104 ದೇಶ ವ್ಯಾಪಿಸಿದ ಡೆಲ್ಟಾ ಪ್ಲಸ್ ವೈರಸ್: ಪ್ರವಾಸಿ ತಾಣಗಳಲ್ಲಿ ನೂಕುನುಗ್ಗಲು, ನಿಯಮ ಪಾಲನೆಗೆ ಕೇಂದ್ರ ಸರಕಾರ ಮನವಿ!
ಹೈಲೈಟ್ಸ್:
- ದೇಶದ ಮೊದಲ ಕೊರೊನಾ ಸೋಂಕಿತೆಗೆ ಮತ್ತೆ ವಕ್ಕರಿಸಿದ ಸೋಂಕು
- ಪರೀಕ್ಷೆ ನಡೆಸುವ ವೇಳೆ ಸೋಂಕು, ಮನೆಯಲ್ಲೇ ಚಿಕಿತ್ಸೆ
- ಇತ್ತ ಪ್ರವಾಸ ಸ್ಥಳಗಳಲ್ಲಿ ಜನಸಾಗರದ ಬಗ್ಗೆ ಮೋದಿ ಕಳವಳ
ಹೊಸದಿಲ್ಲಿ: ದೇಶದಲ್ಲಿ ಜನರು ಕೊರೊನಾ ಮುನ್ನೆಚ್ಚರಿಕೆಗಳನ್ನು ಕಡೆಗಣಿಸಿ ಗುಂಪು ಸೇರುತ್ತಿರುವ ಕುರಿತು ತಜ್ಞರು ಪದೇಪದೆ ಎಚ್ಚರಿಸುತ್ತಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಸಹ ಗಿರಿಧಾಮಗಳು, ಪ್ರವಾಸಿ ತಾಣಗಳು ಹಾಗೂ ಮಾರುಕಟ್ಟೆಗಳಲ್ಲಿ ಜನದಟ್ಟಣೆ ಉಂಟಾಗುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ.
”ಗಿರಿಧಾಮಗಳು, ಪ್ರವಾಸಿ ತಾಣಗಳು, ಮಾರುಕಟ್ಟೆಗಳಲ್ಲಿ ಜನರ ವರ್ತನೆ ಆತಂಕ ಮೂಡಿಸುತ್ತಿದೆ. ಈ ಸ್ಥಳಗಳಲ್ಲಿ ಸಾಮಾಜಿಕ ಅಂತರವನ್ನು ಸ್ವಲ್ಪವೂ ಪಾಲಿಸುತ್ತಿಲ್ಲ. ಮಾಸ್ಕ್ ಧರಿಸುವುದನ್ನಂತೂ ಜನ ಬಹುತೇಕ ಮರೆತಂತೆಯೇ ತೋರುತ್ತಿದೆ. ಯಾವುದೇ ವೈರಾಣು ತಾನಾಗಿಯೇ ಬರುವುದಿಲ್ಲ ಮತ್ತು ತಾನಾಗಿಯೇ ಹೋಗುವುದೂ ಇಲ್ಲ. ನಿಯಮಗಳನ್ನು ಪಾಲಿಸದೇ ನಾವೇ ಸೋಂಕಿಗೆ ಆಹ್ವಾನ ನೀಡುತ್ತಿದ್ದೇವೆ. ಮುನ್ನೆಚ್ಚರಿಕೆಗಳನ್ನು ಪಾಲಿಸದೇ ಇರುವುದರಿಂದ ಸೋಂಕು ಪ್ರಸರಣ ತೀವ್ರವಾಗುತ್ತದೆ ಎಂಬ ತಜ್ಞರ ಎಚ್ಚರಿಕೆಯನ್ನು ಕಡೆಗಣಿಸುತ್ತಿದ್ದೇವೆ,” ಎಂದು ಪ್ರಧಾನಿ ಆತಂಕ ವ್ಯಕ್ತಪಡಿಸಿದ್ದಾರೆ.
