ಕಲಬುರಗಿಯಲ್ಲಿ ಮತ್ತೊಂದು ಕೊಲೆ: ತಂಗಿಯನ್ನು ಪ್ರೀತಿಸಿದ್ದಕ್ಕೆ ಸ್ನೇಹಿತನಿಂದಲೇ ಯುವಕನ ಹತ್ಯೆ?

ಕಲಬುರಗಿ ಹೊರವಲಯದ ಕಾಳನೂರ್ ಧಾಬಾ ಬಳಿ ಬುಧವಾರ ರಾತ್ರಿ ಯುವಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ತನ್ನ ಸಹೋದರಿಯನ್ನು ಪ್ರೀತಿಸಿದ್ದಕ್ಕೆ ಯುವಕನ ಸ್ನೇಹಿತನಿಂದಲೇ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಕಲಬುರಗಿ: ನಿನ್ನೆಯಷ್ಟೇ ಪುಡಾರಿ ರೌಡಿ ಗ್ಯಾಂಗ್​ವೊಂದು ಮನೆಗೆ ನುಗ್ಗಿ ​ಯುವಕನ ಕೊಲೆ ನಡೆಸಿರುವ ಪ್ರಕರಣ ಮಾಸುವ ಮುನ್ನವೇ ನಗರದಲ್ಲಿ ಮತ್ತೋರ್ವ ಯುವಕನನ್ನು ಹತ್ಯೆ ಮಾಡಲಾಗಿದೆ. ಕಲಬುರಗಿ ಹೊರವಲಯದ ಕಾಳನೂರ್ ಧಾಬಾ ಬಳಿ ಬುಧವಾರ ರಾತ್ರಿ ಯುವಕನಿಗೆ ಚಾಕುವಿನಿಂದ ಇರಿದು ಕೊಲೆಗೈಯ್ಯಲಾಗಿದೆ.

ಇಲ್ಲಿನ ಫಿಲ್ಟರ್ ಬೆಡ್ ನಿವಾಸಿ ಆಕಾಶ್ (21) ಕೊಲೆಯಾದ ಯುವಕ. ಆಕಾಶ್ ಓಂನಗರದ ಗ್ಯಾರೆಜ್​ವೊಂದರಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ. ಈತನ ಸ್ನೇಹಿತ ಶ್ರೀನಿಧಿ ಎಂಬಾತನೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಪ್ರೀತಿಯೇ ಕಾರಣ?:

ಕೊಲೆಯಾದ ಯುವಕ ಆಕಾಶ್ ತನ್ನ ಸ್ನೇಹಿತ ಶ್ರೀನಿಧಿಯ ಸಹೋದರಿಯನ್ನು ಪ್ರೀತಿಸುತ್ತಿದ್ದ. ಕಳೆದ ಕೆಲ ದಿನಗಳ ಹಿಂದೆ ಅದೇ ಯುವತಿಯನ್ನು ಕರೆದುಕೊಂಡು ಆಕಾಶ್ ಓಡಿ ಹೋಗಿದ್ದನಂತೆ. ಇದೇ ವಿಚಾರಕ್ಕೆ ಸ್ನೇಹಿತ ಆಕಾಶ್​​ನನ್ನು ಮುಗಿಸಬೇಕೆಂದು ಶ್ರೀನಿಧಿ ಪ್ಲಾನ್ ಮಾಡಿದ್ದ. ಅದರಂತೆ ನಿನ್ನೆ ರಾತ್ರಿ ಆಕಾಶ್​ನನ್ನು ಶ್ರೀನಿಧಿಯೇ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ ಎನ್ನಲಾಗುತ್ತಿದೆ.

ಈ ಬಗ್ಗೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ‌. ಹೀಗೆ ಕಲಬುರಗಿ ನಗರದಲ್ಲಿ ದಿನದಿಂದ ದಿನಕ್ಕೆ ಅಪರಾಧ ಪ್ರಕರಣಗಳು ಏರಿಕೆ ಆಗುತ್ತಿದ್ದು, ಜನರು ನೆಮ್ಮದಿ ಕಳೆದುಕೊಂಡಿದ್ದಾರೆ. ನಿನ್ನೆ ಬೆಳಗ್ಗೆ ಡಬರಾಬಾದ್ ಬಡಾವಣೆಯಲ್ಲಿ ಗ್ಯಾಂಗ್‌ವೊಂದು ಮನೆಯೊಂದಕ್ಕೆ ನುಗ್ಗಿ ಮಹೇಶ್​ ಎಂಬ ಯುವಕನ‌ನ್ನು ಹತ್ಯೆ ಮಾಡಿತ್ತು. ಇದೀಗ ರಾತ್ರಿ ಮತ್ತೋರ್ವ ಯುವಕ‌ನ ಕೊಲೆಯಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *