ಟೊಮೆಟೊ ಸುಗ್ಗಿ ಆರಂಭ; ಏರಿಕೆಯಾಗಿದ್ದ ಬೆಲೆ ಮತ್ತೆ ಇಳಿಕೆ, ಬೆಳೆಗಾರರು ಕಂಗಾಲು!

ಹೈಲೈಟ್ಸ್‌:

  • ಏರಿಕೆಯಾಗಿದ್ದ ಬೆಲೆ ಮತ್ತೆ ಇಳಿಕೆಯಿಂದ ಟೊಮೆಟೊ ಬೆಳೆಗಾರರು ಕಂಗಾಲು
  • ಟೊಮೆಟೊ ಬೆಲೆಯು 300, 400, 500ರೂಗಳು ಏರಿಕೆಯಾಗಲಿದೆ ಎನ್ನುವ ನಿರೀಕ್ಷೆಯಲ್ಲಿದ್ದ ಬೆಳೆಗಾರರಿಗೆ ಈಗ ದಿಕ್ಕುತೋಚದಂತಾಗಿದೆ.
  • ಒರಿಸ್ಸಾದಲ್ಲಿ ಕಟ್ಟುನಿಟ್ಟಿನ ವೀಕೆಂಡ್‌ ಲಾಕ್‌ಡೌನ್‌ ಜಾರಿಯೇ ಟೊಮೆಟೊ ಬೆಲೆ ಇಳಿಕೆಗೆ ಪ್ರಮುಖ ಕಾರಣ

ಜಿಲ್ಲೆಯಲ್ಲಿ ಕೆಲ ದಿನಗಳಿಂದ ಟೊಮೆಟೊ ಸುಗ್ಗಿ ಆರಂಭವಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿದೆ. ಆದರೆ, ಏರಿಕೆಯಾಗಿದ್ದ ಬೆಲೆ ಮತ್ತೆ ಇಳಿಕೆಯತ್ತ ಮುಖಮಾಡಿರುವುದರಿಂದ ಬೆಳೆಗಾರರು ಕಂಗಾಲಾಗಿದ್ದಾರೆ.

ವಾರ-ಹತ್ತು ದಿನಗಳ ಹಿಂದೆ ಬೆಲೆಯು 60-70ರೂಗಳಿದ್ದು, ಆ ಬಳಿಕ ಕೊಂಚ ಏರಿಕೆಯಾಗಿ 100, 150, 200, 250 ರೂ.ಗಳನ್ನು ಕಂಡಿತ್ತು. ಆದರೆ, ಇದೀಗ ಪುನಃ 100-150 ರೂಗಳಿಗೆ ಇಳಿಕೆಯಾಗಿರು ವುದರಿಂದ ಬೆಳೆಗಾರರಲ್ಲಿ ಆತಂಕ ಮನೆ ಮಾಡಿದೆ.

ಕಳೆದ ಒಂದು ವರ್ಷದಿಂದಲೂ ಕೊರೊನಾ 1ನೇ ಅಲೆ, 2ನೇ ಅಲೆ ಲಾಕ್‌ಡೌನ್‌ಗಳಿಂದಾಗಿ ನಾನಾ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ, ಬೆಲೆ ಇಲ್ಲದೆ ಸಾಕಷ್ಟು ತೊಂದರೆಗೀಡಾಗಿದ್ದ ರೈತರು ಇತ್ತೀಚೆಗೆ ಕೊಂಚ ಚೇತರಿಕೆ ಕಂಡಿದ್ದು, ನಾನಾ ಬೆಳೆಗಳನ್ನು ಬೆಳೆದಿದ್ದಾರೆ.

ಎಲ್ಲ ಬೆಳೆಗಳಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಸಾವಿರಾರು ಹೆಕ್ಟೇರ್‌ ಪ್ರದೇಶದಲ್ಲಿ ಟೊಮೆಟೊ ಬೆಳೆಯಲಾಗಿದ್ದು, ಬೆಲೆಯು 300, 400, 500ರೂಗಳು ಏರಿಕೆಯಾಗಲಿದೆ ಎನ್ನುವ ನಿರೀಕ್ಷೆಯಲ್ಲಿದ್ದ ಬೆಳೆಗಾರರಿಗೆ ಸದ್ಯ ಇಳಿಕೆಯಾಗಿರುವ ಬೆಲೆಯಿಂದಾಗಿ ದಿಕ್ಕುತೋಚದಂತಾಗಿದೆ.

