ಕೇದಾರನಾಥ, ಯಮುನೋತ್ರಿ ದೇಗುಲಗಳ ಪ್ರವೇಶದ್ವಾರ ಇಂದು ಬಂದ್​; ಬದರಿನಾಥದ ಬಾಗಿಲು ನ.20ಕ್ಕೆ ಕ್ಲೋಸ್​

ಡೆಹ್ರಾಡೂನ್​: ಇಂದಿನಿಂದ ಚಳಿಗಾಲ ಶುರುವಾದ ಹಿನ್ನೆಲೆಯಲ್ಲಿ ಕೇದಾರನಾಥ ಮತ್ತು ಯಮುನೋತ್ರಿ ದೇವಸ್ಥಾನದ ಮಹಾದ್ವಾರಗಳು ಮುಚ್ಚಲಿದ್ದು, ಮುಂದಿನ ಆರು ತಿಂಗಳು ಮತ್ತೆ ತೆರೆಯುವುದಿಲ್ಲ. ಭಕ್ತರಿಗೆ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ. ಗಂಗೋತ್ರಿ ಬಾಗಿಲು ನಿನ್ನೆಯೇ ಬಂದ್​ ಆಗಿದೆ. ಹಾಗೇ ಬದರೀನಾಥ್​​ ದೇವಸ್ಥಾನದ ಬಾಗಿಲು ನವೆಂಬರ್​ 20ರಂದು ಮುಚ್ಚಲಿದೆ.  

ಈ ನಾಲ್ಕೂ ದೇಗುಲಗಳನ್ನು ಸೇರಿ ಚಾರ್​ಧಾಮ್​ ಎಂದು ಕರೆಯಲಾಗುತ್ತದೆ. ಇದು ಹಿಂದುಗಳ ಪವಿತ್ರ ಯಾತ್ರೆಗಳಲ್ಲಿ ಒಂದು. ಗಂಗೋತ್ರಿ ದೇಗುಲದ ಪ್ರವೇಶದ್ವಾರ ನಿನ್ನೆ ಮುಚ್ಚಿರುವ ಬಗ್ಗೆ ಮಾಹಿತಿ ನೀಡಿರುವ ಗಂಗೋತ್ರಿ ಮಂದಿರ ಸಮಿತಿ ಸಹ ಕಾರ್ಯದರ್ಶಿ ರಾಜೇಶ್​ ಸೆಮ್ವಾಲ್​, ದೇಗುಲದ ಗೇಟ್​ ಬೆಳಗ್ಗೆ 11.45ಕ್ಕೆ ಬಂದ್ ಆಗಿದೆ. ಗಂಗಾ ಮಾತೆಯ ವಿಗ್ರವನ್ನು ಹೂವಿನಿಂದ ಅಲಂಕರಿಸಲ್ಪಟ್ಟ ಪಲ್ಲಕ್ಕಿಯ ಮೇಲೆ ಮುಖ್ಭಾ ಗ್ರಾಮಕ್ಕೆ ಕರೆದೊಯ್ಯಲಾಯಿತು. ಅದು ದೇವಿಯ ಚಳಿಗಾಲದ ವಾಸಸ್ಥಾನವಾಗಿದೆ ಎಂದು ಹೇಳಿದರು.  ಇನ್ನು ಈ ಬಾರಿ ಸೆಪ್ಟೆಂಬರ್​ನಲ್ಲಿ ಬಾಗಿಲು ತೆರೆದಿದ್ದ ಗಂಗೋತ್ರಿಗೆ ಇಲ್ಲಿಯವರೆಗೆ 32,948 ಯಾತ್ರಾರ್ಥಿಗಳು ಭೇಟಿ ನೀಡಿದ್ದಾರೆ. ಇಲ್ಲಿ ಕೇವಲ ಭಾರತದ ಭಕ್ತರಷ್ಟೇ ಅಲ್ಲ, ವಿದೇಶಗಳಿಂದಲೂ ಯಾತ್ರಾರ್ಥಿಗಳು ಆಗಮಿಸುತ್ತಾರೆ. ಆದರೆ ಇವು ಇರುವುದು ಹಿಮಾಲಯದ ಸಮೀಪ ಆಗಿದ್ದರಿಂದ ಚಳಿಗಾಲದಲ್ಲಿ ವಿಪರೀತ ಎನ್ನುವಷ್ಟು ಹಿಮಪಾತ ಇರುತ್ತದೆ. ಹಾಗಾಗಿ ಬಾಗಿಲು ಹಾಕಲ್ಪಡುತ್ತದೆ.

ಇನ್ನುಳಿದಂತೆ ತೃತೀಯ ಕೇದಾರ ಶ್ರೀ ತುಂಗಾನಾಥ ದೇಗುಲ ಅಕ್ಟೋಬರ್​ 30ರಂದು ಮುಚ್ಚಿದೆ. ಹಾಗೇ, ದ್ವಿತೀಯ ಕೇದಾರ ಶ್ರೀ ಮದ್ಮಹೇಶ್ವರ ದೇವಸ್ಥಾನದ ಬಾಗಿಲು ನವೆಂಬರ್​ 22ರಂದು ಮುಚ್ಚಲಿದೆ ಎಂದು ಮಂಡಳಿಯ ಸದಸ್ಯ  ಡಾ. ಹರೀಶ್​ ಗೌರ್​ ತಿಳಿಸಿದ್ದಾರೆ. ಈ ಮಧ್ಯೆ ನಿನ್ನೆಯಷ್ಟೇ ಕೇದಾರನಾಥಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ, ಅಲ್ಲಿ 130 ಕೋಟಿ ರೂ.ಪುನರಾಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *