ಬಿಜೆಪಿಯದ್ದು ತಾಲಿಬಾನ್ ಮಾದರಿ ಆಡಳಿತ: ಶೆಟ್ಟರ್ ಹೇಳಿದ್ದಿಷ್ಟು
ಹುಬ್ಬಳ್ಳಿ(ಸೆ. 29): ಬಿಜೆಪಿಯದ್ದು ತಾಲಿಬಾನ್(Taliban) ಆಡಳಿತ ಎಂಬ ಸಿದ್ದರಾಮಯ್ಯ(Siddaramaiah) ಹೇಳಿಕೆ ಅತ್ಯಂತ ಬೇಜವಾಬ್ದಾರಿಯ ಕೀಳು ಮಟ್ಟದ್ದು ಎಂದು ಮಾಜಿ ಮುಖ್ಯಮಂತ್ರಿ, ಶಾಸಕ ಜಗದೀಶ್ ಶೆಟ್ಟರ್(Jagadish Shettar) ಖಂಡಿಸಿದ್ದಾರೆ.
ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿ, ಅಷ್ಘಾನಿಸ್ತಾನದಿಂದ(Afghanistan) ಬಂದವರು ಭಾರತ ನೋಡಿ ಸ್ವರ್ಗಕ್ಕೆ ಬಂದಂತಾಗಿದೆ ಎಂದಿದ್ದಾರೆ. ಇದೇ ಸಿದ್ದರಾಮಯ್ಯ ಹೇಳಿಕೆಗೆ ಪ್ರತ್ಯುತ್ತರ ಎಂದರು. ಐದು ವರ್ಷ ಸಿಎಂ ಆಗಿದ್ದರೂ ಸಿದ್ದರಾಮಯ್ಯ ತಾವು ಅಧಿಕಾರದಲ್ಲಿದ್ದ ವೇಳೆ ನಡೆಸಿದ ಜಾತಿಗಣತಿ(Caste Census) ವರದಿಯನ್ನು ಯಾಕಾಗಿ ಬಿಡುಗಡೆ ಮಾಡಿಲ್ಲ? ಈ ಬಾರಿ ಕಲಾಪದಲ್ಲಿ ಅವರು ಈ ವಿಚಾರ ಚರ್ಚೆ ಮಾಡುತ್ತೇನೆ ಎಂದಿದ್ದಕ್ಕೆ ಕಾಂಗ್ರೆಸ್ನಲ್ಲೆ(Congress) ವಿರೋಧ ವ್ಯಕ್ತವಾಯಿತು. ಒಂದು ವೇಳೆ ಸದನದಲ್ಲಿ ವಿಚಾರ ಎತ್ತಿದ್ದರೆ ನಾನು ಅವರು ಮಾಡಿದ ತಪ್ಪುಗಳ ಬಗ್ಗೆ ಮಾತನಾಡುತ್ತಿದ್ದೆ. ಶೀಘ್ರವಾಗಿ ಈ ಕುರಿತು ಸುದ್ದಿಗೋಷ್ಠಿ ನಡೆಸಿ ನನ್ನ ವಿಚಾರಗಳನ್ನು ಹೇಳುತ್ತೇನೆ ಎಂದರು.
ಹಾನಗಲ್ಲ, ಸಿಂದಗಿ ವಿಧಾನಸಭಾ ಉಪಚುನಾವಣೆಯಲ್ಲಿ ನಾವು ಸೂಕ್ತ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ. ದಾವಣಗೆರೆ ಕಾರ್ಯಕಾರಿಣಿ ಸಭೆಯಲ್ಲಿ ಉಪಚುನಾವಣೆ ತಂತ್ರಗಾರಿಕೆ ಸೇರಿ ವಿಸ್ತೃತ ಚರ್ಚೆ ಆಗಿದೆ. ಸಾಮೂಹಿಕ ನಾಯಕತ್ವದಲ್ಲಿ ಉಪಚುನಾವಣೆಯನ್ನು ಎದುರಿಸುತ್ತೇವೆ ಎಂದರು.
ವಿಧಾನ ಪರಿಷತ್ ಚುನಾವಣೆ ಸ್ಥಳೀಯ ಸಂಸ್ಥೆಗೆ ಸಂಬಂಧಿಸಿ ಅಖಂಡ ಧಾರವಾಡ(Dharwad) ಜಿಲ್ಲೆಯಲ್ಲಿ ಎರಡು ಸ್ಥಾನ ಇದೆ. ಈ ಹಿಂದೆಯೂ ಕಾಂಗ್ರೆಸ್ ಹಾಗೂ ಬಿಜೆಪಿ(BJP) ಒಂದೊಂದು ಸ್ಥಾನಕ್ಕೆ ಮಾತ್ರ ಸ್ಪರ್ಧೆ ಮಾಡಲಾಗುತ್ತಿವೆ. ಈ ಬಾರಿಯೂ ಅದನ್ನು ಮುಂದುವರಿಸುವ ಕುರಿತು ಪಕ್ಷದ ಹಂತದಲ್ಲಿ ಚರ್ಚೆ ಆಗಲಿದೆ ಎಂದರು.
ಸಿಎಂ ಜತೆ ಅಂತರ ಮಾಧ್ಯಮ ಸೃಷ್ಟಿ: ಶೆಟ್ಟರ್
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಜತೆಗೆ ಅಂತರ ಕಾಪಾಡಿಕೊಂಡೆ ಎನ್ನುವುದು ಮಾಧ್ಯಮ ಸೃಷ್ಟಿ. ಬೆಳಗಾವಿಯಲ್ಲಿ ಸುರೇಶ ಅಂಗಡಿ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಧಾರವಾಡದಲ್ಲಿ ಕೆಡಿಪಿ ಸಭೆ ಇದ್ದ ಕಾರಣ ಸೋಮವಾರ ಬಿವಿಬಿ, ಪೊಲೀಸ್ ಇಲಾಖೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ ಎಂದು ಶೆಟ್ಟರ್ ಪ್ರತಿಕ್ರಿಯಿಸಿದರು.