ಬಿಎಸ್ವೈಗೆ ಮಠ ಮಾನ್ಯಗಳಿಂದ ಬೆಂಬಲ: ನಾಯಕತ್ವ ಬದಲಾವಣೆಯಿಂದ ಹಿಂದೆ ಸರಿದ ಬಿಜೆಪಿ ಹೈಕಮಾಂಡ್?
ಹೈಲೈಟ್ಸ್:
- ಬಿಜೆಪಿಯಲ್ಲಿ ಮುಂದುವರಿದ ನಾಯಕತ್ವ ಬದಲಾವಣೆ ಗೊಂದಲ
- ಮಠ ಮಾನ್ಯಗಳಿಂದ ಸಿಗುವ ಬೆಂಬಲ ನೋಡಿ ಹೈಕಮಾಂಡ್ ಸೈಲೆಂಟ್
- ನಳೀನ್ ಕುಮಾರ್ ಕಟೀಲ್ ಆಡಿಯೋ ಬಳಿಕ ಜೋರಾದ ಬದಲಾವಣೆ ಗಾಳಿ
ಶಶಿಧರ ಹೆಗಡೆ ಬೆಂಗಳೂರು
ಮಠ ಮಾನ್ಯಗಳಿಂದ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿರುವುದು ಬಿಜೆಪಿ ಹೈಕಮಾಂಡ್ನ ಹಾದಿಯನ್ನು ಕಠಿಣಗೊಳಿಸಿದೆ. ಏಕಾಏಕಿ ನಾಯಕತ್ವ ಬದಲಾವಣೆಗೆ ಕೈಹಾಕಿದರೆ ಭವಿಷ್ಯದಲ್ಲಿ ದುಬಾರಿ ಬೆಲೆ ತೆತ್ತಬೇಕಾಗಿ ಬರಬಹುದು ಎಂಬ ಸ್ಪಷ್ಟ ಸಂದೇಶ ಇದರಿಂದ ರವಾನೆಯಾಗಿದೆ. ಹಾಗಾಗಿ ನಾಯಕತ್ವ ಬದಲಾವಣೆ ಸಂಬಂಧದಲ್ಲಿ ಬಿಜೆಪಿ ವರಿಷ್ಠರು ಒಂದು ಹೆಜ್ಜೆ ಹಿಂದೆ ಸರಿಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಅದಲ್ಲದಿದ್ದರೂ ಬಿಎಸ್ವೈ ಪದಚ್ಯುತಿ ಸುಲಭವಲ್ಲ ಎನ್ನುವುದು ಸದ್ಯದ ವಿದ್ಯಮಾನದಿಂದ ಸ್ಪಷ್ಟವಾಗಿದೆ. ಸಿಎಂ ಬಿಎಸ್ವೈ ದಿಲ್ಲಿಯಿಂದ ವಾಪಸಾದ ಬಳಿಕ ಬಿಜೆಪಿ ವಲಯದಲ್ಲಿ ನೀರವ ಮೌನ ಆವರಿಸಿತ್ತು. ನಳೀನ್ ಕುಮಾರ್ ಕಟೀಲ್ ಅವರಿಗೆ ಸೇರಿದ್ದೆನ್ನಲಾದ ಆಡಿಯೋ ಬಯಲಾಗುವುದರೊಂದಿಗೆ ಬಿಜೆಪಿ ಬೆಳವಣಿಗೆಗೆ ಬಿರುಸು ಸಿಕ್ಕಿತು.
ಇದರ ಬೆನ್ನಿಗೇ ಮಠಾಧಿಪತಿಗಳು ಬಿಎಸ್ವೈ ಪರ ಮಾತನಾಡಲು ಪ್ರಾರಂಭಿಸಿದರು. ಮೊದ ಮೊದಲು ಲಿಂಗಾಯತ ಸಮಾಜದ ಸ್ವಾಮೀಜಿಗಳು ಮಾತ್ರ ಬಿಎಸ್ವೈ ಬೆನ್ನಿಗೆ ನಿಲ್ಲುತ್ತಿದ್ದಾರೆ ಎನ್ನಿಸಿದ್ದು ನಿಜ. ಆದರೆ, ನಂತರದಲ್ಲಿ ಲಿಂಗಾಯತೇತರ ಸಮಾಜದ ಪೇಜಾವರ ಸ್ವಾಮೀಜಿ, ಮಾದಾರ ಚೆನ್ನಯ್ಯ ಸ್ವಾಮೀಜಿ ಅವರೂ ಬೆಂಬಲಿಸಿದ್ದಾರೆ. ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದ್ದ ಸ್ವಾಮೀಜಿಗಳಲ್ಲೂ ಬೇರೆ ಸಮುದಾಯದವರು ಇದ್ದರು ಎಂಬ ಮಾಹಿತಿಯಿದೆ. ಇದು ಜಾತಿಯ ಚೌಕಟ್ಟಿನಿಂದಾಚೆಗೂ ಯಡಿಯೂರಪ್ಪ ಅವರಿಗೆ ಮನ್ನಣೆ ದೊರಕುತ್ತಿರುವುದರ ಸೂಚನೆಯಾಗಿದೆ. ಇದನ್ನು ಬಿಜೆಪಿ ಹೈಕಮಾಂಡ್ ಹಗುರವಾಗಿ ಪರಿಗಣಿಸುತ್ತದೆ ಎನ್ನಲಾಗದು.