ಒರಿಸ್ಸಾ ವೀಕೆಂಡ್‌ ಲಾಕ್‌ ಕಾರಣ
ಏಷ್ಯಾದಲ್ಲೇ 2ನೇ ಅತಿದೊಡ್ಡ ಮಾರುಕಟ್ಟೆ ಖ್ಯಾತಿ ಪಡೆದಿರುವ ಕೋಲಾರ ಟೊಮೇಟೊ ಮಾರುಕಟ್ಟೆಗೆ ಇತ್ತೀಚೆಗೆ ಟೊಮೆಟೊ ಅವಕ ಹೆಚ್ಚಾಗಿದ್ದು, ಪ್ರತಿದಿನವೂ 40 ಸಾವಿರ ಕ್ವಿಂಟಾಲ್‌ಗೂ ಅಧಿಕ ಟೊಮೆಟೊ ಬರುತ್ತಿದೆ. ಇಲ್ಲಿಂದ ಹೆಚ್ಚಿನ ಪ್ರಮಾಣದಲ್ಲಿಒರಿಸ್ಸಾ ರಾಜ್ಯಕ್ಕೆ ರಫ್ತು ಮಾಡಲಾಗುತ್ತಿದೆ. ಆದರೆ, ಕೊರೊನಾ 2ನೇ ಅಲೆ ವ್ಯಾಪಕವಾಗಿರುವ ಕಾರಣ ಒರಿಸ್ಸಾದಲ್ಲಿ ಕಟ್ಟುನಿಟ್ಟಿನ ವೀಕೆಂಡ್‌ ಲಾಕ್‌ಡೌನ್‌ ಜಾರಿಯೇ ಟೊಮೆಟೊ ಬೆಲೆ ಇಳಿಕೆಗೆ ಪ್ರಮುಖ ಕಾರಣವಾಗಿದೆ. ಅಲ್ಲದೆ, ಇನ್ನೂ ಕೆಲದಿನಗಳು ಇದೇ ಪರಿಸ್ಥಿತಿ ಇರುವ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ.

ಹೀಗಾಗಿ ಟೊಮೆಟೊ ಬೆಳೆಗಾರರ ಆತಂಕ ಹೆಚ್ಚಲು ಕಾರಣವಾಗಿದ್ದು, ರಾಜ್ಯದಲ್ಲಿ ಲಾಕ್‌ಡೌನ್‌ ಸಡಿಲಿಕೆಯಿಂದಾಗಿ ಕೊಂಚ ನೆಮ್ಮದಿ ಕಾಣುವ ಸಂದರ್ಭದಲ್ಲೇ ಒರಿಸ್ಸಾ ವೀಕೆಂಡ್‌ ಲಾಕ್‌ಡೌನ್‌ ಪರಿಣಾಮ ಟೊಮೆಟೊ ಬೆಲೆ ಮೇಲೆ ಬೀರಿರುವುದು ನೋವುಂಟಾಗಿದೆ.

ಹೆಚ್ಚಾಗಿದೆ ಆವಕ
ಟೊಮೆಟೊ ಸುಗ್ಗಿ ಆರಂಭವಾಗಿದ್ದು, ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಬೆಳೆಯಲಾಗಿದೆ. ವರ್ಷದಿಂದ ಯಾವುದೇ ಬೆಳೆಗಳಲ್ಲಿ ನಿರೀಕ್ಷಿತ ಆದಾಯಗಳಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಟೊಮೆಟೊ ಸುಗ್ಗಿಯಾದರೂ ಕೈಹಿಡಿಯುವುದು ಎನ್ನುವ ನಿರೀಕ್ಷೆಯಲ್ಲಿ ಟೊಮೆಟೊವನ್ನು ಅಧಿಕವಾಗಿ ಬೆಳೆಯಲಾಗಿದೆ. ಬೆಲೆಗಳ ಏರಿಳಿಕೆಯಿಂದಾಗಿ ಕಂಗಾಲಾಗಿರುವ ಬೆಳೆಗಾರರ ನೆರವಿಗೆ ಸರಕಾರ ಧಾವಿಸದೇ ಇರುವುದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದ್ದು, ಪ್ರತಿ ಕೆಜಿಗೆ ಬೆಂಬಲ ಬೆಲೆಯನ್ನಾದರೂ ನೀಡಲಿ ಎಂದು ಒತ್ತಾಯಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *