್ಳಲು ಒಪ್ಪಿಕೊಂಡು ಜನತಾ ಪಕ್ಷ ಹುಟ್ಟಿದ್ದರಿಂದ ಅದನ್ನೊಂದು ರಾಜಕೀಯ ರಂಗ ಎಂದು ತಾಂತ್ರಿಕವಾಗಿ ಕರೆಯುವುದು ಕಷ್ಟ. ಜನತಾ ಪಕ್ಷ ಮತ್ತು ಅದರ ಸರ್ಕಾರದ ಪತನದ ನಂತರ ಹುಟ್ಟಿದ ಹೊಸ ರಾಜಕೀಯ ಪಕ್ಷಗಳಲ್ಲಿ 1980 ರಲ್ಲಿ ಹುಟ್ಟಿದ ಭಾರತೀಯ ಜನತಾ ಪಕ್ಷಕ್ಕೆ ಮಾತ್ರ ಮತ್ತೊಂದು ರಾಷ್ಟ್ರೀಯ ಪಕ್ಷವಾಗಿ ಬೆಳೆಯುವ ಮಹತ್ವಾಕಾಂಕ್ಷೆ ಇತ್ತು.
1984 ರಲ್ಲಿ ಇಂದಿರಾ ಹತ್ಯೆ ಅನುಕಂಪದ ಅಲೆ ತುಂಬಿದ್ದ ಲೋಕಸಭಾ ಚುನಾವಣೆಯಲ್ಲಿ ಅದು ಅನಿವಾರ್ಯವಾಗಿ ಎರಡೇ ಸ್ಥಾನ ಪಡೆದು ಸುಮ್ಮನೆ ಕೂರಬೇಕಾಯಿತು. ಮುಂದೆ 1989ರ ಲೋಕಸಭಾ ಚುನಾವಣೆಯ ಫಲಿತಾಂಶ, ಕಾಂಗ್ರೆಸ್ ಮತ್ತು ಬಿಜೆಪಿ ಎರಡನ್ನೂ ಕಂಗೇಡಿಸಿಪಿದರೆ, 143 ಸ್ಥಾನಗಳನ್ನು ಪಡೆದಿದ್ದ ಜನತಾ ದಳ ಸೇರಿ ಮಿಕ್ಕೆಲ್ಲರಲ್ಲಿ ಉಂಟಾದ
ಸಂಚಲನ ಸರ್ಕಾರ ರಚನೆಗೆ ಪ್ರೇರೇಪಣೆ ನೀಡಿತು.
ಅನಂತರದ ಈ ಮೂವತ್ತು ವರ್ಷಗಳಲ್ಲಿ ರಾಷ್ಟ್ರ ರಾಜಕಾರಣದಲ್ಲಿ ಹಲವು ಕುತೂಹಲಕರ ಪ್ರಯೋಗಗಳು ನಡೆದಿವೆ. 1989-91 ಅವಧಿಯ ‘ರಾಷ್ಟ್ರೀಯ ರಂಗದಲ್ಲಿ ವಿ.ಪಿ. ಸಿಂಗ್, ನಂತರ ಚಂದ್ರಶೇಖರ್ ಪ್ರಧಾನಿಗಳಾದರೆ, 1996-98ರ ಅವಧಿಯಲ್ಲಿ ‘ಸಂಯುಕ್ತ ರಂಗ ದಲ್ಲಿ ಎಚ್.ಡಿ. ದೇವೇಗೌಡ, ನಂತರ ಐ.ಕೆ. ಗುಜ್ರಾಲ್ ಪ್ರಧಾನಿಗಳಾಗಿ ಆಡಳಿತ ನಡೆಸಿದರು. ‘ತೃತೀಯ ರಂಗೆ ಸುಮ್ಮನೆ ಇರಲು ಸಾಧ್ಯವಿಲ್ಲವಲ್ಲ. 2008 ರಲ್ಲಿ ಮೊದಲಿನ ಎರಡು ರಂಗಗಳ ಹೆಸರನ್ನೂ ಒಳಗೊಂಡ ‘ಸಂಯುಕ್ತ ರಾಷ್ಟ್ರೀಯ ಪ್ರಗತಿಪರ ರಂಗ ರಚನೆ ಪ್ರಯತ್ನವಾಯಿತು.
2009ರ ಲೋಕಸಭಾ ಚುನಾವಣೆಗೆ ಮುನ್ನ ಬೆಂಗಳೂರು ಸಮೀಪದ ದಾಬಸ್ ಪೇಟೆಯಲ್ಲಿ ನಡೆದ ಬೃಹತ್ ಸಮಾವೇಶವೂ ನಡೆಯಿತು. ಆಗ ತೃತೀಯ ರಂಗ ಬೃಹತ್ ಪ್ರಚಾರ ಪಡೆಯಿತು. ಈ 2014ರ ಚುನಾವಣೆ ವೇಳಾಪಟ್ಟಿ ಪ್ರಕಟಣೆಗೆ ಮುನ್ನ ಫೆಬ್ರುವರಿಯಲ್ಲಿ ನವದೆಹಲಿಯಲ್ಲಿ ತೃತೀಯ ರಂಗದ ಸಭೆ ನಡೆದು ಮತ್ತೆ ಜೀವ ಪಡೆಯಿತು. ಮತ್ತೆ ನಡೆದದ್ದೆಲ್ಲಾ ಗೊತ್ತೇ ಇದೆ. ಲೋಕಸಭೆ ಚುನಾವಣೆ ನಡೆದು ನರೇಂದ್ರ ಮೋದಿ ಅಲೆಯಲ್ಲಿ ದೇಶದ ರಾಜಕಾರಣದ ಚಿತ್ರಣವೇ ಬದಲಾಗಿಬಿಟ್ಟಿತ್ತು.
ತೃತೀಯ ರಂಗ ಪ್ರಸ್ತುತ ಸ್ಥಿತಿ:
ನರೇಂದ್ರ ಮೋದಿ ಎಂಟ್ರಿ 2014ರ ನಂತರ ನಿಜಕ್ಕೂ ಭಾರತದ ರಾಜಕೀಯ ಚಿತ್ರಣವನ್ನು ಬದಲಿಸಿದ್ದು ನಿಜ. ಆದರೆ, ಪರಿಸ್ಥಿತಿ ಈಗ ಬಿನ್ನವಾಗಿದೆ. ಪ್ರಜಾಪ್ರಭುತ್ವದಲ್ಲಿ ಮೋದಿಯೂ ಪ್ರಶ್ನಾತೀತ ನಾಯಕ ಅಲ್ಲ ಮತ್ತು ಚುನಾವಣೆ ಸಂದರ್ಭದಲ್ಲಿ ಮೋದಿ ಕಟ್ಟಿದ ಆಶಾವಾದ ಭರವಸೆಗಳು ಕೇವಲ ಗಾಳಿ ಗೋಪುರ ಎಂಬುದು ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಮತ್ತೆ ತೃತೀಯ ರಂಗದ ಮಾತು ಶರದ್ ಪವಾರ್ ಕಡೆಯಿಂದ ಕೇಳಿ ಬರುತ್ತಿದೆ.‘