ಕಾವೇರಿ ನಿವಾಸದ ಹಿಂಭಾಗದ ಗೆಸ್ಟ್ ಹೌಸ್ ಮೇಲೆ ಏಕೆ ದಾಳಿ ಮಾಡುತ್ತಿಲ್ಲ, ಸಿಸಿಬಿ ಪೊಲೀಸರಿಗೆ ಯತ್ನಾಳ್ ಪ್ರಶ್ನೆ !

ಹೈಲೈಟ್ಸ್‌:

  • ಸಿಎಂ ಅಧಿಕೃತ ನಿವಾಸ ಕಾವೇರಿ ಹಿಂಭಾಗದ ಗೆಸ್ಟ್ ಹೌಸ್ ಮೇಲೆ ಏಕೆ ದಾಳಿ ಮಾಡುತ್ತಿಲ್ಲ
  • ಎಲ್ಲ ಡೀಲ್‌ಗಳು ನಡೆಯುತ್ತಿರುವುದು ಅಲ್ಲೇ, ವಿಜಯೇಂದ್ರ ಕೂಡಾ ಅಲ್ಲೇ ಡೀಲ್ ಮಾಡ್ತಾರೆ
  • ಸಿಸಿಬಿ ಪೊಲೀಸರಿಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನೆ !

ಮೈಸೂರು: ಸಿಎಂ ಅಧಿಕೃತ ನಿವಾಸ ಕಾವೇರಿ ಹಿಂಭಾಗದಲ್ಲಿರುವ ಗೆಸ್ಟ್‌ ಹೌಸ್‌ ಮೇಲೆ ಸಿಸಿಬಿ ಪೊಲೀಸರು ಏಕೆ ದಾಳಿ ನಡೆಸುತ್ತಿಲ್ಲ? ಹೀಗಂತ ಪ್ರಶ್ನೆ ಮಾಡಿದವರು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್. ಮೈಸೂರಿನಲ್ಲಿ ಸೋಮವಾರ ಮಾತನಾಡಿದ ಅವರು ಎಲ್ಲ ಡೀಲ್‌ಗಳು ನಡೆಯುವುದು ಅದೇ ಗೆಸ್ಟ್‌ ಹೌಸ್‌ನಲ್ಲಿ ಸಿಎಂ ಪುತ್ರ ವಿಜಯೇಂದ್ರ ಡೀಲ್ ಮಾಡುವುದು ಅದೇ ಸ್ಥಳದಲ್ಲಿ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಸಿಎಂ ಬಿಎಸ್‌ವೈ ಹಾಗೂ ಅವರ ಪುತ್ರ ವಿಜಯೇಂದ್ರ ವಿರುದ್ಧ ಮತ್ತೆ ವಾಗ್ದಾಳಿ ಮುಂದುವರಿಸಿದ ಯತ್ನಾಳ್, ಆಗಸ್ಟ್ 15 ರ ವರೆಗೆ ಏಕೆ ಸಿಎಂ ಮುಂದುವರಿಸಬೇಕು? ಶೀಘ್ರದಲ್ಲೇ ಸಿಎಂ ಬಿಎಸ್‌ವೈ ಬದಲಾವಣೆ ಮಾಡಬೇಕು ಎಂದರು. ದಿನಕ್ಕೆ ನೂರು ಕೋಟಿ ಲೂಟಿ ಹೊಡೆಯುತ್ತಿದ್ದಾರೆ ಆದರೆ ಇದನ್ನು ಪ್ರಶ್ನಿಸಬೇಕಾಗಿದ್ದ ವಿರೋಧ ಪಕ್ಷಗಳು ರಾಜ್ಯದಲ್ಲಿಸತ್ತು ಹೋಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಎಸ್‌ವೈ ಜೊತೆ ಎಲ್ಲರು ಶಾಮೀಲಾಗಿದ್ದಾರೆ. ಹೀಗಾಗಿ ಅವರು ಸಿಎಂ ವಿರುದ್ಧ ಮಾತನಾಡಲ್ಲ.ಅವರಿಗೂ ಬಿಎಸ್‌ವೈ ಮುಂದುವರಿಯುವುದು ಬೇಕಾಗಿದೆ ಎಂದು ಕಾಂಗ್ರೆಸ್, ಜೆಡಿಎಸ್‌ ವಿರುದ್ಧ ಯತ್ನಾಳ್ ಕಿಡಿಕಾರಿದರು.

ರಾಜ್ಯ ಲೂಟಿ ಮಾಡುವ ದುಷ್ಠರ ಸಂಹಾರ ಆಗಬೇಕು. ಯಾರು ಅಪಾರ ಪ್ರಮಾಣದಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದಾರೆ, ಯಾರು ಅಧಿಕಾರ ದುರುಪಯೋಗ ಮಾಡುತ್ತಿದ್ದಾರೆ ಅವರೆಲ್ಲಾ ದುಷ್ಟರು. ಆದಷ್ಟು ಬೇಗ ದುಷ್ಟರ ಸಂಹಾರ ಆಗಲಿದೆ ಎಂದು ಎಂದಿನಂತೆ ಬಿಎಸ್‌ವೈ ಕುಟುಂಬದ ವಿರುದ್ಧ ವಾಗ್ದಾಳಿಯನ್ನು ನಡೆಸಿದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *