ಕನ್ನಡದಲ್ಲಿ ಪರೀಕ್ಷೆಗಾಗಿ ಕರವೇ ಟ್ವಿಟರ್ ಅಭಿಯಾನ: ನಾರಾಯಣ ಗೌಡ
* ಯುಪಿಎಸ್ಸಿ ಪರೀಕ್ಷೆ ನಡೆಯುವ ಅ.10ರಂದೇ ಅಭಿಯಾನಕ್ಕೆ ನಾರಾಯಣ ಗೌಡ ಕರೆ
* ಕರ್ನಾಟಕದಲ್ಲಿ ಉದ್ಯೋಗ ಪಡೆಯುವುದು ಕನ್ನಡಿಗರ ಮೂಲಭೂತ ಹಕ್ಕು
* ಕನ್ನಡಿಗರನ್ನು ಎರಡನೇ ದರ್ಜೆ ಪ್ರಜೆಗಳಂತೆ ನೋಡಲಾಗುತ್ತಿದೆ
ಬೆಂಗಳೂರು(ಅ.08): ಯುಪಿಎಸ್ಸಿ(UPSC) ಸೇರಿದಂತೆ ಭಾರತ ಸರ್ಕಾರದ ಎಲ್ಲ ಹಂತದ ಉದ್ಯೋಗ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡಬೇಕು ಎಂದು ಆಗ್ರಹಿಸಿ ಆ.10 ರಂದು ಕರ್ನಾಟಕ ರಕ್ಷಣಾ ವೇದಿಕೆ ಟ್ವಿಟರ್ ಅಭಿಯಾನ ಹಮ್ಮಿಕೊಂಡಿದೆ.
ಅ.10 ರಂದು ಯುಪಿಎಸ್ಸಿ ಪರೀಕ್ಷೆ ನಡೆಯುತ್ತಿದ್ದು ಈ ಬಾರಿಯೂ ಕನ್ನಡಿಗರಿಗೆ ಕನ್ನಡದಲ್ಲಿ(Kannada) ಪರೀಕ್ಷೆಗಳನ್ನು ಬರೆಯುವ ಅವಕಾಶ ನೀಡದೆ ಕನ್ನಡಿಗರನ್ನು ಎರಡನೇ ದರ್ಜೆ ಪ್ರಜೆಗಳಂತೆ ನೋಡಲಾಗುತ್ತಿದೆ. ಇದನ್ನು ಖಂಡಿಸಿ ಕನ್ನಡದಲ್ಲಿ UPSC ಮತ್ತು #UPSCInKannada ಎಂಬ ಹ್ಯಾಶ್ ಟ್ಯಾಗ್ನೊಂದಿಗೆ ಬೆಳಗ್ಗೆ 10.10ರಿಂದ ಅಭಿಯಾನ ನಡೆಯಲಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ(Narayana Gowda) ಹೇಳಿದ್ದಾರೆ.
ಕರ್ನಾಟಕದ(Karnataka) ಉದ್ಯೋಗಗಳು(Jobs) ಕನ್ನಡಿಗರಿಗೇ ಸಿಗಬೇಕು. ಇದು ಸಾಧ್ಯವಾಗಲು ಐಎಎಸ್, ಐಪಿಎಸ್ ಸೇರಿದಂತೆ ಎಲ್ಲ ಪರೀಕ್ಷೆಗಳು ಕನ್ನಡದಲ್ಲೂ ನಡೆಯಬೇಕು. ಆದರೆ ಎಲ್ಲ ಹಂತಗಳಲ್ಲೂ ಕನ್ನಡದಲ್ಲಿ ಪರೀಕ್ಷೆಗಳು ಸಿಗುತ್ತಿಲ್ಲ. ಆಯಾ ರಾಜ್ಯದ ಹುದ್ದೆಗಳು ಆಯಾ ರಾಜ್ಯದ ಜನರಿಗೆ ಸಿಗಲು ಬೇಕಾದ ನಿಯಮಗಳೂ ಇಲ್ಲವಾಗುತ್ತಿವೆ. ಇದು ನೇರವಾಗಿ ಕನ್ನಡಿಗರ ಬದುಕುವ ಹಕ್ಕಿನ ದಮನವಾಗಿರುತ್ತದೆ. ಭಾರತ ಸಂವಿಧಾನದ ಸಮಾನತೆಯ ಆಶಯಗಳಿಗೆ ಧಕ್ಕೆ ಬಂದಂತಾಗಿದೆ ಎಂದು ನಾರಾಯಣಗೌಡ ಆತಂಕ ವ್ಯಕ್ತಪಡಿಸಿದ್ದಾರೆ.
ಟ್ವಿಟರ್(Twitter) ಅಭಿಯಾನದ ಜೊತೆಗೆ ವಿಚಾರಸಂಕಿರಣ, ಚಿತ್ರಚಳುವಳಿ, ಪತ್ರ ಚಳವಳಿಗಳನ್ನೂ ಹಮ್ಮಿಕೊಳ್ಳಲಿದ್ದೇವೆ. ಕರ್ನಾಟಕದಲ್ಲಿ ಉದ್ಯೋಗ ಪಡೆಯುವುದು ಕನ್ನಡಿಗರ(Kannadigas) ಮೂಲಭೂತ ಹಕ್ಕು. ಅದನ್ನು ಕಿತ್ತುಕೊಳ್ಳುವುದು ಅನೈತಿಕ. ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯಗಳನ್ನು ಖಂಡಿಸುವವರು ಈ ಚಳವಳಿಯಲ್ಲಿ ಪಾಲ್ಗೊಳ್ಳಬೇಕು ಎಂದು ನಾರಾಯಣ ಗೌಡ ಮನವಿ ಮಾಡಿದ್ದಾರೆ.