ಶಂಕರ್ ನಾಗ್ ಪುಣ್ಯಸ್ಮರಣೆ: 31 ವರ್ಷ ಕಳೆದರೂ ಅಭಿಮಾನಿಗಳ ಎದೆಯಲ್ಲಿ ‘ಆಟೋ ರಾಜ’ ಅಮರ
ಭಾರತೀಯ ಚಿತ್ರರಂಗದಲ್ಲಿ ಶಂಕರ್ ನಾಗ್ ಮಾಡಿದ ಸಾಧನೆ ಅಪಾರ. ಚಿಕ್ಕ ವಯಸ್ಸಿನಲ್ಲಿಯೇ ಅವರು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಗಳಿಸಿದ್ದರು. ಬದುಕಿದ್ದದ್ದು ಕೇವಲ 35 ವರ್ಷವಾದರೂ ಅವರು ಮಾಡಿದ ಕೆಲಸಗಳು ಸಾವಿರಾರು ವರ್ಷ ನೆನಪಿನಲ್ಲಿ ಉಳಿಯುವಂಥವು. ಶಂಕರ್ ನಾಗ್ ನಿಧನರಾಗಿ ಇಂದಿಗೆ (ಸೆ.30) 31 ವರ್ಷ ಕಳೆದಿದೆ. ಅವರ ಪುಣ್ಯಸ್ಮರಣೆ ಪ್ರಯುಕ್ತ ಹಲವಾರು ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ನಮನ ಸಲ್ಲಿಸುತ್ತಿದ್ದಾರೆ. ಶಂಕರ್ನಾಗ್ ಅವರ ಸಿನಿಮಾಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ.
ಅದು 1990ರ ಸಮಯ. ‘ಜೋಕುಮಾರಸ್ವಾಮಿ’ ಆ ಕಾಲಕ್ಕೆ ಭಾರಿ ಯಶಸ್ಸು ಕಂಡ ನಾಟಕ. ಈ ನಾಟಕವನ್ನು ಸಿನಿಮಾ ಮಾಡಬೇಕು ಎನ್ನುವ ಕನಸು ಶಂಕರ್ ನಾಗ್ ಅವರದ್ದಾಗಿತ್ತು. ಆ ಸಲುವಾಗಿ ಬಾಗಲಕೋಟೆಯ ಮುಧೋಳ ತಾಲ್ಲೂಕಿನ ಲೋಕಾಪುರಕ್ಕೆ ಹೋಗಬೇಕಿತ್ತು. 1990ರಂದು ಸೆ.30ರಂದು ಶಂಕರ್ ನಾಗ್ ತಮ್ಮ ಪತ್ನಿ ಅರುಂಧತಿ ನಾಗ್ ಮತ್ತು ಮಗಳು ಕಾವ್ಯಾ ಜೊತೆ ಬೆಂಗಳೂರಿನಿಂದ ಹೊರಟಿದ್ದರು. ಆದರೆ, ದಾವಣಗೆರೆಯ ಅನಗೋಡು ಬಳಿ ಲಾರಿಗೆ ಶಂಕರ್ ನಾಗ್ ಕಾರು ಡಿಕ್ಕಿಯಾಗಿತ್ತು. ಘಟನೆಯಲ್ಲಿ ಶಂಕರ್ ನಾಗ್ ಮತ್ತು ಕಾರು ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಶಂಕರ್ ನಾಗ್ ನಿಧನದ ಸುದ್ದಿ ಕೇಳಿ ಅವರ ಅಭಿಮಾನಿಗಳಿಗೆ ಸಿಡಿಲು ಬಡಿದಂತಾಗಿತ್ತು. ಸಿನಿಮಾ ಮಾತ್ರವಲ್ಲದೇ ಅನೇಕ ಕ್ಷೇತ್ರದಲ್ಲಿ ಶಂಕರ್ ನಾಗ್ ಆಸಕ್ತಿ ಹೊಂದಿದ್ದರು. ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಬೇಕು ಎಂದು ಅವರು ಕನಸು ಕಂಡಿದ್ದರು. ಅದಕ್ಕಾಗಿ ಸದಾ ಕಾಲ ಅವರು ಆಲೋಚನೆ ಮಾಡುತ್ತಲೇ ಇರುತ್ತಿದ್ದರು. ಪಾದರಸದಂತೆ ಕೆಲಸ ಮಾಡುವ ಅವರ ಗುಣವನ್ನು ಕೊಂಡಾಡದವರೇ ಇಲ್ಲ. ಅಂಥ ನಟ ಅಪಘಾತದಲ್ಲಿ ಸಾವಿಗೀಡಾಗಿದ್ದು ತೀವ್ರ ನೋವಿನ ಸಂಗತಿ.
ರಾಜಕಾರಣಿಗಳಾದ ಕೆ. ಸುಧಾರಕ್, ಮುರುಗೇಶ್ ನಿರಾಣಿ, ಬಿ.ವೈ. ರಾಘವೇಂದ್ರ ಮುಂತಾದವರು ಶಂಕರ್ ನಾಗ್ ಪುಣ್ಯ ಸ್ಮರಣೆ ಪ್ರಯುಕ್ತ ಟ್ವೀಟ್ ಮಾಡಿದ್ದಾರೆ.
‘ಕನ್ನಡ ಚಿತ್ರರಂಗದ ಅಪ್ರತಿಮ ಪ್ರತಿಭಾವಂತ ನಟ, ನಿರ್ದೇಶಕ, ನಿರ್ಮಾಪಕ ಶಂಕರ್ ನಾಗ್ ಅವರ ಪುಣ್ಯತಿಥಿಯಂದು ಅವರನ್ನು ಸ್ಮರಿಸೋಣ. ತಮ್ಮ ಅದ್ವಿತೀಯ ಸೃಜನಶೀಲತೆ ಹಾಗೂ ಕಲ್ಪನಾಶಕ್ತಿ ಮೂಲಕ ಅತ್ಯಲ್ಪ ಕಾಲದಲ್ಲೇ ವಿಶಿಷ್ಟ ಛಾಪು ಮೂಡಿಸಿದ್ದ ಶಂಕರ್ ನಾಗ್ ಅವರು ಕನ್ನಡ ಕಲಾಪ್ರೇಮಿಗಳ ಹೃದಯದಲ್ಲಿ ಎಂದೂ ಮರೆಯಲಾಗದ ಅಪರೂಪದ ಮಾಣಿಕ್ಯವಾಗಿದ್ದಾರೆ’ ಎಂದು ಸುಧಾಕರ್ ನುಡಿ ನಮನ ಸಲ್ಲಿಸಿದ್ದಾರೆ