ಕರ್ನಾಟಕದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ಪತನಕ್ಕೂ ಪೆಗಾಸಸ್ ಸ್ಪೈ ವೇರ್ ಬಳಕೆ? ಈ ನಾಯಕರ ನಂಬರ್ ಟಾರ್ಗೆಟ್?
ಹೈಲೈಟ್ಸ್:
- ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ಪತನಕ್ಕೂ ಪೆಗಾಸಸ್ ಸ್ಪೈ ವೇರ್ ಬಳಕೆ?
- ಹಲವು ನಾಯಕರ ಫೋನ್ ನಂಬರ್ಗಳ ಮೇಲೆ ನಿಗಾ ಇರಿಸಲಾಗಿತ್ತು?
- ಎಚ್.ಡಿ. ಕುಮಾರಸ್ವಾಮಿ , ಸಿದ್ದರಾಮಯ್ಯ ಸೇರಿ ಹಲವರ ಮೇಲೆ ನಿಗಾ?
ಹೊಸದಿಲ್ಲಿ: ಎರಡು ವರ್ಷಗಳ ಹಿಂದೆ ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸದಸ್ಯರೇ ಬಂಡಾಯ ಎದ್ದು ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರಕಾರದ ಪತನಗೊಳಿಸಿದ್ದರಾದರೂ ಅದರ ಹಿಂದೆ ‘ಪೆಗಾಸಸ್ ಪಿತೂರಿ’ ಅಡಗಿತ್ತು ಎನ್ನುವ ಸಂಗತಿ ಈಗ ಚರ್ಚೆಯ ಮುನ್ನೆಲೆಗೆ ಬಂದಿದೆ. ರಾಜ್ಯದಲ್ಲಿ 2019ರ ಜುಲೈ ತಿಂಗಳಲ್ಲಿ ಜೆಡಿಎಸ್-ಕಾಂಗ್ರೆಸ್ ಸರಕಾರ ಪತನಗೊಂಡಿತ್ತು. ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಮಿತ್ರಪಕ್ಷ ಮತ್ತು ಸ್ವಪಕ್ಷದ 17 ಶಾಸಕರು ಬಂಡಾಯ ಸಾರಿ, ಬಿಜೆಪಿ ಜತೆ ಕೈಜೋಡಿಸಿದ್ದರು. ಪರಿಣಾಮವಾಗಿ ಕೆಲವು ವಾರಗಳ ಹೈಡ್ರಾಮ ನಡೆದು ಮೈತ್ರಿ ಸರಕಾರ ಪತನವಾಯಿತು. ಬಳಿಕ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರಕಾರ ರಚಿಸಿತು. ಆದರೆ, ಶಾಸಕರ ಈ ಬಂಡಾಯದ ಆಳದಲ್ಲಿ ಪೆಗಾಸಸ್ ಸ್ಪೈ ವೇರ್ ಕರಾಮತ್ತು ಮಾಡಿದೆ ಎಂದು ಹೇಳಲಾಗುತ್ತಿದೆ. ಅಂದು ಕಾಂಗ್ರೆಸ್-ಜೆಡಿಎಸ್ ಶಾಸಕರು ಹಾಗೂ ಪ್ರಮುಖ ಮುಖಂಡರ ಚಟುವಟಿಕೆಗಳ ಮೇಲೆ ಪೆಗಾಸಸ್ ಮೂಲಕ ನಿಗಾ ಇರಿಸಲಾಗಿತ್ತು ಎಂದು ನ್ಯೂಸ್ ವೆಬ್ಸೈಟ್ವೊಂದು ವರದಿ ಮಾಡಿದೆ.
ಟಾರ್ಗೆಟ್ ಆಗಿದ್ದ ಮುಖಂಡರು!
ಅಂದು ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ಮತ್ತು ಉಪ ಮುಖ್ಯಮಂತ್ರಿಯಾಗಿದ್ದ ಡಾ.ಜಿ.ಪರಮೇಶ್ವರ್ ಅವರ ಆಪ್ತ ಕಾರ್ಯದರ್ಶಿಗಳ ಫೋನ್ ನಂಬರ್ಗಳನ್ನು ಮುಖ್ಯವಾಗಿ ಟಾರ್ಗೆಟ್ ಮಾಡಿಕೊಳ್ಳಲಾಗಿತ್ತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಚಟುವಟಿಕೆ ಮೇಲೂ ಅಂದು ಪೆಗಾಸಸ್ ಸ್ಪೈ ವೇರ್ ಬಳಸಿ ನಿಗಾ ಇರಿಸಲಾಗಿತ್ತು. ಇವರ ಚರ್ಚೆ ಮತ್ತು ಚಟುವಟಿಕೆಯ ನಿಖರ ಮಾಹಿತಿ ಪಡೆದೇ ಎದುರಾಳಿ ಬಣ ಸುಲಭದ ಪ್ರತಿತಂತ್ರ ರೂಪಿಸಿತ್ತು. ಕುಮಾರಸ್ವಾಮಿ ಅವರ ಆಪ್ತ ಕಾರ್ಯದರ್ಶಿ ಸತೀಶ್ ಮತ್ತು ಸಿದ್ದರಾಮಯ್ಯ ಅವರ ಆಪ್ತ ಕಾರ್ಯದರ್ಶಿ ವೆಂಕಟೇಶ್ ಅವರ ಫೋನ್ ನಂಬರ್ಗಳು ಕೂಡ ಪೆಗಾಸಸ್ ಪಿತೂರಿಗೆ ಒಳಪಟ್ಟಿದ್ದವು ಎಂದು ವೆಬ್ಸೈಟ್ ತಿಳಿಸಿದೆ. ಆದರೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರಕಾರದ ವಿರುದ್ಧ ಪೆಗಾಸಸ್ ಮೂಲಕ ಸಂಚು ರೂಪಿಸಲಾಗಿತ್ತು ಎನ್ನುವುದಕ್ಕೆ ನಿರ್ದಿಷ್ಟ ದಾಖಲೆಗಳು ಇದುವರೆಗೆ ಲಭ್ಯವಾಗಿಲ್ಲ.
ಸಂಸತ್ ಕಲಾಪಕ್ಕೆ ಅಡ್ಡಿ
ಪೆಗಾಸಸ್ ಕದ್ದಾಲಿಕೆ ವಿವಾದಕ್ಕೆ ಮಂಗಳವಾರದ ಸಂಸತ್ ಕಲಾಪವೂ ಬಲಿಯಾಯಿತು. ಬೆಳಗ್ಗೆ ಲೋಕಸಭೆ ಕಲಾಪ ಆರಂಭಗೊಳ್ಳುತ್ತಿದ್ದಂತೆಯೇ ಪ್ರತಿಪಕ್ಷಗಳು ಪೆಗಾಸಸ್ ವಿಷಯ ಪ್ರಸ್ತಾಪಿಸಿ, ಸರಕಾರದ ವಿರುದ್ಧ ಘೋಷಣೆ ಕೂಗಲಾರಂಭಿಸಿದರು. ಗದ್ದಲದಿಂದ ಬೇಸತ್ತ ಸ್ಪೀಕರ್ ಓಂ ಬಿರ್ಲಾ, ಹಲವು ಬಾರಿ ಸದನ ಮುಂದೂಡಿದರು. ಶಾಂತಿ ಕಾಯ್ದುಕೊಳ್ಳಲು ಮಾಡಿದ ಮನವಿಗಳಿಗೆ ಪ್ರತಿಪಕ್ಷ ಸದಸ್ಯರು ಕಿವಿಗೊಡದೇ ಹೋದಾಗ ಕಲಾಪವನ್ನು ಈದ್ ನಂತರ ಗುರುವಾರಕ್ಕೆ ಮುಂದೂಡಿಕೆಯಾಯಿತು.
ಅತ್ತ ರಾಜ್ಯಸಭೆಯಲ್ಲೂ ಅದೇ ಕಥೆ ಮರುಕಳಿಸಿತು. ”ಪೆಗಾಸಸ್, ಬಹುದೊಡ್ಡ ಹಗರಣ. ಬೇರೆ ಯಾವುದೇ ಚರ್ಚೆ ಅಗತ್ಯ ಇಲ್ಲ. 267ನೇ ನಿಯಮದಡಿ ಪೆಗಾಸಸ್ ಕುರಿತು ವಿಶೇಷ ಚರ್ಚೆಗೆ ಅವಕಾಶ ನೀಡಿ,” ಎಂದು ಪ್ರತಿಪಕ್ಷ ಸದಸ್ಯರು ಒತ್ತಾಯಿಸಿದರು. ಸಭಾಪತಿಗಳು ಅದಕ್ಕೆ ಕಿವಿಗೋಡದೇ ಹೋದಾಗ, ಗದ್ದಲು ಜೋರಾಗಿ ಕಲಾಪ ಗುರುವಾರಕ್ಕೆ ಮುಂದೂಡಿಕೆಯಾಯಿತು.