ಧ್ರುವೀಕರಣದ ಸುಳಿವು!
ಕಳೆದೆರಡು ದಶಕದ ಅವಧಿಯಲ್ಲಿ ಬಿಎಸ್ವೈ ಪರ ಲಿಂಗಾಯತ ಸಮಾಜ ಅಚಲವಾಗಿ ನಿಂತಿದೆ ಎಂಬುದರಲ್ಲಿಅನುಮಾನವೇ ಬೇಡ. ಈ ನಡುವೆಯೂ ಲಿಂಗಾಯತರ ಒಳಪಂಗಡಗಳಿಗೆ ಮೀಸಲು ಬೇಡಿಕೆ ವಿಚಾರದಲ್ಲಿ ವೋಟ್ಬ್ಯಾಂಕ್ಗೆ ಧಕ್ಕೆಯಾಗುವ ಆತಂಕ ಬಂದಿತು. ಪಂಚಮಸಾಲಿ ಸಮಾಜದ ಹೋರಾಟ ಪ್ರಖರವಾಗಿ ನಡೆದಿತ್ತು. ಈ ಎಲ್ಲ ಸಂದರ್ಭದಲ್ಲಿ ಯಡಿಯೂರಪ್ಪ ಹೊರತುಪಡಿಸಿ ಬೇರೆ ನಾಯಕರನ್ನು ಬೆಳೆಸಲು ಲಿಂಗಾಯತ ಸಮುದಾಯ ಎದುರು ನೋಡುತ್ತಿದೆ ಎಂಬ ಮಾತುಗಳು ಕೇಳಿ ಬಂದಿದ್ದವು.
ಆದರೆ, ಯಡಿಯೂರಪ್ಪ ಅವರನ್ನು ಬದಲಿಸಲು ಬಿಜೆಪಿ ವರಿಷ್ಠರು ತುಳಿದಿರುವ ದಾರಿಯಿಂದಾಗಿ ಲಿಂಗಾಯತ ಅಸ್ಮಿತೆಯನ್ನು ಎಚ್ಚರಿಸಿದಂತಾಗಿದೆ. ಸಹಜವಾಗಿ ಈ ಸನ್ನಿವೇಶದಲ್ಲಿ ಅಧಿಕಾರದಲ್ಲಿರುವ ಯಡಿಯೂರಪ್ಪ ಅವರ ಪರ ಇಡೀ ಸಮುದಾಯ ನಿಲ್ಲುವ ವಾತಾವರಣವನ್ನು ಇದು ನಿರ್ಮಿಸುತ್ತಿದೆ. ಹೀಗೆ ಲಿಂಗಾಯತರ ಧ್ರುವೀಕರಣಕ್ಕೆ ಬಿಜೆಪಿ ವರಿಷ್ಠರೇ ಅವಕಾಶ ಮಾಡಿಕೊಟ್ಟಂತಾಗಿದೆ. ಹಾಗಾಗಿ ನಾಯಕತ್ವ ಬದಲಾವಣೆ ಸವಾಲಾಗಿ ಪರಿಣಮಿಸಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಪ್ರಬಲರಾಗಲು ಅವಕಾಶ
ರಾಜ್ಯ ಬಿಜೆಪಿಯಲ್ಲಿ ಯಾವತ್ತೂ ಹಿಡಿತ ಹೊಂದಿದ್ದ ಯಡಿಯೂರಪ್ಪ ಅವರಿಗೆ ಈ ಬಾರಿ ಹೈಕಮಾಂಡ್ ನಿಯಂತ್ರಣ ಹಾಕಲು ನೋಡಿತ್ತು. ಇದರಲ್ಲಿ ಯಶಸ್ವಿಯಾಗದಿದ್ದರೂ ಬಿಎಸ್ವೈ ಮೇಲೆ ಒತ್ತಡ ತರಲು ವರಿಷ್ಠರು ಸಫಲರಾಗಿದ್ದಾರೆ. ಈ ಹಿಂದೆ ಸಿಎಂ ಆಗಿದ್ದಾಗ ನಿಗಮ ಮಂಡಳಿ ಇನ್ನಿತರ ನೇಮಕ ವಿಚಾರದಲ್ಲಿ ಬಿಎಸ್ವೈ ಸಂಪೂರ್ಣ ಸ್ವಾತಂತ್ರ್ಯ ಹೊಂದಿದ್ದರು. ಈ ಸಲ ಸಣ್ಣಪುಟ್ಟ ನೇಮಕಕ್ಕೂ ಹೈಕಮಾಂಡ್ ಇಶಾರೆಗೆ ಕಾಯುವಂತೆ ಮಾಡಲಾಗಿತ್ತು. ಬಿಎಸ್ವೈ ಅವರೂ ಇದಕ್ಕೆ ಹೊಂದಿಕೊಂಡು ಹೋಗಿದ್ದರು. ಆದರೆ, ಹಾಲಿ ಅಗ್ನಿ ಪರೀಕ್ಷೆಯಲ್ಲಿ ಬಿಎಸ್ವೈ ಗೆದ್ದರೆ ಮುಂದೆ ಅವರ ಆಡಳಿತದ ವೈಖರಿಯೇ ಬದಲಾಗಬಹುದು. ಕಾಪು ಸಿದ್ಧಲಿಂಗಸ್ವಾಮಿ ನೇಮಕದಲ್ಲಿ ಇದೇ ಸುಳಿವಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.