ಮೊದಲ ಸೋಂಕಿತೆಗೆ ಮತ್ತೆ ಸೋಂಕು
ದೇಶದ ಮೊದಲ ಕೊರೊನಾ ವೈರಾಣು ಸೋಂಕಿತೆಗೆ ಮತ್ತೆ ಸೋಂಕು ತಗುಲಿದೆ. ಚೀನಾದ ವುಹಾನ್ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ತ್ರಿಶ್ಶೂರಿನ ವಿದ್ಯಾರ್ಥಿನಿಗೆ 2020ರ ಜನವರಿ 30ರಂದು ಸೋಂಕು ದೃಢಪಟ್ಟಿತ್ತು. ತ್ರಿಶ್ಶೂರ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆದ ಬಳಿಕ 2020ರ ಫೆ.20ರಂದು ಆಕೆ ಗುಣಮುಖರಾಗಿ ಮನೆಗೆ ತೆರಳಿದ್ದರು. ”ಆಕೆಯನ್ನು ಪತ್ತೆ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ದೃಢಪಟ್ಟಿದೆ. ಆರ್ಟಿ-ಪಿಸಿಆರ್ ತಪಾಸಣೆಯಲ್ಲಿಪಾಸಿಟಿವ್, ಆ್ಯಂಟಿಜೆನ್ ಟೆಸ್ಟ್ನಲ್ಲಿ ನೆಗೆಟಿವ್ ಬಂದಿದೆ. ಆಕೆಯಲ್ಲಿ ಸೋಂಕಿನ ಯಾವುದೇ ಲಕ್ಷಣ ಇಲ್ಲ. ಹೀಗಾಗಿ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ,” ಎಂದು ಜಿಲ್ಲಾವೈದ್ಯಾಧಿಕಾರಿ ತಿಳಿಸಿದ್ದಾರೆ.
ಶ್ರಮ ವ್ಯರ್ಥವಾದೀತು
ಕೇಂದ್ರ ಆರೋಗ್ಯ ಸಚಿವಾಲಯವೂ ಕೊರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತೆ ಜನತೆಗೆ ಮನವಿ ಮಾಡಿದೆ. ”ಯಾವುದೇ ಸಂದರ್ಭದಲ್ಲಿಯೂ ಮಾಸ್ಕ್ ಧಾರಣೆ ಮತ್ತು ಸಾಮಾಜಿಕ ಅಂತರ ಪಾಲನೆ ತಪ್ಪಿಸಬೇಡಿ. ನಿಯಮಗಳನ್ನು ಪಾಲಿಸದಿರುವ ಮೂಲಕ ನೀವೊಬ್ಬರೇ ಸೋಂಕು ತಗುಲಿಸಿಕೊಳ್ಳುವುದಿಲ್ಲ, ಬದಲಿಗೆ ನಿಮ್ಮ ಜತೆಗಿರುವವರಿಗೂ ಹರಡಿಸುತ್ತೀರಿ. ಇದರಿಂದ ಕೊರೊನಾ ನಿಯಂತ್ರಣಕ್ಕೆ ನಾವು ಇದುವರೆಗೆ ವಹಿಸಿದ ಶ್ರಮವೆಲ್ಲ ವ್ಯರ್ಥವಾಗುತ್ತದೆ. ದಯವಿಟ್ಟು ಅದಕ್ಕೆ ಆಸ್ಪದ ನೀಡಬೇಡಿ,” ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ಮನವಿ ಮಾಡಿದ್ದಾರೆ.
ಕರ್ನಾಟಕ ಸಿಎಂ ಜತೆ ಶುಕ್ರವಾರ ಚರ್ಚೆ
ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಕೇರಳ ಮತ್ತು ಒಡಿಶಾ ಮುಖ್ಯಮಂತ್ರಿಗಳ ಜತೆ ಪ್ರಧಾನಿ ನರೇಂದ್ರ ಮೋದಿ ಅವರು ಕೊರೊನಾ ನಿರ್ವಹಣೆ ಸಂಬಂಧ ಶುಕ್ರವಾರ (ಜುಲೈ 16) ಚರ್ಚೆ ನಡೆಸಲಿದ್ದಾರೆ. ಈ ರಾಜ್ಯಗಳಲ್ಲಿ ಒಟ್ಟಾರೆಯಾಗಿ ಸೋಂಕು ನಿಯಂತ್ರಣದಲ್ಲಿದ್ದರೂ ಕೆಲವು ಜಿಲ್ಲೆಗಳಲ್ಲಿ ಸೋಂಕು ಪ್ರಸರಣ ತೀವ್ರವಾಗಿದೆ.
ಸೆಪ್ಟೆಂಬರ್ನಲ್ಲಿ ಸ್ಪುಟ್ನಿಕ್ ಉತ್ಪಾದನೆ
ಪುಣೆಯ ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯು ರಷ್ಯಾದ ಕೊರೊನಾ ನಿರೋಧಕ ಲಸಿಕೆ ‘ಸ್ಪುಟ್ನಿಕ್ ವಿ’ ಉತ್ಪಾದನೆಯನ್ನು ಸೆಪ್ಟೆಂಬರ್ನಲ್ಲಿಆರಂಭಿಸಲಿದೆ. ರಷ್ಯಾ ನೇರ ಹೂಡಿಕೆ ನಿಧಿ (ಆರ್ಡಿಐಎಫ್) ಮತ್ತು ಸೀರಂ ನಡುವಿನ ಒಪ್ಪಂದದ ಅನ್ವಯ, ಸೀರಂ ಪ್ರತಿವರ್ಷ 300 ದಶಲಕ್ಷ ಡೋಸ್ಗಳನ್ನು ಉತ್ಪಾದಿಸಲಿದೆ. ಸ್ಪುಟ್ನಿಕ್ ಲಸಿಕೆಯನ್ನು ಸದ್ಯ 67 ದೇಶಗಳಲ್ಲಿಬಳಸುತ್ತಿದ್ದು, ಶೇ.97.6ರಷ್ಟು ಪರಿಣಾಮಕಾರಿ ಎನ್ನುವುದು ಸಾಬೀತಾಗಿದೆ.
104 ದೇಶ ವ್ಯಾಪಿಸಿದ ಡೆಲ್ಟಾ
ಕೊರೊನಾದ ರೂಪಾಂತರಿ ವೈರಾಣು ಡೆಲ್ಟಾ ಅತ್ಯಂತ ವೇಗವಾಗಿ ಪ್ರಸರಣ ಹೊಂದುತ್ತಿದ್ದು, ಜಗತ್ತಿನ 104 ದೇಶಗಳನ್ನು ವ್ಯಾಪಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್ಒ) ಮಂಗಳವಾರ ತಿಳಿಸಿದೆ. ”ಕೊರೊನಾ ಸಾಂಕ್ರಾಮಿಕ ಇನ್ನೂ ಮುಗಿದಿಲ್ಲ. ಲಸಿಕೆ ಸಿಗದ ದೇಶಗಳಲ್ಲಿಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಲಿದೆ. ಮುಂಜಾಗೃತೆ ಕ್ರಮಗಳ ಪಾಲನೆಯೇ ಸದ್ಯದ ಸ್ಥಿತಿಯಲ್ಲಿ ನಮಗಿರುವ ಪರಿಹಾರ,” ಎಂದು ಡಬ್ಲ್ಯೂಎಚ್ಒ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸುಸ್ ಹೇಳಿದ್ದಾರೆ.
8,000 ವಾಹನ ವಾಪಸ್
ಉತ್ತರಾಖಂಡದ ಮಸೂರಿ ಮತ್ತು ಹಿಮಾಚಲ ಪ್ರದೇಶದ ಮನಾಲಿಗಳಿಂದ ಮಂಗಳವಾರ 8,000 ಪ್ರವಾಸಿ ವಾಹನಗಳನ್ನು ವಾಪಸ್ ಕಳುಹಿಸಲಾಗಿದೆ. ಈ ಗಿರಿಧಾಮಗಳಲ್ಲಿನ ಜನದಟ್ಟಣೆಯ ಚಿತ್ರ ಮತ್ತು ದೃಶ್ಯಗಳು ವೈರಲ್ ಆಗಿದ್ದು, ಸ್ವತಃ ಪ್ರಧಾನಿಯೇ ಸಭೆಗಳಲ್ಲಿ ಈ ಬಗ್ಗೆ ಉಲ್ಲೇಖಿಸಿದ್ದಾರೆ