ಕದ್ದಾಲಿಕೆಗೆ ಬಳಕೆ ಇಲ್ಲ: ಎನ್ಎಸ್ಒ ಸ್ಪಷ್ಟನೆ
ಭಾರತದಲ್ಲಿ ಬಿರುಗಾಳಿ ಎಬ್ಬಿಸಿರುವ ಇಸ್ರೇಲಿ ನಿರ್ಮಿತ ಪೆಗಾಸಸ್ ‘ಸ್ಪೈ ವೇರ್’ ಬಗ್ಗೆ ಪೆಗಾಸಸ್ ಸ್ಪೈವೇರ್ ತಯಾರಕ ಇಸ್ರೇಲಿನ ಸಾಫ್ಟ್ವೇರ್ ಕಂಪನಿ ಎನ್ಎಸ್ಒ ಸ್ಪಷ್ಟನೆ ನೀಡಿದೆ. ”ಭಾರತ ಸರಕಾರಕ್ಕೆ ನಾವು ಆ ಗೂಢಚಾರಿಕೆ ಸಾಫ್ಟ್ವೇರ್ ಅನ್ನು ಮಾರಾಟ ಮಾಡಿರುವುದು ನಿಜ. ಆದರೆ, ಇಂಥವರ ವಿರುದ್ಧವೇ ಅದನ್ನು ಬಳಕೆ ಮಾಡಬೇಕು ಎಂದು ನಾವು ನಿರ್ದೇಶನ ನೀಡಿಲ್ಲ. ಆ ರೀತಿ ನಾವು ಮಾಡುವುದೂ ಇಲ್ಲ. ಈಗ ಪೆಗಾಸಸ್ ಸ್ಪೈಗೆ ಒಳಪಟ್ಟಿವೆ ಎನ್ನಲಾಗುತ್ತಿರುವ ಭಾರತೀಯರ ಫೋನ್ ನಂಬರ್ಗಳ ಬಗ್ಗೆ ನಮಗೆ ಯಾವುದೇ ಖಚಿತ ಮಾಹಿತಿ ಇಲ್ಲ. ಅವರ ಫೋನ್ ಕದ್ದಾಲಿಕೆ ಮಾಡಲು ಬಳಸಿರುವ ಸಾಫ್ಟ್ವೇರ್ ನಮ್ಮದಲ್ಲ,” ಎಂದು ಎನ್ಎಸ್ಒ ತಿಳಿಸಿದೆ.
ಪೆಗಾಸಸ್ ಸ್ಪೈಗೆ ಒಳಪಟ್ಟಿವೆ ಎನ್ನಲಾದ ಜಗತ್ತಿನ 50 ಸಾವಿರ ಪ್ರಮುಖರ ಫೋನ್ ನಂಬರ್ಗಳ ವಿವರವನ್ನು ಪ್ಯಾರಿಸ್ ಮೂಲದ ಎನ್ಜಿಒವೊಂದು ಪಟ್ಟಿ ಮಾಡಿದೆ. ”ಅದು ಎನ್ಎಸ್ಒ ಲಿಸ್ಟ್ ಅಲ್ಲ. ಆ ರೀತಿ ನಾವು ಮಾಡುವುದಿಲ್ಲ. ಇದು ದುರುದ್ದೇಶದಿಂದ ಸಿದ್ಧಪಡಿಸಿದ ಪಟ್ಟಿ. ನಮ್ಮ ಗ್ರಾಹಕರ ಬಳಿಕ ಅಂತಹ ಸಂಚಿನ ಯಾವುದೇ ಲಿಸ್ಟ್ ಇರುವುದಿಲ್ಲ. ಭಾರತದಲ್ಲಿ ಎದ್ದಿರುವ ವಿವಾದಕ್ಕೂ ನಮ್ಮ ಸಾಫ್ಟ್ವೇರ್ಗೂ ಯಾವುದೇ ಸಂಬಂಧ ಇಲ್ಲ. ಅಂತಹ ದುರುದ್ದೇಶಕ್ಕೆ ಪೆಗಾಸಸ್ ಬಳಕೆಯಾಗುವುದಿಲ್ಲ. ಹಿಂದೆ ಆಗಿಯೂ ಇಲ್ಲ,” ಎಂದು ಎನ್ಸ್ಒ ವಕ್ತಾರರು ತಿಳಿಸಿದ್ದಾರೆ.