ಮುಂಬೈನಲ್ಲಿ ಭಾರೀ ಮಳೆಗೆ ಸಿಲುಕಿದ್ದ 290 ಜನರ ರಕ್ಷಣೆ, ಸಿಎಂ ಜೊತೆ ಪಿಎಂ ಚರ್ಚೆ

ಹಳಿ ತುಂಬಿದ ನೀರಿನಿಂದಾಗಿ ಎರಡು ರೈಲುಗಳು ಸೆಂಟ್ರಲ್ ರೈಲ್ವೆಯ ಮಸೀದಿ ಮತ್ತು ಬೈಕುಲ್ಲಾ ನಿಲ್ದಾಣಗಳ ನಡುವೆ ಸಿಲುಕಿಕೊಂಡಿವೆ.

ಮುಂಬೈ: ವಾಣಿಜ್ಯ ನಗರಿಯಲ್ಲಿ ಮಳೆ ಮತ್ತೊಮ್ಮೆ ಮುಂಬೈ (Mumbai) ನಾಗರೀಕರ ತೊಂದರೆ ಹೆಚ್ಚಿಸಿದೆ. ಕಳೆದ ಎರಡು ದಿನಗಳಿಂದ ಮಾಯನಗರಿಯಲ್ಲಿ ಭಾರಿ ಮಳೆಯಾಗಿದ್ದು, ನಗರದ ಕೆಳಭಾಗದಲ್ಲಿ ನೀರು ಪ್ರವಾಹದಂತೆ ಹರಿಯುತ್ತಿದೆ. ಚೆಂಬೂರ್, ಪ್ಯಾರೆಲ್, ಬೈಕುಲ್ಲಾ, ಹಿಂದ್ಮಾತಾ, ದಾದರ್, ಕಿಂಗ್ಸ್ ಸರ್ಕಲ್, ಸಿಯಾನ್, ಚೆಂಬೂರ್, ಅಂಧೇರಿ, ಸಾಂತಕ್ರೂಜ್, ಬೊರಿವಾಲಿ, ನಲಸೋಪರಾ ಮತ್ತು ಇತರ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದೆ. ಅದೇ ಸಮಯದಲ್ಲಿ ರಸ್ತೆ ಮತ್ತು ರೈಲು ಸಂಚಾರಗಳ ಮೇಲೂ  ಸಹ ಕೆಟ್ಟ ಪರಿಣಾಮ ಬೀರಿದೆ.

ಹಳಿ ತುಂಬಿದ ನೀರಿನಿಂದಾಗಿ ಎರಡು ರೈಲುಗಳು ಸೆಂಟ್ರಲ್ ರೈಲ್ವೆಯ ಮಸೀದಿ ಮತ್ತು ಬೈಕುಲ್ಲಾ ನಿಲ್ದಾಣಗಳ ನಡುವೆ ಸಿಲುಕಿಕೊಂಡಿವೆ. ಎರಡು ಸ್ಥಳೀಯ ರೈಲುಗಳಲ್ಲಿ ಸಿಲುಕಿರುವ 290 ಪ್ರಯಾಣಿಕರನ್ನು ಎನ್‌ಡಿಆರ್‌ಎಫ್ (NDRF) ಮತ್ತು ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ಸುರಕ್ಷಿತವಾಗಿ ಸ್ಥಳಾಂತರಿಸಿದೆ ಎಂದು ಸೆಂಟ್ರಲ್ ರೈಲ್ವೆಯ ಮುಖ್ಯ ವಕ್ತಾರರು ಮಾಹಿತಿ ನೀಡಿದರು.

ಪಿಎಂ ಸಹಾಯದ ಭರವಸೆ:
ಮತ್ತೊಂದೆಡೆ ಮುಂಬೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಮಳೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ (Uddhav Thackeray) ಅವರೊಂದಿಗೆ ಮಾತನಾಡಿದ್ದು ಕೇಂದ್ರ ಸರ್ಕಾರದಿಂದ ಅಗತ್ಯವಿರುವ ಎಲ್ಲಾ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

ಅದೇ ಸಮಯದಲ್ಲಿ ಭಾರಿ ಮಳೆಯ ಸಮಯದಲ್ಲಿ ನಾಗರಿಕರನ್ನು ರಕ್ಷಿಸಲು ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ಠಾಕ್ರೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾಹಿತಿ ನೀಡಿದ್ದಾರೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಕಚೇರಿ ಬುಧವಾರ ತಡರಾತ್ರಿ ತಿಳಿಸಿದೆ. ಈ ಕುರಿತಂತೆ ಮಹಾರಾಷ್ಟ್ರ ಮುಖ್ಯಮಂತ್ರಿಗಳ ಕಚೇರಿ ಟ್ವೀಟ್ ಮಾಡಿದ್ದು ರಾಜ್ಯಕ್ಕೆ ಸಹಾಯದ ಭರವಸೆ ನೀಡಿದ ಪ್ರಧಾನಿಯವರಿಗೆ ಮುಖ್ಯಮಂತ್ರಿ ಠಾಕ್ರೆ ಧನ್ಯವಾದ ಅರ್ಪಿಸಿದರು. ಅದೇ ಸಮಯದಲ್ಲಿ ಠಾಕ್ರೆ ಅವರು ರಾಮಮಂದಿರಕ್ಕೆ ಅಡಿಪಾಯ ಹಾಕಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಅಭಿನಂದಿಸಿದರು.

ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದ್ದ ಸಚಿವ: 
ಏತನ್ಮಧ್ಯೆ, ಮೂಲಗಳಿಂದ ಬಂದ ಸುದ್ದಿಯ ಪ್ರಕಾರ ರಾಜ್ಯ ಸಾಮಾಜಿಕ ನ್ಯಾಯ ಸಚಿವ ಧನಂಜಯ್ ಮುಂಡೆ ಸೇರಿದಂತೆ ಡಜನ್ಗಟ್ಟಲೆ ಜನರು ಇಲ್ಲಿನ ಪೂರ್ವ ಮುಕ್ತಮಾರ್ಗದಲ್ಲಿ ಸುಮಾರು ಮೂರೂವರೆ ಗಂಟೆಗಳ ಕಾಲ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿದ್ದರು. ಅವರು ಇಲ್ಲಿನ ಯಶ್ವಂತ್ರಾವ್ ಚವಾಣ್ ಕೇಂದ್ರದಲ್ಲಿ ನಡೆದ ಎನ್‌ಸಿಪಿ ನಾಯಕರ ಸಭೆಯಲ್ಲಿ ಭಾಗವಹಿಸಲಿದ್ದರು.

ಧನಂಜಯ್ ಮುಂಡೆ ಅವರ ಆಪ್ತ ಮೂಲಗಳ ಪ್ರಕಾರ ಭಾರಿ ಮಳೆಯಿಂದಾಗಿ, ಸಚಿವರ ವಾಹನವು ಮುಕ್ತ ಮಾರ್ಗದಲ್ಲಿ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿಕೊಂಡಿದ್ದು ಅವರು ಸುಮಾರು ಮೂರೂವರೆ ಗಂಟೆಗಳ ನಂತರ ಸಭೆಯನ್ನು ತಲುಪಬಹುದು ಎಂದಿದ್ದರು.

ರೆಡ್ ಅಲರ್ಟ್: 
ಮುಂಬೈನಲ್ಲಿ ಮುಂದಿನ 24 ಗಂಟೆಗಳಲ್ಲಿ ಧಾರಾಕಾರ ಮಳೆಯಾಗುವ ಬಗ್ಗೆ ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ನೀಡಿದೆ. ಮುಂಬೈ ಅಲ್ಲದೆ ಥಾಣೆ, ಪಾಲ್ಘರ್, ರಾಯಗಡ್ ಮತ್ತು ರತ್ನಾಗಿರಿ ಜಿಲ್ಲೆಗಳಿಗೂ ರೆಡ್ ಅಲರ್ಟ್ ನೀಡಲಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *