ನಾನೂ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿ ಎಂದ ಡಾ.ಜಿ. ಪರಮೇಶ್ವರ್‌!

ಹೈಲೈಟ್ಸ್‌:

  • ಸಿಎಂ ರೇಸ್‌ನಲ್ಲಿ ನಾನು ಇಲ್ಲ ಎಂದವರು ಯಾರು ಎಂದು ಪ್ರಶ್ನಿಸಿದ ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್‌
  • 2013ರಿಂದಲೂ ನಾನು ಮುಖ್ಯಮಂತ್ರಿ ಸ್ಥಾನದ ಸ್ಪರ್ಧೆಯಲ್ಲಿ ಇದ್ದೇನೆ ಎಂದ ಪರಮೇಶ್ವರ್‌
  • ಆದರೆ ಇದು ಸಮಯವಲ್ಲ. ಎಲ್ಲರೂ ಸೇರಿ ಮುಂದಿನ ಚುನಾವಣೆಯನ್ನು ಎದುರಿಸಲಿದ್ದೇವೆ ಎಂದ ಮಾಜಿ ಉಪಮುಖ್ಯಮಂತ್ರಿ

ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ): ರಾಜ್ಯ ಕಾಂಗ್ರೆಸ್‌ನಲ್ಲಿ ಕೇಳಿ ಬರುತ್ತಿರುವ ಮುಂದಿನ ಸಿಎಂ ಯಾರು ಎಂಬ ಚರ್ಚೆಯ ಪರ ವಿರೋಧದ ನಡುವೆಯೇ ನಾನು ಕೂಡ ಸಿಎಂ ರೇಸ್‌ನಲ್ಲಿದ್ದೇನೆ. ಸಿಎಂ ರೇಸ್‌ನಲ್ಲಿ ನಾನು ಇಲ್ಲ ಎಂದವರು ಯಾರು ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್‌ ಪ್ರಶ್ನಿಸಿದ್ದಾರೆ.

ಲಾಕ್‌ಡೌನ್‌ ವೇಳೆ ಶಾಸಕ ಟಿ ವೆಂಕಟರಮಣಯ್ಯ ನೇತೃತ್ವದಲ್ಲಿ ನಡೆಯುತ್ತಿರುವ ನಿತ್ಯ ಅನ್ನದಾಸೋಹದ ಕಾರ್ಯಕ್ರಮದಲ್ಲಿ ಆಹಾರ ಪೊಟ್ಟಣಗಳನ್ನು ವಿತರಿಸಿ ಮಾತನಾಡಿದರು.

2013ರಿಂದಲೂ ನಾನು ಮುಖ್ಯಮಂತ್ರಿ ಸ್ಥಾನದ ಸ್ಪರ್ಧೆಯಲ್ಲಿ ಇದ್ದೇನೆ. ಆದರೆ ಇದು ಸಮಯವಲ್ಲ. ಎಲ್ಲರೂ ಸೇರಿ ಮುಂದಿನ ಚುನಾವಣೆಯನ್ನು ಎದುರಿಸಲಿದ್ದೇವೆ ಎಂದು ಅವರು ಹೇಳಿದರು.

ಶಾಸಕರು ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ಹೇಳಿಕೆ ನೀಡುತ್ತಿರುವುದು ಅವರ ವೈಯಕ್ತಿಕ ಅಭಿಪ್ರಾಯವಾಗಿದ್ದು, ಸಿಎಂ ಅಭ್ಯರ್ಥಿ ವಿಚಾರವಾಗಿ ಯಾವ ಚರ್ಚೆಯೂ ಬೇಡ ಎಂದು ತಿಳಿಸಿದ್ದೇನೆ. ಇದನ್ನು ಇಲ್ಲಿಗೆ ಬಿಟ್ಟು ಕೇಂದ್ರ ಹಾಗೂ ರಾಜ್ಯ ಸರಕಾರದ ದುರಾಡಳಿತವನ್ನು ಜನರಿಗೆ ತಲುಪಿಸಿ ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲರೂ ಒಟ್ಟಾಗಿ ಶ್ರಮಿಸುವಂತೆ ತಿಳಿಸಿದ್ದೇನೆ ಎಂದರು.

ಸಾವಿನ ವರದಿ ಆಡಿಟ್‌ ಮಾಡಿಸಿ

ಕೋವಿಡ್‌ ಹಿನ್ನೆಲೆಯಲ್ಲಿ ಸಾವಿನ ಪ್ರಕರಣಗಳ ಕುರಿತು ಸರಕಾರ ನೀಡುವ ವರದಿಗೂ, ಆಸ್ಪತ್ರೆಗಳಲ್ಲಿನ ವರದಿಗೂ ವ್ಯತ್ಯಾಸವಿದ್ದು ಡೆತ್‌ ಆಡಿಟ್‌ ನಡೆಸಿ ಜನರಿಗೆ ವಾಸ್ತವ ತಿಳಿಸಬೇಕೆಂದು ಒತ್ತಾಯಿಸಿದರು.

ಎರಡನೇ ಅಲೆಯ ವೇಳೆ ತೋರಿದ ಅಸಡ್ಡೆಯಿಂದ ರಾಜ್ಯ ಸರಕಾರ ಪಾಠ ಕಲಿಯಬೇಕಿದ್ದು, ಮೂರನೇ ಅಲೆಗೂ ಮುನ್ನವೇ ಸಂಪೂರ್ಣ ವ್ಯವಸ್ಥೆ ಸಿದ್ದವಾಗಿಟ್ಟುಕೊಳ್ಳಬೇಕೆಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ತಿಳಿಸಿದರು.

ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸಿ

ತಜ್ಞರ ವರದಿಯಂತೆ ಮೂರನೇ ಅಲೆ ಹೆಚ್ಚಾಗಿ ಮಕ್ಕಳನ್ನು ಕಾಡುವ ಆಂತಕವಿದ್ದು, ಮಕ್ಕಳು ನಮ್ಮ ಭವಿಷ್ಯ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ವಿಶೇಷ ಕಾಳಜಿ ವಹಿಸಿ ರಾಜ್ಯದ ಎಲ್ಲಾ ಜಿಲ್ಲೆ, ತಾಲೂಕು ಮಟ್ಟದಲ್ಲಿ ಮಕ್ಕಳ ತಜ್ಞರನ್ನು ನೇಮಿಸಬೇಕಿದೆ. ಮೂರನೇ ಅಲೆಗೂ ಮುನ್ನ ರಾಜ್ಯ ಸರಕಾರ ಲಸಿಕೆ ವಿತರಣೆ ಹೆಚ್ಚಿಸುವುದರ ಜತೆಗೆ, ವ್ಯವಸ್ಥಿತವಾಗಿ ಅಗತ್ಯ ಕ್ರಮಗಳ ಸಿದ್ಧತೆ ಮಾಡಿಕೊಳ್ಳಬೇಕಿದೆ ಎಂದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *