ಮೈಸೂರು ಕೇಂದ್ರ ಕಾರಾಗೃಹದಲ್ಲಿ ಸಾಕ್ಷರತಾ ಕಾರ್ಯಕ್ರಮ; ಅನಕ್ಷರಸ್ಥ ಕೈದಿಗಳಿಗೆ ಅಕ್ಷರಸ್ಥ ಕೈದಿಗಳೇ ಮೇಷ್ಟ್ರು

ಮೈಸೂರು: ನಾನಾ ಕಾರಣಗಳಿಗಾಗಿ ಜೈಲು ಸೇರಿರುವ ಅನಕ್ಷರಸ್ಥ ಕೈದಿಗಳಿಗೆ ಅಕ್ಷರಾಭ್ಯಾಸ ಕಲಿಸಿ ಬಿಡುಗಡೆ ವೇಳೆಗೆ ಉತ್ತಮ ನಾಗರಿಕರನ್ನಾಗಿ ಮಾಡಲು ರಾಜ್ಯ ಸರಕಾರ ರೂಪಿಸಿರುವ ‘ಕಲಿಕೆಯಿಂದ ಬದಲಾವಣೆ’ ಸಾಕ್ಷರತಾ ಕಾರ‍್ಯಕ್ರಮ ಮೈಸೂರಿನ ಕೇಂದ್ರ ಕಾರಾಗೃಹದಲ್ಲಿಯೂ ಆರಂಭಗೊಂಡಿದೆ.

 

ಈಗಾಗಲೇ ಬಂದಿಖಾನೆ ನಿವಾಸಿಗಳಿಗೆ ಪ್ರಾಥಮಿಕ ಶಿಕ್ಷಣದಿಂದ ಪದವಿವರೆಗೂ ಶಿಕ್ಷಣ ಕೊಡುವ ವ್ಯವಸ್ಥೆ ಇದೆ. ಆದರೆ ಅನಕ್ಷರಸ್ಥರನ್ನು ಶಿಕ್ಷಿತರನ್ನಾಗಿಸುವ ಉದ್ದೇಶದಿಂದ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ ಹಾಗೂ ಲೋಕ ಶಿಕ್ಷಣ ನಿರ್ದೇಶನಾಲಯ ಸಹಯೋಗದಲ್ಲಿ ಈ ವಿನೂತನ ಕಾರ‍್ಯಕ್ರಮ ಹಮ್ಮಿಕೊಂಡಿದ್ದು, ಕನ್ನಡ ರಾಜ್ಯೋತ್ಸವ ದಿನದಿಂದ ಆರಂಭಗೊಂಡಿದೆ. ಅನಕ್ಷರಸ್ಥ 36 ಮಹಿಳೆಯರು, 407 ಪುರುಷರು ಸೇರಿದಂತೆ 441 ಕಾರಾಗೃಹ ವಾಸಿಗಳಿಗೆ ಪಾಠ ಆರಂಭವಾಗಿದೆ. ಇವರಿಗೆ ಸುಶಿಕ್ಷಿತ ಕೈದಿಗಳೇ ಮೇಷ್ಟ್ರು. ಅನಕ್ಷರಸ್ಥರು ಮತ್ತು ಅರೆ ಅನಕ್ಷರಸ್ಥರು ಎಂಬ ವಿಭಾಗ ಮಾಡಿಕೊಂಡು ಪಾಠ ಮಾಡುವ ವ್ಯವಸ್ಥೆ ರೂಪಿಸಲಾಗಿದೆ. ಇವರಿಗೆ ಪಾಠ ಮಾಡಲು ಶಿಕ್ಷಿತ ಕೈದಿಗಳಿಗೆ ತರಬೇತಿ ನೀಡಲಾಗಿದೆ. ಮೈಸೂರು ಕೇಂದ್ರ ಕಾರಾಗೃಹದಲ್ಲಿ 23 ಮಹಿಳೆಯರು, 192 ಪುರುಷರು ಸೇರಿ 215 ಅನಕ್ಷರಸ್ಥರು. 13 ಮಹಿಳೆಯರು, 213 ಪುರುಷರು ಸೇರಿ 226 ಅರೆ ಅಕ್ಷರಸ್ಥರು ಇದ್ದಾರೆ.

ಬಾಳಿಗೆ ಬೆಳಕು ಪಠ್ಯ
ನಿತ್ಯ 2 ಗಂಟೆ ವಿದ್ಯಾಭ್ಯಾಸ ನಡೆಸಲು ಅವಕಾಶ ಕಲ್ಪಿಸಲಾಗಿದೆ. ವ್ಯಾಸಂಗಕ್ಕೆ ಅನುಕೂಲ ಆಗುವಂತೆ ಲೋಕ ಶಿಕ್ಷಣ ನಿರ್ದೇಶನಾಲಯದಿಂದ ಕಲಿಕಾ ಸಾಮಗ್ರಿ ವಿತರಿಸಲಾಗಿದೆ. 24 ಅಧ್ಯಾಯ ಒಳಗೊಂಡಿರುವ ‘ಬಾಳಿಗೆ ಬೆಳಕು’ ಪುಸ್ತಕದಲ್ಲಿ ಪಠ್ಯವನ್ನು ಬೋಧಿಸಲಾಗುತ್ತದೆ. ಬರವಣಿಗೆ, ಓದು ಮತ್ತು ಸಾಮಾನ್ಯ ಲೆಕ್ಕಾಚಾರ ಹಾಗೂ ಸಾಮಾನ್ಯ ಜ್ಞಾನ ಕಲಿಸುವ ಉದ್ದೇಶ ಈ ಕಾರ‍್ಯಕ್ರಮದ್ದಾಗಿದೆ.

ಎಸ್ಸೆಸ್ಸೆಲ್ಸಿ, ಪದವಿ ಶಿಕ್ಷಣಕ್ಕೂ ಅವಕಾಶ
ಸಾಕ್ಷರತಾ ಕಾರ‍್ಯಕ್ರಮದಲ್ಲಿ ಕಲಿಯುವ ಕೈದಿಗಳಿಗೆ ಮಾರ್ಚ್‌ನಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷೆಯಲ್ಲಿ ಪಾಸಾದವರು ನ್ಯಾಷನಲ್‌ ಓಪನ್‌ ಸ್ಕೂಲ್‌ ಮೂಲಕ ಎಸ್ಸೆಸ್ಸೆಲ್ಸಿಗೆ ದಾಖಲಾಗಬಹುದು. ಬಳಿಕ ಕೆಎಸ್‌ಒಯು (ಕರ್ನಾಟಕ ರಾಜ್ಯ ಮುಕ್ತ ವಿವಿ) ಮತ್ತು ಇಗ್ನೋ ಶಾಖೆ ಮೂಲಕ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನೂ ಮಾಡಬಹುದು ಎನ್ನುತ್ತಾರೆ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಕೆ.ಸಿ.ದಿವ್ಯಶ್ರೀ.

ಕಾಯಂ ಕಲಿಕಾ ಕೇಂದ್ರ ಆರಂಭ
ಕಾರಾಗೃಹ ವಾಸಿಗಳಿಗೆ ಶಿಕ್ಷಣ ನೀಡುವ ಕಾರ‍್ಯಕ್ರಮ ನಿರಂತರವಾಗಿ ನಡೆಯುತ್ತಿದೆ. ಅಕ್ಷರಸ್ಥರು ಪಾಠ ಮಾಡುವ ಹಾಗೂ ಕಾಯಂ ಕಲಿಕಾ ಕೇಂದ್ರ ಆರಂಭವಾಗಿರುವುದು ಈ ವರ್ಷದ ವಿಶೇಷ ಎನ್ನುತ್ತಾರೆ ಮೈಸೂರು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ದಿವ್ಯಶ್ರೀ. ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆ ಎಡಿಜಿಪಿ ಡಾ.ಅಲೋಕ್‌ ಮೋಹನ್‌ ಅವರ ‘ನವಚೇತನ’ ಪರಿಕಲ್ಪನೆಯಡಿ ಕೌಶಲ್ಯ ಮತ್ತು ಶಿಕ್ಷಣದ ಮೂಲಕ ಕೈದಿಗಳ ಮನಃ ಪರಿವರ್ತನೆ ಹಾಗೂ ಸುಧಾರಣೆಗೆ ಪ್ರಯತ್ನ ಮಾಡುತ್ತಿದ್ದೇವೆ. ಈ ಮೂಲಕ ಜೈಲಿನಿಂದ ಬಿಡುಗಡೆಯಾದವರು ಮತ್ತೆ ತಪ್ಪು ಮಾಡದೇ ಉತ್ತಮ ಜೀವನ ರೂಪಿಸಿಕೊಳ್ಳುವಂತೆ ಮಾಡುವುದು ಇದರ ಉದ್ದೇಶ.
ಅಕ್ಷರಸ್ಥ ಕೈದಿಗಳನ್ನು ಬಳಸಿಕೊಂಡು ಅನಕ್ಷರಸ್ಥರಿಗೆ ಪಾಠ ಮಾಡಲು ಸೂಕ್ತ ತರಬೇತಿ ನೀಡಲಾಗುತ್ತಿದೆ. 10 ಮಂದಿಗೆ ಒಬ್ಬ ಬೋಧಕರಂತೆ 40 ಮಂದಿಗೆ ತರಬೇತಿ ನೀಡಲಾಗುವುದು. ಇದಕ್ಕೆ ಬೇಕಾದ ಬೋಧಕರ ಕೈಪಿಡಿ ಹಾಗೂ ಕಲಿಕಾ ಸಾಮಗ್ರಿ ನೀಡಲಾಗಿದೆ.
-ಕೆ.ಎಚ್‌.ಚಂದ್ರಶೇಖರ್‌, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *